

ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಗ್ರಹದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚಾಗಿರುತ್ತದೆ ಎಂಬ ನಂಬಿಕೆಯಿದೆ.
ಮಹರ್ಷಿ ವೇದ ವ್ಯಾಸರು ಜನಿಸಿದ ಈ ದಿನವನ್ನು ವ್ಯಾಸ ಜಯಂತಿ ಅಥವಾ ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. 2026ರ ಗುರು ಪೂರ್ಣಿಮಾ ದಿನದಂದು ನೀವು ನಿಮ್ಮ ಗುರುಗಳಿಗೆ, ಹಿರಿಯರಿಗೆ ಕೃತಜ್ಞತೆ ಸಲ್ಲಿಸುವುದು ಪ್ರಮುಖವಾಗಿದೆ. ಮಹಾಭಾರತ, ವೇದಗಳು ಮತ್ತು ಪುರಾಣಗಳನ್ನು ವಿಂಗಡಿಸಿ ಲೋಕಕ್ಕೆ ನೀಡಿದ ಮಹರ್ಷಿ ವೇದವ್ಯಾಸರ ಸ್ಮರಣೆಗಾಗಿ ಈ ದಿನವನ್ನು 'ವ್ಯಾಸ ಪೂರ್ಣಿಮೆ' ಎಂದು ಆಚರಿಸಲಾಗುತ್ತದೆ.
ಯೋಗ ಪರಂಪರೆಯಲ್ಲಿ ಶಿವನು ಸಪ್ತರ್ಷಿಗಳಿಗೆ ಪ್ರಥಮವಾಗಿ ಯೋಗ ವಿದ್ಯೆಯನ್ನು ಧಾರೆ ಎರೆದು ಆದಿಗುರುವಾದ ದಿನವೆಂದು ನಂಬಲಾಗಿದೆ. ಹಾಗೆಯೇ ಗೌತಮ ಬುದ್ಧನು ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶವನ್ನು ನೀಡಿದ ದಿನವಾಗಿ ಬೌದ್ಧರು ಇದನ್ನು ಆಚರಿಸುತ್ತಾರೆ.
'ಗು' ಅಂದರೆ ಅಜ್ಞಾನ ಅಥವಾ ಕತ್ತಲು, 'ರು' ಅಂದರೆ ಅದನ್ನು ದೂರ ಮಾಡುವವರು ಎಂದರ್ಥ. ಜೀವನದಲ್ಲಿ ಅಂಧಕಾರ ಕಳೆದು ದಾರಿ ತೋರಿಸುವವರು ಗುರು. ನಮಗೆ ವಿದ್ಯಾಬುದ್ಧಿ, ಸಂಸ್ಕಾರ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಮತ್ತು ಗುರುಗಳಿಗೆ ಗೌರವ ಸಲ್ಲಿಸುವ ದಿನವಾಗಿದೆ.
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮಃ
ಇದು ಪ್ರಮುಖ ಶ್ಲೋಕವಾಗಿದೆ. ಈ ಶ್ಲೋಕವನ್ನು ಪಠಿಸುವ ಮೂಲಕ ಗುರುಗಳ ಆಶೀರ್ವಾದ ಪಡೆಯಬಹುದಾಗಿದೆ. ಅಜ್ಞಾನದ ಬಂಧನದಿಂದ ಬಿಡುಗಡೆಗೊಳಿಸಿ, ನಮ್ಮ ನಿಜವಾದ ‘ಆತ್ಮ ಸ್ವರೂಪ’ವನ್ನು ದರ್ಶನ ಮಾಡಿಸುವುದೇ ಗುರುವಿನ ಪರಮೋಚ್ಛ ಗುರಿ. ಆದ್ದರಿಂದಲೇ, ಭಗವಂತನಿಗಿಂತಲೂ ಮುಂಚಿತವಾಗಿ ಗುರುವಿಗೆ ಮೊದಲ ನಮನ ಸಲ್ಲಿಸಬೇಕೆಂದು ನಮ್ಮ ಸಂಸ್ಕೃತಿ ಬೋಧಿಸುತ್ತದೆ. ಈ ಶುಭ ಗುರು ಪೂರ್ಣಿಮೆಯಂದು ನಮ್ಮ ಜೀವನಕ್ಕೆ ಜ್ಞಾನದ ಬೆಳಕು ನೀಡಿ, ಸರಿ-ತಪ್ಪುಗಳ ದಾರಿ ತೋರಿದ ಸಕಲ ಗುರುಪರಂಪರೆಗೆ ಕೋಟಿ ಕೋಟಿ ಪ್ರಣಾಮಗಳು.
ಇನ್ನೂ ನಿಮ್ಮ ಜನ್ಮ ಕುಂಡಲಿಯಲ್ಲಿ ಗುರು ಗ್ರಹವು ದುರ್ಬಲವಾಗಿದ್ದು, ಜೀವನದಲ್ಲಿ ಸತತ ಅಡೆತಡೆಗಳು ಎದುರಾಗುತ್ತಿದ್ದರೆ ಗುರು ಪೂರ್ಣಿಮೆಯ ದಿನ ಮಾಡುವ ಕೆಲವು ಸಾಂಪ್ರದಾಯಿಕ ಪರಿಹಾರಗಳು ಅತ್ಯಂತ ಫಲಪ್ರದವಾಗುತ್ತವೆ ಎಂಬ ನಂಬಿಕೆಯಿದೆ. ವಿಶೇಷವಾಗಿ ಉದ್ಯೋಗದಲ್ಲಿ ಬಡ್ತಿ ಸಿಗದಿರುವುದು, ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಹಾಗೂ ಅನಗತ್ಯ ಆರ್ಥಿಕ ನಷ್ಟಗಳನ್ನು ಅನುಭವಿಸುತ್ತಿರುವವರು ಈ ದಿನ ಕೆಲವೊಂದು ಪ್ರಮುಖ ನಿಯಮಗಳನ್ನು ಅನುಸರಿಸುವುದು ಶ್ರೇಷ್ಠ.
ಗುರು ಪೂರ್ಣಿಮೆಯ ಪವಿತ್ರ ದಿನದಂದು ವಿಷ್ಣುವಿಗೆ ಹಳದಿ ವರ್ಣದ ಹೂವುಗಳನ್ನು ಅರ್ಪಿಸಿ, ಶುದ್ಧ ಹಸುವಿನ ತುಪ್ಪದ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ವೃತ್ತಿಜೀವನದಲ್ಲಿ ಎದುರಾಗುವ ವಿಘ್ನಗಳು ನಿವಾರಣೆಯಾಗಿ, ಕೆಲಸದಲ್ಲಿ ಬಡ್ತಿ (ಪ್ರಮೋಷನ್) ದೊರೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಮನಸ್ಸಿನ ಏಕಾಗ್ರತೆ ಹಾಗೂ ಜೀವನದಲ್ಲಿ ಶುಭ ಫಲಗಳನ್ನು ಪಡೆಯಲು ಮಂತ್ರ ಜಪವು ಅತ್ಯಂತ ಪರಿಣಾಮಕಾರಿ. ಗುರು ಪೂರ್ಣಿಮೆಯಂದು ಇಷ್ಟದೇವತೆಯನ್ನು ಧ್ಯಾನಿಸುತ್ತಾ, “ಓಂ ಬೃಂ ಬೃಹಸ್ಪತೇ ನಮಃ” ಎಂಬ ಗುರು ಮಂತ್ರವನ್ನು ಪಠಿಸುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಈ ಮಂತ್ರದ ಜಪವು ಜಾತಕದಲ್ಲಿರುವ ಗುರು ದೋಷವನ್ನು ಶಮನಗೊಳಿಸಿ, ಜೀವನದಲ್ಲಿ ಹೊಸ ಸೌಭಾಗ್ಯ ಮತ್ತು ಸಮೃದ್ಧಿಯ ಬಾಗಿಲುಗಳನ್ನು ತೆರೆಯುತ್ತದೆ.