ಬಸವಣ್ಣ
ಬಸವಣ್ಣ

ಬಸವೇಶ್ವರ ಜಯಂತಿ, ಅಕ್ಷಯ ತೃತೀಯ: ಜಗದ್ಗುರು ಬಸವಣ್ಣನವರ ತತ್ವಗಳನ್ನು ಅಕ್ಷಯವಾಗಿಸೋಣ...

ನಾಡಿನಾದ್ಯಂತ ಬಸವಜಯಂತಿ ಹಾಗೂ ಅಕ್ಷಯ ತೃತೀಯವನ್ನು ಆಚರಿಸಲಾಗುವುದು ಮತ್ತೊಂದು ವಿಶೇಷದ ಸಂಗತಿ. 
Published on

ಹಿಂದೂ ಪಂಚಾಗದ ಪ್ರಕಾರ ಎರಡನೇ ಮಾಸವಾಗಿರುವ ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆ (ತೃತೀಯ)ಯ ದಿನವನ್ನು ಅಕ್ಷಯ ತೃತೀಯ ಎಂದು ಆಚರಿಸಲ್ಪಡುತ್ತದೆ. ಈ ಮಾಸದಲ್ಲಿ ಗಂಗಾ ಪೂಜ (ಶುಕ್ಲ ಸಪ್ತಮಿ) ಮೋಹಿನೀ ಏಕಾದಶಿ (ಶುಕ್ಲ ಏಕಾದಶಿ) ಬುದ್ಧ ಜಯಂತಿ; ವೈಶಾಖ ಸ್ನಾನ ಸಮಾಪ್ತಿ (ಹುಣ್ಣಿಮೆ) ಅಪರಾ ಏಕಾದಶಿ (ಕೃಷ್ಣ ಏಕಾದಶಿ) ಮುಂತಾದ ಧಾರ್ಮಿಕ ಆಚರಣೆಗಳನ್ನು ಶ್ರದ್ಧಾ-ಭಕ್ತಿಗಳಿಂದ ಮಾಡಲಾಗುತ್ತದೆ.

ವೈಶಾಖ ಮಾಸಕ್ಕೂ ತ್ರೇತಾಯುಗದ ಹಲವು ಘಟನೆಗಳಿಗೂ ಇದೆ ನಂಟು

ಪುರಾಣಗಳ ಪ್ರಕಾರ ವೈಶಾಖ ಮಾಸದಲ್ಲೇ ತ್ರೇತಾ ಯುಗ ಪ್ರಾರಂಭವಾಗಿದ್ದೂ ಎಂಬ ನಂಬಿಕೆಯೂ ಇದೆ. 

ಸೂರ್ಯವಂಶದ ರಾಜ ಭಗೀರಥ ಶಾಪಕ್ಕೆ ಗುರಿಯಾಗಿ ಬೂದಿಯಾಗಿದ್ದ ತನ್ನ ಪೂರ್ವಜರ ಆತ್ಮಕ್ಕೆ ಶಾಂತಿಯನ್ನುಂಟುಮಾಡಲು ದೇವಗಂಗೆಯನ್ನು ಭೂಮಿಗೆ ತರುವ ತಪಸ್ಸನ್ನಾಚರಿಸಿದ್ದ. ಅದು ಫಲಿಸಿ, ಭಗೀರಥನ ಪೂರ್ವಜರ ಆತ್ಮಗಳನ್ನು ಶುದ್ಧೀಕರಿಸುವಂತೆ ಶಿವ ಗಂಗೆಗೆ ಆದೇಶಿಸಿದ ದಿನವೂ ವೈಶಾಖ ಮಾಸದಲ್ಲೇ ಬರುವುದರಿಂದ ಶುಕ್ಲ ಸಪ್ತಮಿಯ ದಿನದಂದು ಗಂಗಾ ಪೂಜೆ, ಗಂಗಾ ಸಪ್ತಮಿಯ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. 

ಪರಶುರಾಮ ಜಯಂತಿ

ಪರಶುರಾಮ ತ್ರೇತಾಯುಗದಲ್ಲಿ ಬರುವ ವಿಷ್ಣುವಿನ 6 ನೇ ಅವತಾರ, ಭಾರ್ಗವ ರಾಮ ಎಂದೂ ಕರೆಸಿಕೊಳ್ಳುವ ಪರಶುರಾಮ ಜಯಂತಿಯೂ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನಂದೇ ಬರುತ್ತದೆ. ಅಧರ್ಮ ಮಾರ್ಗ ಹಿಡಿದಿದ್ದ ಅಂದಿನ ಭೂಪಾಲಕರನ್ನು ಶಿಕ್ಷಿಸಿ ಧರ್ಮವನ್ನು ಕಾಪಾಡಿದ್ದಕ್ಕಾಗಿ ಪರಶುರಾಮನನ್ನು ಸ್ಮರಿಸಲಾಗುತ್ತದೆ.

ವೈಶಾಖ ಮಾಸದಲ್ಲಿ ಹಿಂದೂಧರ್ಮದ ಉದ್ಧಾರಕ್ಕಾಗಿ ಅವತರಿಸಿದ ಬಸವೇಶ್ವರ, ಶಂಕರ, ವಿದ್ಯಾರಣ್ಯ, ಪರಶುರಾಮ, ವೇದವ್ಯಾಸ ಜಯಂತಿ, ಮುಂತಾದ ಸಮಾಜೋದ್ಧಾರಕರ ಜಯಂತಿ ಆಚರಣೆ ನಡೆಯಲಿದೆ. ಅದರಲ್ಲಿಯೂ ಅಕ್ಷಯ ತೃತೀಯ ಹಿಂದೂಗಳ ಪಾಲಿಗೆ ಹೊಸತನ್ನು ಪ್ರಾರಂಭಿಸುವುದಕ್ಕೆ ಇರುವ ಪ್ರಶಸ್ತವಾದ ದಿನ. 

ಜಗದ್ಗುರು ಬಸವೇಶ್ವರರ ಜಯಂತಿ

ಅಕ್ಷಯ ತೃತ್ರೀಯ ದಿನದಂದು ಏನನ್ನೇ ಮಾಡಲಿ ಅದು ಅಕ್ಷಯವಾಗಲಿದೆ ಎಂಬ ನಂಬಿಕೆ ಇದೆ. ಆದ್ದರಿಂದ ಉಪಕಾರ ಮಾಡುವುದು, ಸಂಪತ್ತು ಗಳಿಸುವುದು, ಪೂಜೆ-ಪುನಸ್ಕಾರಗಳನ್ನು ಮಾಡುವುದಕ್ಕೆ ಅಕ್ಷಯ ತೃತೀಯ ದಿನದಂದು ವಿಶೇಷ ಮಹತ್ವವಿದೆ. ನಾಡಿನಾದ್ಯಂತ ಬಸವಜಯಂತಿ ಹಾಗೂ ಅಕ್ಷಯ ತೃತೀಯವನ್ನು ಆಚರಿಸಲಾಗುವುದು ಮತ್ತೊಂದು ವಿಶೇಷದ ಸಂಗತಿ. 

ಪ್ರತಿಯೊಂದು ಜೀವಿಯ ಆತ್ಮೋದ್ಧಾರಕ್ಕೆ ಮಾರ್ಗ ತೋರಿದ ಗುರು ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ಮುಂದಾದ ಉದಾತ್ತ ತತ್ವಗಳನ್ನು ಭೋಧಿಸಿದ ಮಹಾನ್ ವ್ಯಕ್ತಿ. ಅಂದಿನ ಕಾಲಕ್ಕೆ ಒಂದು ದೇಶದ ಪ್ರಧಾನಿಯಾಗಿದ್ದುಕೊಂಡು ಪ್ರಜಾಪ್ರಭುತ್ವ, ಕಾಯಕಕ್ಕೆ ಪ್ರಧಾನ ಆಧ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ಗುರು ಎಂದರೂ ತಪ್ಪಾಗುವುದಿಲ್ಲ. ಬಸವಣ್ಣನವರು ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರ ಸೀಮಿತಗೊಳಿಸದೇ ಭಕ್ತಿ ಮತ್ತು ರಾಜತಂತ್ರವನ್ನು ಜೊತೆ ಜೊತೆಗೇ ನಡೆಸಲು ಪ್ರೇರಕ ಶಕ್ತಿಯಾದ ಮಾರ್ಗದರ್ಶಕ, ಚೈತನ್ಯವೂ ಹೌದು.

ಭಾರತೀಯ ಸನಾತನ ಧರ್ಮ ಹೇಳಿದ್ದ "ಭಗವಂತ ನಿನ್ನಲ್ಲೇ ಇದ್ದಾನೆ" ಎಂಬುದನ್ನು ಬಸವಣ್ಣನವರು ಶರೀರವೇ ದೇವಸ್ಥಾನ, ಶಿರವೇ ಹೊನ್ನ ಕಲಶ ಎಂದು ಸಾಮಾನ್ಯರಿಗೂ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದರು. ಅಂದಿನ ಭಕ್ತಿ ಭಂಡಾರಿ ಬಸವಣ್ಣವರ ಆಚಾರ-ವಿಚಾರ ಎಂದೆಂದಿಗೂ ಪ್ರಸ್ತುತವಾದ ತತ್ವಗಳಾಗಿವೆ.12 ನೆಯ ಶತಮಾನದ ಭಾರತೀಯ ಸ್ತ್ರೀ ಪ್ರಮುಕಹವಾಗಿ ಕರ್ನಾಟಕದ ಸ್ತ್ರೀಯರ ಇತಿಹಾಸದಲ್ಲಿ ಮಹತ್ತರ ಬದಲಾವಣೆಯಾದ ಕಾಲಘಟ್ಟ ಎಂದರೆ ಅದಕ್ಕೆ ಬಸವಯುಗದ ಕಲ್ಯಾಣ ಕ್ರಾಂತಿಯ ಪ್ರಭಾವ ಹೆಚ್ಚಾಗಿತ್ತು. ಸ್ತ್ರೀಯರಿಗೆ ಸಮಾನ ಸ್ಥಾನ ನೀಡಿ ಪುರುಷರೆತ್ತರಕ್ಕೆ ಏರುವಂತಹ ವಾತಾವರಣ ಕಲ್ಪಿಸಿದ ಬಸವಣ್ಣನವರನ್ನು “ಸ್ತ್ರೀ ಉದ್ಧಾರಕ” ನೆಂದು ಅನೇಕರು ಹೊಗಳಿದ್ದಾರೆ.

ಬಸವಣ್ಣನವರು ಚಿಕ್ಕಂದಿನಿಂದಲೇ ಕ್ರಾಂತಿಕಾರಿ ಎಂದು ಸಾಬೀತು ಪಡಿಸಿದ್ದು ಅವರ ಉಪನಯನ ಸಂಸ್ಕಾರದ ಘಟನೆಯಿಂದಲೇ ಕ್ರಾಂತಿಗೆ ಮುಂದಾಗುತ್ತಾರೆ. ಅಕ್ಕ ನಾಗಮ್ಮನಿಗೆ ಉಪನಯನ ಸಂಸ್ಕಾರ ಇಲ್ಲವೆಂದಾಗ, ಬಸವ “ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ” ಎಂದು ಅದನ್ನು ನಿರಾಕರಿಸಿ ತನ್ನ ಸಹೋದರಿಗಿಲ್ಲದ್ದು ನನಗೂ ಬೇಡ, ಎಂತಹ ಆದರ್ಶ ಸಹೋದರ. ಅದರಂತೆ ಬಸವಣ್ಣ ಮನೆಯನ್ನು ತೊರೆದು ಹೊರಟಾಗ ಅಕ್ಕ ನಾಗಮ್ಮ “ಬಸವನಿಲ್ಲದ ಮನೆಯಲ್ಲಿ ನಾನೂ ಇರಲಾರೆ” ಅನ್ನುವಲ್ಲಿ ಸಹೋದರಿ ಪ್ರೀತಿ ಮಿಂಚುತ್ತಿದೆ. ಮೊದಲು ಸ್ತ್ರೀಯರಿಗೆ ಕೇವಲ ವಿವಾಹ ಒಂದೇ ಮುಖ್ಯ ಸಂಸ್ಕಾರವಾಗಿತ್ತು. ಪತಿಯ ಸಹಾಯವಿಲ್ಲದೇ ಯಾವುದೇ ಧಾರ್ಮಿಕ ಕಾರ್ಯಗಳನ್ನು ಸ್ತ್ರೀಯರಿಗೆ ಮಾಡುವ ಅಧಿಕಾರ ವಿರಲಿಲ್ಲ. ಆದರೆ ಬಸವಣ್ಣನವರು ಲಿಂಗದೀಕ್ಷೆ, ವಿಭೂತಿಧಾರಣ, ಮಂತ್ರ ಪಠಣ ಮೊದಲಾದ ಧಾರ್ಮಿಕ ವಿಧಿಗಳಲ್ಲಿ ಪುರುಷನಷ್ಟೇ ಅಧಿಕಾರವನ್ನು ಅವಳಿಗೂ ಕೊಟ್ಟರು. ಪ್ರಧಾನಿಯಾಗಿದ್ದ ಬಸವಣ್ಣನವರಲ್ಲಿ ರಾಜಕಳೆ ಹಾಗೂ ಗುರು ಬಸವೇಶ್ವರರಲ್ಲಿ ಸಾತ್ವಿಕ ಕಳೆ ಎರಡನ್ನೂ ಕಾಣಬಹುದು ಇಂದು ಸಮಾಜದ ಆರೋಗ್ಯಕರ ಬಳವಣಿಗಗೆ ದುಡಿದ ಕಾಯಕ ಯೋಗಿಯಾದ ಬಸವಣ್ಣನವರ ಜಯಂತಿ ಹಾಗೂ ಅಕ್ಷಯ ತೃತೀಯ ಅವರ ತತ್ವಗಳು ಸಾರ್ವಕಾಲಿಕವಾಗಿ ಅಕ್ಷಯವಾಗಲಿ ಎಂದು ಆಶಿಸೋಣ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com