ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು; ಭೂಮಿ ಖರೀದಿಸಲು ಅನುಕೂಲವಾಗುವಂತೆ ಕಾಯ್ದೆಗಳಿಗೆ ತಿದ್ದುಪಡಿ- ಮುಖ್ಯಮಂತ್ರಿ

ರಾಜ್ಯದಲ್ಲಿ ಹೂಡಿಕೆದಾರರಿಗೆ ಉತ್ತೇಜನ ನೀಡಲು, ಕೈಗಾರಿಕೆ ಸ್ಥಾಪನೆಗೆ ಗುರುತಿಸುವ  ಜಾಗದಲ್ಲಿ ನೇರವಾಗಿ ಭೂಮಾಲೀಕರಿಂದ ಭೂಮಿ ಖರೀದಿಸಲು ಅನುಕೂಲವಾಗುವಂತೆ ಸಂಬಂಧಿಸಿದ  ಕಾಯ್ದೆಗಳಿಗೆ ತಿದ್ದುಪಡಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಹೂಡಿಕೆದಾರರಿಗೆ ಉತ್ತೇಜನ ನೀಡಲು, ಕೈಗಾರಿಕೆ ಸ್ಥಾಪನೆಗೆ ಗುರುತಿಸುವ  ಜಾಗದಲ್ಲಿ ನೇರವಾಗಿ ಭೂಮಾಲೀಕರಿಂದ ಭೂಮಿ ಖರೀದಿಸಲು ಅನುಕೂಲವಾಗುವಂತೆ ಸಂಬಂಧಿಸಿದ  ಕಾಯ್ದೆಗಳಿಗೆ ತಿದ್ದುಪಡಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ

ವಿಧಾನಸಭೆಯಲ್ಲಿಂದು ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸಿದ ಅವರು, 2020ರ ನವೆಂಬರ್ ನಲ್ಲಿ  “ಇನ್‍ವೆಸ್ಟ್ ಕರ್ನಾಟಕ-2020” ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು."ಉತ್ಪನ್ನ  ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ” ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ “ಹೆಲ್ತ್ ಅಂಡ್ ವೆಲ್‍ನೆಸ್ ಕ್ಲಸ್ಟರ್” ಮತ್ತು ಧಾರವಾಡ ಜಿಲ್ಲೆಯಲ್ಲಿ “ಹೋಮ್ ಅಂಡ್ ಪರ್ಸನಲ್ ಕೇರ್ ಕನ್ಸ್ಯೂಮರ್ ಗೂಡ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್” ಸ್ಥಾಪನೆ ಮಾಡಲಾಗುವುದು ಎಂದರು.

ರಾಮನಗರ  ತಾಲ್ಲೂಕಿನ ಹಾರೋಹಳ್ಳಿ 5ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ “ಎಲೆಕ್ಟ್ರಿಕ್  ವೆಹಿಕಲ್ಸ್ ಮತ್ತು ಎನರ್ಜಿ ಸ್ಟೋರೇಜ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್” ಸ್ಥಾಪನೆಗೆ  10 ಕೋಟಿ ರೂ. ಅನುದಾನ ನೀಡಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ಹರಳೂರು-ಮುದ್ದೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ “ಡಿಫೆನ್ಸ್ ಅಂಡ್ ಏರೋಸ್ಪೇಸ್  ಎಕ್ಯುಪ್‍ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್” ಸ್ಥಾಪಿಸಲಾಗುವುದು.ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ ಮಾಡಲಾಗುವುದು ಎಂದು ಯಡಿಯೂರಪ್ಪ ಪ್ರಕಟಿಸಿದರು.

ಸಣ್ಣ  ಮತ್ತು ಸೂಕ್ಷ್ಮ ಕೈಗಾರಿಕೆಗಳ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಕೈಗಾರಿಕೆಗಳ  ಸಹಯೋಗದೊಂದಿಗೆ “Centre for Smart Manufacturing” ಸ್ಥಾಪನೆಗೆ ಐದು ಕೋಟಿ ರೂ.  ಅನುದಾನ ನೀಡಲಾಗುವುದು. ನಾರು ಆಧಾರಿತ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲು ಮತ್ತು ವ್ಯಾಪಕ  ಮಾರುಕಟ್ಟೆ ಒದಗಿಸಲು ಐದು ಕೋಟಿ ರೂ.ಗಳ ವೆಚ್ಚದಲ್ಲಿ “Coir Experience Centre”   ಸ್ಥಾಪನೆ ಮಾಡಲಾಗುವುದು. ತಿಪಟೂರಿನಲ್ಲಿ ‘ತೆಂಗು ಆಧಾರಿತ ಕೈಗಾರಿಕಾ ಪಾರ್ಕ್’ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರಕಟಿಸಿದರು

ಕೇಂದ್ರ  ಸರ್ಕಾರದ “ಪವರ್‍ಟೆಕ್ಸ್ ಇಂಡಿಯಾದ ನೂಲು ನಿಧಿ ಯೋಜನೆ”ಯಡಿ ಕೇಂದ್ರ ಸರ್ಕಾರದ ವಂತಿಗೆ  ಹಾಗೂ ರಾಜ್ಯ ಸರ್ಕಾರದ ಗರಿಷ್ಠ 50 ಲಕ್ಷ ರೂ. ಸಹಾಯಧನದೊಂದಿಗೆ ಎರಡು ಕೇಂದ್ರಗಳಲ್ಲಿ ನೂಲಿನ ಘಟಕ ಸ್ಥಾಪಿಸಲಾಗುವುದು.  ಹೊಸ ಜವಳಿ ಮತ್ತು ಸಿದ್ಧ ಉಡುಪು ನೀತಿಯ ಪ್ರೋತ್ಸಾಹಕಗಳಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರ್ಪಡೆ ಮಾಡಲಾಗುವುದು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್ ಪ್ರಾರಂಭಿಸಲಾಗುವುದು ಇದರಿಂದ 3000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

ರಾಜ್ಯದ ಜಿ.ಐ. ಟ್ಯಾಗ್ ಹೊಂದಿರುವ ಕೈಮಗ್ಗ ಬಟ್ಟೆ ಉತ್ಪನ್ನಗಳಿಗೆ ರಾಜ್ಯದ ಪ್ರತಿಷ್ಠಿತ “ಪ್ರಿಯದರ್ಶಿನಿ” ಬ್ರಾಂಡ್ ಮೂಲಕ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು.  ನೇಕಾರರ ಸಾಲ ಮನ್ನಾ ಯೋಜನೆ ಪೂರ್ಣಗೊಳಿಸಲು 79.57 ಕೋಟಿ ರೂ. ಅನುದಾನ ನೀಡಲಾಗುವುದು.  ಹಿಂದುಳಿದ ಪ್ರದೇಶಗಳು ಮತ್ತು ಟಯರ್-2 ಹಾಗೂ ಟಯರ್-3ರ ನಗರಗಳಿಗೆ ಬಂಡವಾಳ ಆಕರ್ಷಿಸುವ ನೂತನ ಕೈಗಾರಿಕಾ ನೀತಿ ಜಾರಿ ಮಾಡಲಗುವುದು. ಇದರಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯದ  ವ್ಯಾಪ್ತಿಯಲ್ಲಿ ಅಮೂಲ್ಯ ಖನಿಜಗಳ (High Value Minerals) ನಿಕ್ಷೇಪಗಳನ್ನು  ಗುರುತಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಖನಿಜಾನ್ವೇಷಣೆ  ವಿಭಾಗ ಸ್ಥಾಪನೆ ಮಾಡಲಾಗುವುದು.  KIADB  ಹಾಗೂ KSSIDC ಸಂಸ್ಥೆಗಳ ಮುಖ್ಯ ಸೇವೆಗಳು “ಸಕಾಲ”ದ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗುವುದು.  ಕಿತ್ತೂರು  ಮೂಲಕ ಧಾರವಾಡ-ಬೆಳಗಾವಿ ರೈಲು ಮಾರ್ಗ ಯೋಜನೆಗೆ ಉಚಿತವಾಗಿ ಭೂಮಿ ನೀಡಲು ಹಾಗೂ ಶೇ. 50  ರಷ್ಟು ಕಾಮಗಾರಿ ವೆಚ್ಚ ಭರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

 ಹಾಸನ-ಮಂಗಳೂರು  ರೈಲ್ ಡೆವಲಪ್‍ಮೆಂಟ್ ಕಾರ್ಪೋರೇಷನ್‍ನಿಂದ ಸಕಲೇಶಪುರ, ಸುಬ್ರಮಣ್ಯ ನಿಲ್ದಾಣಗಳ ನಡುವಿನ  ಘಾಟಿ ಪ್ರದೇಶದ ರೈಲು ಮಾರ್ಗದ ಕ್ಷಮತೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ  ಆನಂದರಾವ್ ವೃತ್ತದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಕಚೇರಿಗಳಿಗಾಗಿ 25  ಅಂತಸ್ತುಗಳ ಬಹುಮಹಡಿಯ “ಅವಳಿ ಗೋಪುರ” ನಿರ್ಮಾಣ-ಯೋಜನಾ ವರದಿ ತಯಾರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.

ಎಲ್ಲಾ ಇಲಾಖೆಗಳಿಗೆ ಹಾಗೂ ನಿಗಮ-ಮಂಡಳಿಗಳಿಗೆ ವಿವಿಧ ಕಾಮಗಾರಿಗಳಿಗೆ ಏಕರೂಪ ಅನುಸೂಚಿ ದರಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು.  ಖಾಸಗಿ ಸಹಭಾಗಿತ್ವದಲ್ಲಿ 2500 ಕೋಟಿ ರೂ.ಗಳ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆ ಪಾವಿನಕುರ್ವೆ/ ಬೇಲೆಕೇರಿ ಬಂದರು ಅಭಿವೃದ್ಧಿಗೆ ಬಿಡ್ ಆಹ್ವಾನ ಮಾಡಲಾಗುವುದು.  ರಾಜ್ಯದ  ಕಿರು ಬಂದರುಗಳ ಅಭಿವೃದ್ಧಿ, ಕರಾವಳಿ ಸಂರಕ್ಷಣೆ ಮತ್ತು ಕಡಲ ತೀರದ ಪ್ರವಾಸೋದ್ಯಮ  ಅಭಿವೃದ್ಧಿಗೆ ರೂಪಿಸಲಾಗಿರುವ ಕರ್ನಾಟಕ ಜಲಸಾರಿಗೆಯ ಸಮಗ್ರ ಯೋಜನೆ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಕೇಂದ್ರ  ಸರ್ಕಾರದ ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರ (Inland Waterways Authority of  India)  ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದ ಜಲಸಾರಿಗೆ ನದಿಗಳಾದ ಕಾಳಿ, ಶರಾವತಿ,  ಹಂಗಾರಕಟ್ಟೆ, ಗುರುಪುರ ಮತ್ತು ನೇತ್ರಾವತಿ ಜಲಸಾರಿಗೆ ಮಾರ್ಗಗಳು ಹಾಗೂ ದ್ವೀಪಗಳ  ಅಭಿವೃದ್ಧಿಪಡಿಸಲಾಗುವುದು. ರಾಜ್ಯದ ಎಲ್ಲಾ ನಾವೀನ್ಯತಾ ಚಟುವಟಿಕೆಗಳನ್ನು ಕ್ರೋಢೀಕರಿಸಿ ಸಂಯೋಜಿಸಲು ನಾಲ್ಕು ಕೋಟಿ ರೂ. ವೆಚ್ಚದಲ್ಲಿ “ಇನ್ನೋವೇಷನ್ ಹಬ್”(Innovation Hub) ಸ್ಥಾಪನೆ ಮಾಡಲಾಗುವುದು. STPI ಸಂಸ್ಥೆಯ ಸಹಭಾಗಿತ್ವದೊಂದಿಗೆ 30 ಕೋಟಿ ರೂ. ವೆಚ್ಚದಲ್ಲಿ Efficiency Augmentation ಕುರಿತು ಉತ್ಕೃಷ್ಟತಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನ  ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ “Artificial Intelligence Research  Translation Park” ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ 60 ಕೋಟಿ ರೂ.ಗಳ  ಇಡಿಗಂಟು ಅನುದಾನ ನೀಡಲಾಗುವುದು. ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದ ಆಶ್ರಯದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ “ಕೃಷಿ ನಾವೀನ್ಯತಾ ಕೇಂದ್ರ” ಸ್ಥಾಪನೆ ಮಾಡಲಾಗುವುದು ಎಂದರು.

ವಿದೇಶಿ  ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹಾಗೂ ವಿದೇಶಿ ಸರ್ಕಾರ ಮತ್ತು ಕಂಪನಿಗಳೊಂದಿಗೆ  ಸಂಬಂಧಗಳನ್ನು ಬಲಪಡಿಸಲು ಏಳು ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ತಂತ್ರಜ್ಞಾನ ಮಿಷನ್  ಸ್ಥಾಪನೆ ಮಾಡಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ  ಸಹಯೋಗದೊಂದಿಗೆ ಎರಡು ಕೋಟಿ ರೂ. ವೆಚ್ಚದಲ್ಲಿ ಸಾವಿರ ಪದವೀಧರರಿಗೆ Talent  Acceleration Programme ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

2025ರ ವೇಳೆಗೆ ಭಾರತದ ಜೈವಿಕ ಆರ್ಥಿಕತೆಗೆ ಕರ್ನಾಟಕದ ಕೊಡುಗೆಯನ್ನು ಶೇ. 50 ಕ್ಕೆ ಹೆಚ್ಚಿಸಲು ಮಾರ್ಗಸೂಚಿ ಮತ್ತು ಕಾರ್ಯತಂತ್ರವನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ದಾವೋಸ್‍ನ  ವಿಶ್ವ ಆರ್ಥಿಕ ವೇದಿಕೆಯ ಸಹಭಾಗಿತ್ವದೊಂದಿಗೆ ‘Internet of Ethical Things’  ವಿಷಯದಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಿ, 2020-21ರಲ್ಲಿ 7.5 ಕೋಟಿ ರೂ. ಅನುದಾನ ನೀಡಲಾಗುವುದು. ನವೋದ್ಯಮಗಳ  ವೇಗ ವರ್ಧಿಸಲು ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ನೆರವಾಗಲು ಉದ್ಯಮದವರ ಸಹಯೋಗದೊಂದಿಗೆ  ‘Acceleration Programme’ ಪ್ರಾರಂಭಿಸಲು ಮೂರು ಕೋಟಿ ರೂ. ಅನುದಾನ ನೀಡಲಾಗುವುದು, ಹನ್ನೊಂದು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸಂಚಾರಿ ಡಿಜಿಟಲ್ ತಾರಾಲಯ’ ಐದು ಕೋಟಿ ರೂ. ವೆಚ್ಚದಲ್ಲಿ ಇತರ ಐದು ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುವುದು ಎಂದರು.

ಪದವಿ  ಪೂರ್ವ ವಿದ್ಯಾರ್ಥಿಗಳಿಗೆ ‘ವಿಜ್ಞಾನ ಪ್ರತಿಭಾ ಶೋಧನೆ’ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಆಯ್ಕೆಯಾದ 500 ವಿದ್ಯಾರ್ಥಿಗಳಿಗೆ ಎರಡು ವರ್ಷ ಶಿಕ್ಷಣ, ಒಂದು ಸಾವಿರ ರೂ. ಮಾಸಿಕ  ಶಿಷ್ಯವೇತನ  ನೀಡಲಾಗುವುದು. ಗ್ರಾಮೀಣ ಯುವಕ/ಯುವತಿಯರಿಗೆ ಕೌಶಲ್ಯಾಭಿವೃದ್ಧಿಗಾಗಿ 20 ಕೋಟಿ ರೂ. ವೆಚ್ಚದಲ್ಲಿ ವಸತಿ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು, ಸಾರ್ವಜನಿಕ  ಖಾಸಗಿ ಸಹಭಾಗಿತ್ವದೊಂದಿಗೆ ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ, ಹಾಸನ,  ತುಮಕೂರು ಮತ್ತು ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ 353  ಕೋಟಿ ರೂ. ವೆಚ್ಚದಲ್ಲಿ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪಿಸಿ, ಮುಂದಿನ ಐದು ವರ್ಷಗಳಲ್ಲಿ  12,600 ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.

ರಾಜ್ಯದ ಐ.ಟಿ.ಐ.ಗಳಲ್ಲಿ  ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಸಂಸ್ಥೆಗಳ ಸಹಯೋಗದೊಂದಿಗೆ ಉಭಯ  ತರಬೇತಿ ವ್ಯವಸ್ಥೆ(Dual System of Training) ಅಳವಡಿಕೆ ಮಾಡಲಾಗುವುದು.  ಇಸ್ರೋ,  ಹೆಚ್.ಎ.ಎಲ್. ಇತ್ಯಾದಿ ಪ್ರತಿಷ್ಠಿತ ಸಂಸ್ಥೆಗಳಿಗೆ ಅಗತ್ಯವಿರುವ ಬಿಡಿಭಾಗ ಉತ್ಪಾದನೆಗೆ  ಅನುವಾಗುವಂತೆ ಬೆಂಗಳೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ ಸೇವಾ  ಕೇಂದ್ರಗಳ ಸಾಮರ್ಥ್ಯ ವೃದ್ಧಿಗೆ 20 ಕೋಟಿ ರೂ. ನೀಡಲಾಗುವುದು. ದೀನ್ ದಯಾಳ್ ಅಂತ್ಯೋದಯ  ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ರಾಜ್ಯದ ನಗರಗಳ ಬೀದಿ  ವ್ಯಾಪಾರಿಗಳಿಗೆ ಇ-ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ತಂತ್ರಾಂಶ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ವಾಯು  ಮಾಲಿನ್ಯ ಕಡಿಮೆಗೊಳಿಸಲು ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್  ಕೇಂದ್ರಗಳಲ್ಲಿ ‘ಫ್ಲೂ ಗ್ಯಾಸ್ ಡಿಸಲ್ಫರೈಸೇಷನ್’ (FGD) 2510 ಕೋಟಿ ರೂ. ವೆಚ್ಚದಲ್ಲಿ  ವ್ಯವಸ್ಥೆ ಸ್ಥಾಪಿಸಲಾಗುವುದು.  ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ 10 HP ವರೆಗಿನ ಪಂಪ್ ಸೆಟ್‍ಗಳ ವಿದ್ಯುತ್ ಶುಲ್ಕ ಮರುಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ವಲಯಕ್ಕೆ 55,732 ಕೋಟಿ ರೂ. ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com