ನವದೆಹಲಿ: ಆನ್ಲೈನ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಸುವವರು ಇನ್ನು ಮುಂದೆ ಸ್ವೀಕೃತಿ ಪತ್ರ(ಅಕ್ನಾಲೆಡ್ಜ್ಮೆಂಟ್)ವನ್ನು ಅಂಚೆ ಮೂಲಕ ಕಳುಹಿಸಬೇಕಾಗಿಲ್ಲ.
ಬದಲಿಗೆ ಆಧಾರ್ ಆಧರಿತ ಎಲೆಕ್ಟ್ರಾನಿಕ್ ದೃಢೀಕರಣ ಕೋಡ್ ಮೂಲಕ ಈ ದಾಖಲೆಯನ್ನು ದೃಢೀಕರಿಸಲಾಗುತ್ತದೆ. ತೆರಿಗೆದಾರರಿಗೆ ಸುಲಭವಾಗಲೆಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಈ ಹೊಸ ನಿಯಮ ಜಾರಿ ಮಾಡಿದೆ. ಅದರಂತೆ, 2015-16ರ ಐಟಿಆರ್ ಅರ್ಜಿಯಲ್ಲಿ ಹೊಸ ಕಾಲಂ ಸೇರಿಸಲಾಗಿದೆ.
ಅದರಲ್ಲಿ ತೆರಿಗೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಈ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಒನ್ ಟೈಂ ಪಾಸ್ವರ್ಡ್ ಮೂಲಕ ದೃಢೀಕರಿಸುತ್ತದೆ. ಇಲಾಖೆಯ ಇ-ಫೈಲಿಂಗ್ ಲಿಂಕ್ನ ವೆಬ್ಸೈಟ್ಗೆ ಶೀಘ್ರದಲ್ಲೇ ಇದನ್ನು ಸೇರಿಸಲಾಗುತ್ತದೆ.
ಹೀಗಾಗಿ ತೆರಿಗೆದಾರರು ಬೆಂಗಳೂರಿನಲ್ಲಿರುವ ಸಿಪಿಸಿಗೆ ಸ್ವೀಕೃತಿ ಪತ್ರವನ್ನು ಕಳುಹಿಸುವ ಕಷ್ಟ ಇರುವುದಿಲ್ಲ.
Advertisement