ದಾಖಲೆಯ 10ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ, ಸಿಎಂ ಆಗಿ ಮೂರನೇ ಬಾರಿ ಹಾಗೂ ವಿತ್ತ ಸಚಿವರಾಗಿ ದಾಖಲೆಯ 10ನೇ ಬಜೆಟ್ ಮಂಡಿಸಿದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ, ಸಿಎಂ ಆಗಿ ಮೂರನೇ ಬಾರಿ ಹಾಗೂ ವಿತ್ತ ಸಚಿವರಾಗಿ ದಾಖಲೆಯ 10ನೇ ಬಜೆಟ್ ಮಂಡಿಸಿದರು.

ಇಂದು ಮಧ್ಯಾಹ್ನ 12.30ರಿಂದ ಸತತ ಮೂರು ಗಂಟೆಗಳ ಕಾಲ 2015-16ನೇ ಸಾಲಿನ ಆಯವ್ಯಯವನ್ನು ಮಂಡಿಸಿ ಸಿಎಂ, ಸಾಮಾಜಿಕ ನ್ಯಾಯ, ಜಾತ್ಯಾತೀತ ನಂಬಿಕೆ ಮತ್ತು ಕೋಮು ಸೌಹಾರ್ದತೆ ತತ್ವಗಳಲ್ಲಿ ಬದ್ಧವಾಗಿರುವ ನಮ್ಮ ಸರ್ಕಾರದ ನಡೆ-ನುಡಿಗಳಲ್ಲಿ ಹಾಗೂ ಆದ್ಯತೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದರು.

ಕೋಮು ಸೌಹಾರ್ದತೆಗೆ ಹೆಚ್ಚಿನ ಒತ್ತು ನೀಡಿ, ರಾಜ್ಯವನ್ನು ಪ್ರಗತಿ ಪಥದಲ್ಲಿ ಮುನ್ನಡೆಸುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಇದು ನಮ್ಮ ಸರ್ಕಾರ ಮಂಡಿಸುತ್ತಿರುವ 3ನೇ ಬಜೆಟ್ ಆಗಿದ್ದು, ಈ ಹಿಂದೆ ಮಂಡಿಸಿದ ಬಜೆಟ್‌ನ ಯೋಜನೆಗಳು ಫಲ ನೀಡಿದ್ದು, ಅದರ ಆಧಾರದ ಮೇಲೆ ಈ ಆಯವ್ಯಯ ಪತ್ರದಲ್ಲಿ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಾಗಿ ಹೇಳಿದರು.

ತಂಬಾಕು ಬಳಕೆಯನ್ನು ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಬೀಡಿ, ಸಿಗರೇಟು, ಗುಟ್ಕಾ ಮತ್ತಿತರ ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.17 ರಿಂದ ಶೇ.20 ಕ್ಕೆ ಹೆಚ್ಚಳ ಮಾಡಿದೆ. ಇನ್ನು ಡೀಸೆಲ್‌ ಮತ್ತು ಪೆಟ್ರೋಲ್‌ ಮೇಲಿನ ತೆರಿಗೆ ದರ(ಸೆಸ್)ವನ್ನು ಶೇ.1 ರಷ್ಟು ಹೆಚ್ಚಿಸಲಾಗಿದೆ.


ಗ್ರಾಮೀಣಾಭಿವೃದ್ಧಿಗೆ 9,827 ಕೋಟಿ, ಕ್ರೀಡಾ ಇಲಾಖೆಗೆ 147 ಕೋಟಿ ರೂಪಾಯಿ, ಸಮಾಜಕಲ್ಯಾಣ ಇಲಾಖೆಗೆ 4584 ಕೋಟಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ 16,204 ಕೋಟಿ ರೂಪಾಯಿ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಗೆ 852 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 332 ಕೋಟಿ ರೂಪಾಯಿ ಘೋಷಿಸಿದ್ದಾರೆ.

ಬಜೆಟ್ ಮುಖ್ಯಾಂಶಗಳು:

  • ಸೇತುವೆಗಳ ಅಭಿವೃದ್ದಿಗೆ ರು. 1000 ಕೋಟಿ.
  • ರಾಜ್ಯದ 300 ಶಾಲಾ ಕಾಲೇಜುಗಳಿಗೆ ಸೋಲಾರ್ ಎಜುಕೇಶನ್ ಕಿಟ್. ರಾಜ್ಯದಲ್ಲಿ 30 ಪೊಲೀಸ್ ಠಾಣೆ, ರಾಜ್ಯದಲ್ಲಿ ಶೀಘ್ರವೇ ಕೊಳಗೇರಿ ನೀತಿ ಜಾರಿ.
  • 25 ರೂ.ಗೆ ಒಂದು ಲೀಟರ್ ತಾಳೆಎಣ್ಣೆ, ಭಯೋತ್ಪಾದನೆ ನಿಯಂತ್ರಣಕ್ಕೆ ಕೇಂದ್ರೀಯ ಕಮಾಂಡ್ ಸೆಂಟರ್.
  • 2 ರೂ.ಗೆ ಒಂದು ಕೆಜಿ ಅಯೋಡಿನ್ ಉಪ್ಪು ವಿತರಣೆ. ಪೊಲೀಸ್ ಸಿಬ್ಬಂದಿ ಆರೋಗ್ಯ ಸುಧಾರಣೆಗೆ 9 ಕೋಟಿ ರೂ. 10 ನೂತನ ಮಹಿಳಾ ಪೊಲೀಸ್ ಠಾಣೆ ಸ್ಥಾಪನೆ.
  • ಸಂಗಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ರು. 3000 ಗಳಿಂದ ರು.6000 ಗಳಿಗೆ ಹೆಚ್ಚಳ
  • ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸಂಗ್ರಹಾಲಯ. ದಲಿತ ನಾಯಕರ ಸ್ಮಾರಕ ನಿರ್ಮಾಣಕ್ಕೆ 3 ಕೋಟಿ. ಜೋಗ ಜಲಪಾತದಲ್ಲಿ ನೀರಿನ ಮರು ಬಳಕೆ. 4 ಗಿರಿಧಾಮದಲ್ಲಿ ಕೇಬಲ್ ಕಾರು ಯೋಜನೆ.
  • ಮಹಿಳಾ ಉದ್ಯಮಶೀಲರ ಮಾರ್ಗದರ್ಶನ ಕೇಂದ್ರಗಳನ್ನು ಸ್ಥಾಪಿಸಲಾಗುವುದು
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 303 ಕೋಟಿ ಅನುದಾ
  • ಮೆಟ್ರೋ ಅಭಿವೃದ್ದಿಗೆ 4,770 ಕೋಟಿ ರೂಪಾಯಿ, 5 ಕೇಂದ್ರ ಕಾರಾಗೃಹದಲ್ಲಿ ಟೆಲಿಮಿಡಿಸನ್. ಕಡೂರಿನಲ್ಲಿ 5 ಕೋಟಿ ರೂ. ವೆಚ್ಚದ ಬಯಲು ಬಂಧೀಖಾನೆ ಸ್ಥಾಪನೆ.
  • ಎಸ್ ಸಿ ಎಸ್ ಟಿ ಯೋಜನೆಗೆ 16,356 ಕೋಟಿ ರೂಪಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 6,107 ಕೋಟಿ ರೂಪಾಯಿ, ನೀರಾವರಿ ಇಲಾಖೆಗೆ 12,956 ಕೋಟಿ ರೂಪಾಯಿ.
  • ಪಶುಸಂಗೋಪನಾ ಇಲಾಖೆಗೆ 1882 ಕೋಟಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 1 ಸಾವಿರ ಕೋಟಿ, ವಸತಿ ಇಲಾಖೆಗೆ 3819 ಕೋಟಿ ರೂಪಾಯಿ, ಸಹಕಾರ ಇಲಾಖೆಗೆ 1323 ಕೋಟಿ ರೂಪಾಯಿ, ರೇಶ್ಮೆ ಇಲಾಖೆಗೆ 186 ಕೋಟಿ ರೂಪಾಯಿ.
  • ವಾರ್ತಾ ಇಲಾಖೆಗೆ 93 ಕೋಟಿ, ಕಾನೂನು ಮತ್ತು ನ್ಯಾಯ ಇಲಾಖೆಗೆ 597 ಕೋಟಿ, ತೋಟಗಾರಿಕೆ ಇಲಾಖೆಗೆ 768 ಕೋಟಿ ರೂಪಾಯಿ. ವಾಣಿಜ್ಯ ಇಲಾಖೆಗೆ 1,111 ಕೋಟಿ
  • ತೋಟಗಾರಿಕಾ ಇಲಾಖೆಗೆ ರೂ. 760 ಕೋಟಿ ಬಿಡುಗಡೆ, ಹಾಪ್‌ಕಾಮ್ಸ್‌ಗಳ ಬಲವರ್ಧನೆಗೆ ಕ್ರಮ. ರೈತರಿಗೆ ಸಾವಯವ ಭಾಗ್ಯ. ಹಾವೇರಿಯಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ.
  • ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ರೂ. 16,204 ಕೋಟಿ ನಿಗದಿಯಾಗಿದ್ದರೆ ಉನ್ನತ ಶಿಕ್ಷಣಕ್ಕೆ 3,896 ಕೋಟಿ ರೂಪಾಯಿಗಳನ್ನು ಮೀಸಲಾಗಿರಿಸಲಾಗಿದೆ. ಶಾಲಾ ಮಕ್ಕಳಿಗೆ ಶೂ-ಸಾಕ್ಸ್‌ ವಿತರಣೆ.
  • ಮಾಹಿತಿ ತಂತ್ರಜ್ಞಾನ ಇಲಾಖೆಗೆ 202 ಕೋಟಿ, ಕಾನೂನು ಪದವೀಧರರಿಗೆ 2 ಸಾವಿರ ರೂಪಾಯಿ ಸ್ಟೈಫಂಡ್ ಹೆಚ್ಚಳ. ಪ್ರತಿ ಕಂದಾಯ ವಿಭಾಗಕ್ಕೊಂದು ಸಂಚಾರಿ ನ್ಯಾಯಾಲಯ.
  • ಗ್ರಾಮೀಣ ನೈರ್ಮಲ್ಯಕ್ಕೆ 500 ಕೋಟಿ ರೂ.ಪಶ್ಚಿಮ ಘಟ್ಟಗಳಲ್ಲಿ 50 ಟ್ರಕ್ಕಿಂಗ್ ಪಥ ಸ್ಥಾಪನೆ.
  • ಸಾರಿಗೆ ಇಲಾಖೆಗೆ 1,208 ಕೋಟಿ ರೂ. ಶಿರಾಡಿ ಘಾಟ್ ರಸ್ತೆ ಅಭಿವೃದ್ದಿ 18 ತಿಂಗಳಲ್ಲಿ ಪೂರ್ಣ.
  • ಹಂತಹಂತವಾಗಿ ಇಡೀ ಬೆಂಗಳೂರಿಗೆ ವೈ ಫೈ
  • 4 ವರ್ಷಗಳಲ್ಲಿ ಬಾದಾಮಿ ಪಟ್ಟಣ ಸಂಪೂರ್ಣ ಅಭಿವೃದ್ಧಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com