ವಾಣಿಜ್ಯ
ರಾಜ್ಯಾದ್ಯಂತ ಈಎಸ್ಐ ಯೋಜನೆ ವಿಸ್ತರಣೆ
ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈಎಸ್ಐ ಯೋಜನೆಯನ್ನು ರಾಜ್ಯದ ಇನ್ನೂ 4 ಜಿಲ್ಲೆಗಳಲ್ಲಿ ಪೂರ್ಣವಾಗಿ ಜಾರಿ ಮಾಡಿದೆ.
ಬೆಂಗಳೂರು: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈಎಸ್ಐ ಯೋಜನೆಯನ್ನು ರಾಜ್ಯದ ಇನ್ನೂ 4 ಜಿಲ್ಲೆಗಳಲ್ಲಿ ಪೂರ್ಣವಾಗಿ ಜಾರಿ ಮಾಡಿದೆ. ಇದರಿಂದಾಗಿ ಯೋಜನೆಯನ್ನು ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಿರುವುದಾಗಿ ಈಎಸ್ಐ ಪ್ರಾದೇಶಿಕ ಕಚೇರಿಯ ಪ್ರಕಟಣೆ ತಿಳಿಸಿದೆ.
ಈಎಸ್ಐಸಿ 2.0 ಸುಧಾರಣಾ ಪ್ರಕ್ರಿಯೆ ಅಂಗವಾಗಿ ಈ ಮುಂಚೆ ರಾಜ್ಯದ 26 ಜಿಲ್ಲೆಗಳಲ್ಲಿ ದಿನಾಂಕ 01-05-2016 ರಿಂದ ಜಾರಿಗೆ ಬರುವಂತೆ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈಗ ರಾಜ್ಯದ ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ದಿನಾಂಕ 01-09-2016 ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಲಾಗಿದೆ ಎಂದು ಈಎಸ್ಐ ಪ್ರಾದೇಶಿಕ ನಿರ್ದೇಶಕ ಜೆ.ಹೆಚ್. ನಾಯಕ್ ಹೇಳಿದ್ದಾರೆ.
ಎಲ್ಲಾ ಉದ್ಯೋಗದಾತರು ಆನ್ ಲೈನ್ ಮೂಲಕ www.esic.in ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ರಿಜಿಸ್ಟರ್ ಮಾಡಿದ ಮೊದಲ ದಿನದಿಂದ ಉದ್ಯೋಗಿಗಳು ಕೆಲವೊಂದು ಪ್ರಯೋಜನಗಳನ್ನು ಪಡದುಕೊಳ್ಳಲು ಅರ್ಹರಾಗುತ್ತಾರೆ ಎಂದು ನಿಗಮ ತಿಳಿಸಿದೆ.