ಸಲ್ಲೇಖನ ವ್ರತ ಮಾಡುವುದು ಹೇಗೆ? ಯಾವ ಸ್ಥಿತಿಯಲ್ಲಿ ಯಾರೆಲ್ಲಾ ಅದನ್ನು ಕೈಗೊಳ್ಳಬಹುದು ಇಲ್ಲಿದೆ ಮಾಹಿತಿ

ನಿರಾಹಾರಿಗಳಾಗಿ ಕೈಗೊಳ್ಳುವ ಸಲ್ಲೇಖನವನ್ನು ಆತ್ಮಹತ್ಯೆಗೂ ಹೋಲಿಕೆ ಮಾಡಿ ಅನೇಕರು ಆಕ್ಷೇಪಿಸಿದ್ದೂ ಇದೆ.
ಸಲ್ಲೇಖನ ವ್ರತ ಯಾಕೆ ಕೈಗೊಳ್ಳುತ್ತಾರೆ ಗೊತ್ತೇ? ಯಾವ ಸ್ಥಿತಿಯಲ್ಲಿ ಯಾರೆಲ್ಲಾ ಅದನ್ನು ಕೈಗೊಳ್ಳಬಹುದು ಇಲ್ಲಿದೆ ಮಾಹಿತಿ'
ಸಲ್ಲೇಖನ ವ್ರತ ಯಾಕೆ ಕೈಗೊಳ್ಳುತ್ತಾರೆ ಗೊತ್ತೇ? ಯಾವ ಸ್ಥಿತಿಯಲ್ಲಿ ಯಾರೆಲ್ಲಾ ಅದನ್ನು ಕೈಗೊಳ್ಳಬಹುದು ಇಲ್ಲಿದೆ ಮಾಹಿತಿ'
Updated on
ಸಲ್ಲೇಖನ ಅಥವಾ ಸಂತಾರಾ ಜೈನ ಸಮುದಾಯದಲ್ಲಿ ಕಂಡುವರುವ, ದ್ದೇಶಪೂರ್ವಕವಾಗಿ ಸಾವನ್ನು ಅಪ್ಪುವುದಕ್ಕೆ ಅಣಿಯಾಗಲು ಇರುವ ವ್ರತ.
ನಿರಾಹಾರಿಗಳಾಗಿ ಪರಪಮದವನ್ನು ಸೇರುವುದಕ್ಕೆ ಆ ಸಮುದಾಯ ಶೋಧಿಸಿರುವ ಮಾರ್ಗ ಅದು. ಇತ್ತೀಚೆಗಷ್ಟೇ ಜೈನ ಮುನಿ ತರುಣ ಸಾಗರರೂ ಸಲ್ಲೇಖನ ವ್ರತ ಕೈಗೊಂಡು ತಮ್ಮ 51 ನೇ ವಯಸ್ಸಿನಲ್ಲಿ ದೇಹ ತ್ಯಾಗ ಮಾಡಿದ್ದರು. 
ನಿರಾಹಾರಿಗಳಾಗಿ ಕೈಗೊಳ್ಳುವ ಸಲ್ಲೇಖನವನ್ನು ಆತ್ಮಹತ್ಯೆಗೂ ಹೋಲಿಕೆ ಮಾಡಿ ಅನೇಕರು ಆಕ್ಷೇಪಿಸಿದ್ದೂ ಇದೆ. 2006 ರಲ್ಲಿ ಜೈಪುರ ಮೂಲದ ವಕೀಲ ನಿಖಿಲ್ ಸೋನಿ ಎಂಬುವವರು ಸಲ್ಲೇಖನ ಅಥವಾ ಸಂತಾರಾವನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ದರು. ಶ್ವೇತಾಂಬರ ಜೈನರು ಆಚರಿಸುವ ಸಂತಾರಾ ದಿಗಂಬರರು ಆಚರಿಸುವ ಸಲ್ಲೇಖನ ವ್ರತ ದೇಶದ ಕಾನೂನಿನ ವ್ಯಾಪ್ತಿಯಲ್ಲಿ ಬರುವ ಆರ್ಟಿಕಲ್ 21 ರ ಪ್ರಕಾರ ಜೀವಿಸುವ ಹಕ್ಕನ್ನು ಉಲ್ಲಂಘನೆ ಮಾಡುವ ವ್ರತವಾಗಿದೆ, ಆದ್ದರಿಂದ ಅದನ್ನು ಆತ್ಮಹತ್ಯೆಗೆ ಸಮಾನವಾದದ್ದು ಎಂದು ಪರಿಗಣಿಸಿ ಸಲ್ಲೇಖನವನ್ನು ಅಪರಾಧವೆಂದು ಪರಿಗಣಿಸಬೇಕೆಂದು ವಾದ ಮಾಡಿದ್ದರು. 
ಆದರೆ ಪರಂಪರೆಯಿಂದ ಬಂದಿರುವ ಆಚರಣೆಯನ್ನು ಸಮರ್ಥಿಸಿಕೊಂಡಿದ್ದ ಜೈನ ಸಮುದಾಯ ಕೋರ್ಟ್ ನಲ್ಲಿ ಸಮರ್ಥವಾದ ಮುಂದಿಟ್ಟಿತ್ತು. ಸಲ್ಲೇಖನ ವ್ರತ ಸ್ವಯಂ ಶುದ್ಧೀಕರಣಕ್ಕಾಗಿ ಇರುವ ಧಾರ್ಮಿಕ ಆಚರಣೆ. ಸುಖಾ ಸುಮ್ಮನೆ ಮನಸ್ಸಿಗೆ ಅನ್ನಿಸಿದ ತಕ್ಷಣಕ್ಕೆ ಸಲ್ಲೇಖನ ವ್ರತವನ್ನು ಯಾರೂ ಕೈಗೊಳ್ಳಲು ಸಾಧ್ಯವಿಲ್ಲ, ಅದಕ್ಕೆ ಅವಕಾಶವೂ ಇಲ್ಲ. ಯಾರು ಜೀವನದಲ್ಲಿ ತನ್ನ ಜೀವಿತದ ಎಲ್ಲಾ ಉದ್ದೇಶಗಳನ್ನು ಈಡೇರಿಸಿರುವ ತೃಪ್ತಿ ಹೊಂದಿರುತ್ತಾರೋ, ಇನ್ನು ಈ ದೇಹದ ಮೂಲಕ ಯಾವುದೇ ಉದ್ದೇಶಗಳೂ ಈಡೇರುವ ಅಗತ್ಯವಿಲ್ಲ ಎಂದು ಅನಿಸುತ್ತದೋ ಅಂಥವರು ಮಾತ್ರ ಸಂತಾರಾ ಅಥವಾ ಸಲ್ಲೇಖನ ವ್ರತವನ್ನು ಕೈಗೊಳ್ಳಬಹುದು, ಆದ್ದರಿಂದ ಸಲ್ಲೇಖನವನ್ನು ಆತ್ಮಹತ್ಯೆ ಅಂತಲಾಗಲೀ ಸ್ವಯಂ ಸಾವನ್ನು ಬಯಸುವುದು ಅಂದಾಗಲೀ ಹೇಳಲು ಸಾಧ್ಯವಿಲ್ಲ. ಆದರೆ ಜೀವಿತದ ಉದ್ದೇಶವನ್ನು ಈಡೇರಿಸಿರುವವರು ಸಾವನ್ನು ಎದುರುಗೊಳ್ಳುವ ವಿಧಾನ ಎಂದು ವಾದಿಸಿತ್ತು. ನಂತರ ಕೋರ್ಟ್ ಸಹ ಸಲ್ಲೇಖನವನ್ನು ಜೈನ ಧರ್ಮದಲ್ಲಿ ಪಾಲಿಸಲೇಬೇಕಾದ ಕಡ್ಡಾಯ ವ್ರತ ಎಂದು ಹೇಳಲು ಸಾಧ್ಯವಿಲ್ಲ ಎಂದಿತ್ತು. ಈ ಬಳಿಕ ಜೈನ ಸಮುದಾಯ ಕೋರ್ಟ್ ನ ತೀರ್ಪಿನ ಬಗ್ಗೆಯೂ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಿತ್ತು. 
ಜೈನ ಸಮುದಾಯ ಕೋರ್ಟ್ ನಲ್ಲಿ ಹೇಳಿದ್ದಂತೆ, ಸಲ್ಲೇಖನ ಅಥವಾ ಸಂತಾರಾ ಯಾರು ಬೇಕಾದರೂ ಕೈಗೊಳ್ಳಬಹುದಾದ ವ್ರತವಲ್ಲ. ಅನಾರೋಗ್ಯದಿಂದ ಬಳಲುತ್ತಿರುವವರು, ಅಥವಾ ಸಾವಿನ ಸನಿಹದಲ್ಲಿರುವವರು ಜೀವಿತದ ಉದ್ದೇಶವನ್ನು ಈಡೇರಿಸಿರುವವರು ಕೈಗೊಳ್ಳಬಹುದಾಗಿರುವುದಾಗಿದ್ದು ಅಪರೂಪದಲ್ಲಿ ಕೆಲವೇ ಮಂದಿ ಸಾಧು ಸಂತರು ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ. ಹಾಗಂತ ಅವರೇನು ದಿಢೀರನೆ ಎಲ್ಲಾ ರೀತಿಯ ಆಹಾರಗಳನ್ನು ಬಿಟ್ಟು ಉಪವಾಸ ಕುಳಿತುಬಿಡುವುದಿಲ್ಲ. ಅದಕ್ಕೂ ಒಂದು ಕ್ರಮವಿದೆ. ಪ್ರಾರಂಭದಲ್ಲಿ ಘನ ಆಹಾರವನ್ನು ತ್ಯಜಿಸುತ್ತಾರೆ, ನಂತರ ದ್ರವರೂಪದಲ್ಲಿರುವ ಆಹಾರ, ಕೊನೆಗೆ ನೀರನ್ನೂ ತ್ಯಜಿಸಿ ದೇಹವನ್ನು ಅಂತ್ಯಗೊಳಿಸಿಬಿಡುತ್ತಾರೆ. ಸಲ್ಲೇಖನ ವ್ರತಕ್ಕೆ ಪುರಾತನ ಇತಿಹಾಸವೂ ಇದ್ದು ರಾಜ ಮಹಾರಾಜರು ಸಲ್ಲೇಖನ ವ್ರತ ಕೈಗೊಂಡಿದ್ದ ಉದಾಹರಣೆಗಳಿವೆ. ಭಾರತ ಕಂಡ ಅತ್ಯಂತ ಸಮರ್ಥ ಅರಸುಗಳಲ್ಲಿ ಒಬ್ಬನಾದ ಚಂದ್ರಗುಪ್ತ ಮೌರ್ಯ ಕರ್ನಾಟಕದ ಶ್ರವಣಬೆಳಗೊಳದಲ್ಲಿರುವ ಚಂದ್ರಗಿರಿಯಲ್ಲಿ ಸಲ್ಲೇಖನ ವ್ರತ ಕೈಗೊಂಡು ತನ್ನ ದೇಹಾಂತ್ಯ ಮಾಡಿದ್ದ. ಇನ್ನು ಅಖಂಡ ಜೈನ ಸಂಪ್ರದಾಯದ ಆಚಾರ್ಯರಾಗಿದ್ದ ಭದ್ರಬಾಹು ಸಹ ಸಲ್ಲೇಖನ ರೀತಿಯಲ್ಲೇ ದೇಹಾಂತ್ಯ ಮಾಡಿದ್ದರು. 
ಜೈನ ಸಮುದಾಯದ ಆದಿಯಿಂದಲೂ ಸಲ್ಲೇಖನ ವ್ರತ ಇದೆ. ಜೈನರು ಸಲ್ಲೇಖನ ಕೈಗೊಳ್ಳುವುದಕ್ಕೆ ಮತ್ತೊಂದು ಪ್ರಧಾನ ಕಾರಣವೆಂದರೆ ಅದು ಕರ್ಮ. ಆಹಾರ ಸೇವನೆಯೂ ಸೇರಿ ಜೈನರ ನಂಬಿಕೆಯ ಪ್ರಕಾರ ಪ್ರತಿಯೊಂದೂ ಕ್ರಿಯೆಯೂ ಕರ್ಮಕ್ಕೆ ಸಂಬಂಧಿಸಿದ್ದಾಗಿದೆ. ಸಸ್ಯಗಳಿಗೂ ಜೀವವಿದೆ ಎಂದು ನಂಬಿರುವ ಜೈನರು ತರಕಾರಿ, ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ನೋವಾಗುತ್ತದೆ ಎಂದು ಭಾವಿಸತ್ತಾರೆ. ಹೀಗಾಗಿ ಅವುಗಳ ಸೇವನೆಯೂ ವರ್ಜ್ಯವೆನ್ನಿಸಿದೆ. ಸಸ್ಯಾಹಾರ ಸೇವನೆಯಿಂದ ಸಸ್ಯಗಳಿಗೆ ನೋವನ್ನು ಉಂಟು ಮಾಡಿದಂತೆ. ನೀರಿನಲ್ಲಿಯೂ ಸೂಕ್ಷ್ಮ ಜೀವಿಗಳಿರುವುದರಿಂದ ನೀರು ಕುಡಿಯುವುದು ಕೂಡ ನಕಾರಾತ್ಮಕ ಕರ್ಮಕ್ಕೆ ಕಾರಣ ಎಂಬುದು ಸಲ್ಲೇಖನ ಕೈಗೊಂಡವರ ನಂಬಿಕೆಯಾಗಿರುತ್ತದೆ. ದೇಹ ತ್ಯಾಗದ ವೇಳೆ ಹಳೆಯ ಕರ್ಮದ ಪಾಪದಿಂದ ದೇಹವನ್ನು ಶುದ್ಧೀಕರಿಸಿ ಮೋಕ್ಷ ಸಾಧಿಸಲು ಜೈನರು ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ ಎಂದೂ ಹೇಳಲಾಗುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com