ಅನ್ನದಾತನ ಹೊಲದಲ್ಲಿ ಅರುಣಾಮೃತ!

ಈ ಬಜೆಟ್ ಹೆಚ್ಚು ಬಂಪರ್ ಹೊಡೆದಿದ್ದು ರೈತರಿಗೆ. ಅದರಲ್ಲೂ ಕೃಷಿ ಸಾಲವನ್ನು ಊಹೆಗೂ ನಿಲುಕದಂತೆ ಏರಿಸಿರುವ ಜೇಟ್ಲಿ, ಅನ್ನದಾತನ ಮೊಗವನ್ನು ಅರಳಿಸಿದ್ದಾರೆ...
ಅನ್ನದಾತನ ಹೊಲದಲ್ಲಿ ಅರುಣಾಮೃತ!
Updated on

ನವದೆಹಲಿ: ಈ ಬಜೆಟ್ ಹೆಚ್ಚು ಬಂಪರ್ ಹೊಡೆದಿದ್ದು ರೈತರಿಗೆ. ಅದರಲ್ಲೂ ಕೃಷಿ ಸಾಲವನ್ನು ಊಹೆಗೂ ನಿಲುಕದಂತೆ ಏರಿಸಿರುವ ಜೇಟ್ಲಿ, ಅನ್ನದಾತನ ಮೊಗವನ್ನು ಅರಳಿಸಿದ್ದಾರೆ.

50 ಸಾವಿರ ಕೋಟಿ ರು. ಇದ್ದ ಕೃಷಿ ಸಾಲದ ಮಿತಿಯನ್ನು 8.5 ಲಕ್ಷಕ್ಕೆ ಏರಿಸಲಾಗಿದೆ. ನೀರಾವರಿ ಹಾಗೂ ಮಣ್ಣಿನ ಆರೋಗ್ಯದಲ್ಲೇ ಕೃಷಿ ಸಕ್ಸಸ್ ಇದೆ ಅಂತ ಅವರ ಯೋಜನೆಗಳೇ ಹೇಳುತ್ತವೆ. ಈಗ ಸದ್ಯ ಕೃಷಿಕರಿಗಿರುವ ಸಾಲದ ಮಿತಿ 3 ಲಕ್ಷ ರುಪಾಯಿ. ಅದಕ್ಕೆ ಶೇ.7 ಬಡ್ಡಿ ಬೀಳುತ್ತಿತ್ತು. ಈಗ ಈ ಬಡ್ಡಿ ಶೇ.4ಕ್ಕೆ ಇಳಿಸಲಾಗಿದೆ. ಬ್ಯಾಂಕುಗಳೀಗ 3.7 ಲಕ್ಷದ ತನಕ ಸಾಲ ನೀಡಲಿವೆ. ಕೃಷಿ ಸಾಲದ ದುರುಪಯೋಗ ತಡೆಯಲು ಪ್ರಾಮುಖ್ಯ ನೀಡಲಾಗಿದೆ. ಮುಖ್ಯವಾಗಿ ಸಣ್ಣ ಮತ್ತು ಹಿಡುವಳಿದಾರ ರೈತರಿಗೆ ಸಾಲ ತಲುಪಿಸುವ ಉದ್ದೇಶ ಹೊಂದಲಾಗಿದೆ.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿನಿಧಿಯ ಮೂಲಧನವನ್ನು 25 ಸಾವಿರ ಕೋಟಿ ರು.ಗೆ ಏರಿಸಲಾಗಿದೆ. ದೀರ್ಘಾವಧಿ ಸಾಲದ ಮೊತ್ತವನ್ನು 15 ಸಾವಿರ ಕೋಟಿ ರುಪಾಯಿಗೆ, ಅಲ್ಪಾವಧಿ ಸಾಲವನ್ನು 45 ಸಾವಿರ ಕೋಟಿಗೆ ಏರಿಸಲಾಗಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ (ಆರ್ ಆರ್ ಬಿ) ಪುನರ್ಬಳಕೆ ಅಲ್ಪಾವಧಿ ಸಾಲಕ್ಕಾಗಿ 15 ಸಾವಿರ ಕೋಟಿ ರು. ಘೋಷಿಸಿದ್ದು ಇನ್ನೊಂದು ಹೈಲೈಟ್.

ರೈತನಿಗೆ `ಪರಂ'ಮಿತ್ರ

ಈ ಹಿಂದೆ ಘೋಷಿಸಲಾದ `ಒಂದು ಬಿಂದು, ಬೆಳೆ ಸಿಂಧು' ಯೋಜನೆಗೆ ಮತ್ತಷ್ಟು ಹುರುಪು ತುಂಬಿರುವ ಜೇಟ್ಲಿ, ಇದಕ್ಕೆ ಪೂರಕವಾಗಿ `ಪರಂಪರಾಗತ್ ಕೃಷಿ ವಿಕಾಸ್' ಎಂಬ ಹೊಸ ಯೋಜನೆ ಪರಿಚಯಿಸಿದ್ದಾರೆ.

ಮಣ್ಣು ಮತ್ತು ನೀರುಗಳ ಗುಣಮಟ್ಟ ಸುಧಾರಿಸುವುದೇ ಇಲ್ಲಿನ ಮುಖ್ಯೋದ್ದೇಶ. ಇದಕ್ಕಾಗಿ ಕೃಷಿ ಇಲಾಖೆಗೆ 5,300 ಕೋಟಿ ರು. ವಿನಿಯೋಗವಾಗಲಿದೆ. ಹನಿ ನೀರಾವರಿ,
ಜಲಾನಯನ ಭೂಮಿ ಅಭಿವೃದ್ಧಿ ಹಾಗೂ `ಪ್ರಧಾನ್ ಮಂತ್ರಿ ಕೃಷಿ ಸಿಂಚಾಯಿ ಯೋಜನೆ', ಜೈವಿಕ ಗೊಬ್ಬರ ಬಳಕೆಗೆ ಇಲ್ಲಿ ಹೆಚ್ಚು ಒತ್ತು ಸಿಗಲಿದೆ. `ಸಿಂಚಾಯಿ ಯೋಜನೆ'ಗೆ 5,300 ಕೋಟಿ ರು. ಮೀಸಲಿಡಲಾಗಿದೆ. ಶೇ.60ರಷ್ಟಿರುವ ಮಳೆಯಾಧಾರಿತ ಪ್ರದೇಶಗಳಿಗೆ ಈ ಯೋಜನೆ ನೆರವಾಗಲಿದೆ.

ಪರಂಪರಾಗತ್ ಕೃಷಿ ವಿಕಾಸ್ ಅಂದ್ರೆ...
ನೀರು ಮತ್ತು ಮಣ್ಣಿನ ಆರೋಗ್ಯಕ್ಕೆ ಹೆಚ್ಚು ಆದ್ಯತೆ ಕೊಡುವ ಯೋಜನೆ ಇದು. ಪ್ರತಿಯೋಬ್ಬ ರೈತ ಹನಿ ನೀರಿಗೂ ಮಹತ್ವ ಕೊಡಬೇಕು. ಮಣ್ಣಿನ ಆರೋಗ್ಯ ಪರೀಕ್ಷಿಸಿ, ಹೆಲ್ತ್ ಕಾರ್ಡ್ ಗಳನ್ನೂ ನೀಡಲಾಗುವುದು. ಮಣ್ಣಿನ ಫಲವತ್ತತೆ ವೃದ್ಧಿಸಲು ಈ ಯೋಜನೆ ಫಲಕಾರಿ.

10 ಯೋಜನೆಯ ಏಕೀಕರಣ
ಈ ಹಿಂದಿನ ಸರ್ಕಾರಗಳು ಕೃಷಿಯಲ್ಲಿ ನೂರಾರು ಯೋಜನೆ ರೂಪಿಸಿದ್ದರೂ ಸೂಕ್ತ ಫಲ ಸಿಗಲಿಲ್ಲ ಎಂಬ ಸತ್ಯ ಜೇಟ್ಲಿ ಅವರಿಗೆ ಗೊತ್ತಾಗಿದೆ. ಈ ಕಾರಣಕ್ಕೆ 10 ಪ್ರಮುಖ ಯೋಜನೆಗಳನ್ನು ಕ್ಲಬ್ ಮಾಡಿ, `ಕೃಷಿಯೋನ್ನತಿ' ಎಂಬ ಮುಖ್ಯ ಯೋಜನೆಯನ್ನು ಜೇಟ್ಲಿ ಘೋಷಿಸಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಹಲವು ಯೋಜನೆಗಳು ಇದರಲ್ಲಿ ವಿಲೀನಗೊಳ್ಳಲಿವೆ. ಇದಕ್ಕಾಗಿ 9,000 ಕೋಟಿ ರುಪಾಯಿ ಮೀಸಲಿರಿಸಲಾಗಿದೆ.

ಬೆಳೆಗೆ ಮಾದರಿ ಬೆಲೆ
ದಲ್ಲಾಳಿಗಳಿಂದ ಬೇಸತ್ತಿರುವ ರೈತರಿಗೂ ಇಲ್ಲಿ ಸಿಹಿಸುದ್ದಿ ಇದೆ. ನಿಮ್ಮ ಬೆಳೆ ಮಾರಾಟಕ್ಕೆ ಯಾರದ್ದೋ ಮಧ್ಯವರ್ತಿಯ ಕಾಲು ಹಿಡಿಯುವುದು ಬೇಡ. ಇದಕ್ಕಾಗಿ ರಾಷ್ಟ್ರೀಯ ಸಾಮಾನ್ಯ ಮಾರುಕಟ್ಟೆ ಅಸ್ತಿತ್ವಕ್ಕೆ ಬರಲಿದೆ. ಸ್ಥಳೀಯ ದಲ್ಲಾಳಿಗಳಿಗೆ ಈ ಮೂಲಕ ಕಡಿವಾಣ ಬೀಳಲಿದೆ. ಪ್ರತಿ ಬೆಳೆಗೂ ರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಬೆಲೆ ಸಿಗಲಿದೆ.

ನೀರಾವರಿಗೆ ಹೆಚ್ಚು ಮಹತ್ವ
ಫಸಲು ಕಡಿಮೆಯಾಗಿ ರೈತರು ಎಲ್ಲಿ ಎಡವುತ್ತಿದ್ದಾರೆಂಬುದನ್ನು ಜೇಟ್ಲಿ ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಇದಕ್ಕಾಗಿಯೇ ನಿಶ್ಚಿತ ನೀರಾವರಿ ಯೋಜನೆ, ಕೃಷಿ ಆಧಾರಿತ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ಕೊಟ್ಟಿದ್ದಾರೆ. ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆ, ರೈತರಿಗೆ ಗುಣಮಟ್ಟದ ಬೆಲೆಯ ಕನಸು ಕಂಡಿದ್ದಾರೆ ಜೇಟ್ಲಿ.

ಮಿತಿ ಮೀರದ ತೆರಿಗೆ, ಆದರೂ ಇಲ್ಲ ಸುಲಿಗೆ
ಬಜೆಟಲ್ಲಿ ಆದಾಯ ತೆರಿಗೆ ಮಿತಿ ಯಥಾ ಸ್ಥಿತಿ ಕಾಯ್ದುಕೊಳ್ಳಲಾಗಿದೆ. ಕರದಾತರು ನಿರಾಶರಾಗಬೇಕಾಗಿಲ್ಲ. ಅದಕ್ಕೆ ಪರ್ಯಾಯ ಮಾರ್ಗಗಳನ್ನು ಜೇಟ್ಲಿ ಸೂಚಿಸಿದ್ದಾರೆ.

ಅವುಗಳು ಹೀಗಿವೆ...

  • ಹಾಲಿ ಇರುವ ಮಿತಿ ರು. 2.50 ಲಕ್ಷ ಇರುವವರಿಗೆ ಆದಾಯ ತೆರಿಗೆ ಮಿತಿ ರು.1.50 ಲಕ್ಷದ ವರೆಗೆ ಐಟಿ ಕಾಯ್ದೆಯ 80ಸಿ ಅನ್ವಯ ಕ್ಲೈಮ್ ಮಾಡಬಹುದು
  • ಹಾಲಿ ಇರುವ ಸಾರಿಗೆ ಭತ್ಯೆ ರು. 800ನ್ನು ರು.1,600ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ವಾರ್ಷಿಕವಾಗಿ ರು.19,200 ಉಳಿತಾಯ ಮಾಡಲು ಅನುಕೂಲ.
  • ಆರೋಗ್ಯ ವಿಮೆ ಪ್ರೀಮಿಯಂ ಕಡಿತದ ಮೊತ್ತವನ್ನು ಈಗಿನ ರು.15 ಸಾವಿರದಿಂದ ರು.25 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಪ್ರತಿ ವರ್ಷ ರು.10 ಸಾವಿರ ಉಳಿಕೆಗೆ ಅನುಕೂಲ ಒಟ್ಟಾಗಿ ರು.2.50 ಲಕ್ಷ+ ರು.1.50ಲಕ್ಷ + ರು.19,200 + ರು. 25 ಸಾವಿರ = ರು. 4,44,200.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com