ಮುಂಬೈ: ದೇಶದ ರೈತರ ಹೀನಾಯ ಸ್ಥಿತಿ ಬ್ಯಾಂಕಿಂಗ್ ಕ್ಷೇತ್ರದ ಪ್ರಜ್ಞೆಯನ್ನು ಕಲಕಬೇಕು, ಬಡವರು, ಕೃಷಿಕರಿಗೆ ಹಣಕಾಸು ನೆರವು ನೀಡುವಾಗ ಸ್ವಲ್ಪ ದಾಕ್ಷಿಣ್ಯ ತೋರಿಸಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಅವರು ರೈತಾಪಿ ವರ್ಗದ ಪರ ಧ್ವನಿಯೆತ್ತಿದ ಪರಿ. ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ನ 80ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ರೈತರ ಬಗ್ಗೆ ಉದಾರತೆ ತೋರುವಂತೆ ಬ್ಯಾಂಕಿಂಗ್ ವಲಯಕ್ಕೆ ಸಲಹೆ ನೀಡಿದ್ದಾರೆ. ಜತೆಗೆ, ಎಲ್ಲರನ್ನೊಳಗೊಂಡ ಹಣಕಾಸು ನೀತಿಗಾಗಿ 20 ವರ್ಷಗಳ ಮಾರ್ಗಸೂಚಿಯನ್ನು ರಚಿಸಬೇಕು ಎಂದೂ ಸೂಚಿಸಿದ್ದಾರೆ. ನಮ್ಮ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ನೋವು ಕೇವಲ ಪತ್ರಿಕೆಗಳು, ಟಿವಿ ಪರದೆಗಳಿಗಷ್ಟೇ ಸೀಮಿತವಾಗಿವೆ. ರೈತ ಸತ್ತಾಗ, ಬ್ಯಾಂಕಿಂಗ್ ವಲಯದವರ ಮನಸ್ಸು ವಿಚಲಿತಗೊಳ್ಳುತ್ತದೆಯೇ ? ಯಾರೋ ಬಡ್ಡಿಗೆ ಸಾಲ ಕೊಡುವಾತನಿಂದ ಹಣ ಪಡೆದಿದ್ದೇ ರೈತನ ಸಾವಿಗೆ ಕಾರಣವಾಗಿರುತ್ತದೆ. ಅದು ನಿಮಗೆ ಗೊತ್ತಿದೆಯೆ ? ರೈತರು ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡದಂತೆ ತಡೆಯುವ ಬಗ್ಗೆ, ನಮ್ಮ ಬ್ಯಾಂಕಿಂಗ್ ಕ್ಷೇತ್ರವನ್ನು ವಿಸ್ತರಿಸುವ ಬಗ್ಗೆ ಆಲೋಚಿಸೋಣವೇ? ಬಡವರಿಗೆ ಸಹಾಯ ಮಾಡುವುದರಿಂದ ಬ್ಯಾಂಕ್ ದಿವಾಳಿಯಾಗುತ್ತದೆ ಎಂದು ನನಗಂತೂ ಅನಿಸುತ್ತಿಲ್ಲ.
Advertisement