
ನಮ್ಮಲ್ಲಿ ಯಾವ ದಿನ ಒಳ್ಳೆಯದು, ಕೆಟ್ಟದು ಎಂಬುದೇ ಇಲ್ಲ, ಅಮಾವಾಸ್ಯೆ, ಹುಣ್ಣಿಮೆ ಪ್ರತಿಯೊಂದು ತಿಥಿಯೂ ಭಗವಂತನ ಒಂದು ಸೃಷ್ಟಿ, ಈ ಜಗತ್ತಿನಲ್ಲಿ ಯಾವುದೂ ತಿರಸ್ಕಾರವಾದದ್ದಿಲ್ಲ, ಅದೆಲ್ಲ ಮನುಷ್ಯನ ಮನಸ್ಸಿನ ಭ್ರಮೆ. ಯಾವತ್ತೂ ಆ ಬೇಧ ಇಟ್ಟುಕೊಳ್ಳಬಾರದು. ಎಲ್ಲವೂ ಪೂಜ್ಯವೇ, ಯಾವ ದಿನ ಯಾವುದಕ್ಕೆ ಸರಿ ಎಂಬುದನ್ನು ನಾವು ನಿಶ್ಚಯ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಯಾ ದಿನದಲ್ಲಿ ಮಾಡುವ ಶುಭ-ಅಶುಭ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎನ್ನುತ್ತಾರೆ ಆಧ್ಯಾತ್ಮ ಚಿಂತಕಿ ಡಾ ಆರತಿ.
ಸಾಮಾನ್ಯವಾಗಿ ಮದುವೆ, ಮುಂಜಿ, ಗೃಹ ಪ್ರವೇಶ, ಹೊಸ ಕೆಲಸಕ್ಕೆ ಅಣಿಯಾಗುವಾಗ ಇಂತಹ ವಿಚಾರಗಳಲ್ಲಿ ಸಾಮಾನ್ಯವಾಗಿ ತಿಥಿ, ವಾರ, ನಕ್ಷತ್ರಗಳನ್ನು ನೋಡುತ್ತಾರೆ. ನಮ್ಮ ಪ್ರಾಂತ್ಯದಲ್ಲಿ ವೃದ್ಧಿ ಕಾರ್ಯಗಳಿಗೆ ಅಮಾವಾಸ್ಯೆ ದಿನ ಮಾಡುವುದಿಲ್ಲ.
ಒರಿಸ್ಸಾ, ಪಶ್ಚಿಮ ಬಂಗಾಳ ಕಡೆಗಳಲ್ಲಿ ಅವರಿಗೆ ಅಮಾವಾಸ್ಯೆ ತುಂಬಾ ಶ್ರೇಷ್ಟ. ತಮಿಳುನಾಡಿನಲ್ಲಿ ಆಡಿ ಮಾಸದಲ್ಲಿ ಮದುವೆಗಳನ್ನು ಮಾಡುತ್ತಾರೆ. ಯಾವ ಕೆಲಸಕ್ಕಾಗಿ, ಯಾವ ಕರ್ಮಕ್ಕಾಗಿ ಎಂದು ದಿನ ನೋಡುವುದಿದೆಯೇ ಹೊರತು ದಿನಗಳಲ್ಲಿ ಶುಭದಿನ, ಅಶುಭ ದಿನ ಎಂದಿಲ್ಲ ಎಂದು ಡಾ ಆರತಿ ಹೇಳುತ್ತಾರೆ.
ಅಮಾವಾಸ್ಯೆ ಅಶುಭ ಎಂದು ಹೇಳುತ್ತಾರಾದರೂ, ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ಮಹತ್ವ ಇದೆ. ಭೀಮನ ಅಮಾವಾಸ್ಯೆಯಂದು ಸುಮಂಗಲಿಯರು ತಮ್ಮ ಮಾಂಗಲ್ಯ ರಕ್ಷಣೆಗಾಗಿ ಪತಿಯ ಆಯುರಾರೋಗ್ಯಕ್ಕಾಗಿ ಪೂಜೆ ಮಾಡುತ್ತಾರೆ. ಇನ್ನು ಮಹಾಲಯ ಅಮಾವಾಸ್ಯೆಯ ಪಿತೃಗಳ ಕಾರ್ಯ ಮಾಡಲು, ಪಿತೃಗಳನ್ನು ನೆನೆಯುವ ದಿನ. ದೀಪಾವಳಿ ಅಮಾವಾಸ್ಯೆ ದಿನ ಧನ ಲಕ್ಷ್ಮೀ ಪೂಜೆ ಮಾಡುತ್ತಾರೆ. ಮನೆಯಲ್ಲಿರುವ ಹಣವನ್ನೂ, ಚಿನ್ನವನ್ನು, ಕಲಶವನ್ನಿಟ್ಟು ಲಕ್ಷ್ಮಿಯನ್ನು ಇನ್ನಷ್ಟು ಸಂಪತ್ತು, ಐಶ್ವರ್ಯ ಕರುಣಿಸುವಂತೆ ಬೇಡುತ್ತಾರೆ.
Advertisement