ನರಕಾಸುರ ಭೂಮಿ ಪುತ್ರ, ದುಷ್ಟನಾದ ನರಕಾಸುರನನ್ನು ಕೃಷ್ಣ ಸಂಹಾರ ಮಾಡಿ ಭೂಮಿಯಲ್ಲಿ ಸುಟ್ಟಾಗ ದೇಹ ರಾಸಾಯನಿಕವಾಗಿ ಬಣ್ಣಬಣ್ಣವಾಗಿ ಸಿಡಿಯಿತು. ಅದರ ಪ್ರತೀಕವಾಗಿ ದೀಪಾವಳಿ ಸಮಯದಲ್ಲಿ ಪಟಾಕಿ ಹಚ್ಚುವುದು ಎಂದು ಉತ್ತರ ಭಾರತದ ಕಡೆ ಜಾನಪದ ಕಥೆ ಪ್ರಚಲಿತದಲ್ಲಿದೆ.
ಇನ್ನೊಂದು, ಪಿತೃಪಕ್ಷದಲ್ಲಿ ಪಿತೃಗಳೆಲ್ಲ ಭೂಮಿಗೆ ಬಂದಿರುತ್ತಾರೆ, ದೀಪಾವಳಿ ಮುಗಿಸಿಕೊಂಡು ಹೊರಡುವ ಪಿತೃಗಳಿಗೆ ಪಿತೃಲೋಕಕ್ಕೆ ದಾರಿ ತೋರಿಸಲು ಉಲ್ಕಾದಾನ ಮಾಡುವುದು ಎಂಬರ್ಥವಿದೆ. ಆಕಾಶಬುಟ್ಟಿಗಳನ್ನು, ದೀಪಗಳನ್ನು, ಪಟಾಕಿಗಳನ್ನು ಹಚ್ಚಿ ಬೆಳಕು ಮೂಡಿಸಿ ಪಿತೃಗಳಿಗೆ ದಾರಿ ತೋರಿಸುವುದು ಎಂಬ ಸಂಕೇತವಿದೆ. ಕಾಲಾಂತರದಲ್ಲಿ ಇದು ಪ್ರಸಿದ್ಧವಾಗಿ ಬಹುವಿಧ ಆಯಾಮ ಪಡೆದುಕೊಂಡು ಪಟಾಕಿ ಹಚ್ಚುವುದು ಪ್ರತೀತಿಯಾಗಿ ಬಂತು.
ವನವಾಸ ಮುಗಿಸಿ ಶ್ರೀರಾಮ ಅಯೋಧ್ಯೆಗೆ ಬಂದಾಗ ಪ್ರಜೆಗಳು ಪಟಾಕಿ ಹಚ್ಚಿ ಸಂಭ್ರಮಿಸಿ ಸ್ವಾಗತಿಸುವ ದಿನವೇ ದಿಪಾವಳಿ ಎಂಬ ಕಥೆ ಕೂಡ ಪ್ರಚಲಿತದಲ್ಲಿದೆ. ಹೀಗೆ ಪುರಾಣ, ವೇದ ಕಾಲದಿಂದಲೂ ದೀಪಾವಳಿ ಸಮಯದಲ್ಲಿ ಪಟಾಕಿ ಹಚ್ಚುವುದಕ್ಕೆ ಪ್ರಾಶಸ್ತ್ಯ, ಪದ್ಧತಿಯಿದೆ. ಸಂಭ್ರಮ, ಗೆಲುವಿನ ಸಂಕೇತವನ್ನು ಪಟಾಕಿ ಹಚ್ಚುವ ಮೂಲಕ ವ್ಯಕ್ತಪಡಿಸುವ ಪದ್ಧತಿ ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ನಮ್ಮಲ್ಲಿ ಪಟಾಕಿಯನ್ನು ಕಾಮನ ಹುಣ್ಣಿಮೆ, ದಸರಾ ಸಂದರ್ಭ ಮತ್ತು ದೀಪಾವಳಿ ಸಮಯದಲ್ಲಿ ನಾಲ್ಕೈದು ದಿನ ಬಹಳ ದೊಡ್ಡ ಮಟ್ಟದಲ್ಲಿ ಹಚ್ಚುತ್ತಾರೆ.
Advertisement