ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಬಜೆಟ್ ಭಾಷಣ ಈಗ ತಾನೇ ಮುಗಿದಿದ್ದು, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರಿಗೆ ಹಲವಾರು ಹೊಸ ಯೋಜನೆಗಳನ್ನು ನೀಡುವುದರ ಮೂಲಕ ಹಾಗು ಜಾರಿಯಲ್ಲಿರುವ ಜೋಜನೆಗಳಿಗೆ ಹೆಚ್ಚಿನ ಹಣ ನೀಡುವುದರ ಮೂಲಕ ಸಾಮಾಜಿಕ ಸಮಾನತೆಯನ್ನು ಗಮನಲ್ಲಿರಿಸಿದ ಬಜೆಟ್ ಇದಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ೨೦೦೦೦ ಕೋಟಿ ಮೂಲ ಧನದನ ಮುದ್ರಾ ಬ್ಯಾಂಕ್ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಈ ಜನಾಂಗದವರು ವ್ಯಾಪಾರ ನಡೆಸಲು ಮುಂದಾದರೆ ಈ ಬ್ಯಾಂಕಿನ ಮೂಲಕ ಸಾಲದ ನೆರವು ನೀಡಲಾಗುವುದು ಎಂದಿದ್ದಾರೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಂಗವಾದ ಈ ಮುದ್ರಾ ಬ್ಯಾಂಕ್ ಎಸ್ ಸಿ ಎಸ್ ಟಿ ಯುವಕರಿಗೆ ಹೊಸ ಉದ್ಯಮ ಸ್ಥಾಪಿಸಲು ನೆರವಾಗಲಿದೆ.
ಶಾಲಾಭ್ಯಾಸ ಇಲ್ಲದ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡುವ "ನಯಿ ಮಂಜಿಲ್" ಯೋಜನೆಯನ್ನು ಕೂಡ ೨೦೧೫ ರ ಬಜೆಟ್ ನಲ್ಲಿ ಘೋಷಿಸಲಾಗಿದೆ.
ಇದಲ್ಲದೆ ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ಹೆಚ್ಚುವರಿ ೩೦೦೦೦ ಕೋಟಿ ಅನುದಾನವನ್ನು ಜೇಟ್ಲಿ ಘೋಷಿಸಿದ್ದಾರೆ. ಹಾಗೆಯೇ ನರೇಗಾ ಯೋಜನೆಯನ್ನು ಮುಂದುವರೆಸುವುದಾಗಿ ಘೋಷಿಸಿದ್ದಾರೆ ಜೇಟ್ಲಿ.
Advertisement