ನವದೆಹಲಿ: ಆಧಾರ್ ಕಾರ್ಡು ಇಲ್ಲವೆಂದು ಬ್ಯಾಂಕುಗಳು ತಿಂಗಳ ಪಿಂಚಣಿ ಭತ್ಯೆಯನ್ನು ಪಿಂಚಣಿದಾರರಿಗೆ ಕೊಡದೆ ನಿರಾಕರಿಸಬಾರದು ಎಂದು ಉದ್ಯೋಗ ಭವಿಷ್ಯನಿಧಿ ಸಂಸ್ಥೆ(ಇಪಿಎಫ್ಒ) ಮನವಿ ಮಾಡಿದೆ. ಅಗತ್ಯಬಿದ್ದರೆ ಪಿಂಚಣಿದಾರರ ಬದಲಿ ಗುರುತು ಪತ್ರವನ್ನು ಬಳಸಬೇಕೆಂದು ಅದು ಹೇಳಿದೆ.
ಪಿಂಚಣಿ ವಿತರಣೆಯ ಎಲ್ಲಾ ಬ್ಯಾಂಕುಗಳು ಮತ್ತು ಅಂಚೆಸೇವೆಗಳಿಗೆ ನಿನ್ನೆ ಸುತ್ತೋಲೆ ಹೊರಡಿಸಿರುವ ಉದ್ಯೋಗ ಭವಿಷ್ಯನಿಧಿ ಸಂಸ್ಥೆ, ಆಧಾರ್ ಕಾರ್ಡು ಹೊಂದಿಲ್ಲದಿರುವ ಪಿಂಚಣಿದಾರರಿಗೆ ಬದಲಿ ವ್ಯವಸ್ಥೆ ಮಾಡುವ ಪಟ್ಟಿಯನ್ನು ತಯಾರಿಸಿದೆ.
ಆಧಾರ್ ನೋಂದಣಿ ಮಾಡಿಸಿಕೊಳ್ಳಲು ಪಿಂಚಣಿದಾರರಿಗೆ ಬ್ಯಾಂಕು ವ್ಯವಸ್ಥೆ ಮಾಡಿಕೊಡಬೇಕೆಂದು ಕೂಡ ಸಂಸ್ಥೆ ಸೂಚಿಸಿದೆ. ಆಧಾರ್ ಗೆ ನೋಂದಣಿ ಮಾಡಿಕೊಂಡಿರುವ ಪಿಂಚಣಿದಾರರ ಪೇಪರ್ ಸರ್ಟಿಫಿಕೇಟ್ ಗಳನ್ನು ಸ್ವೀಕರಿಸಬಹುದು ಎಂದು ಕೂಡ ಹೇಳಿದೆ. ಅದು ಡಿಜಿಟಲ್ ಚಾಲಿತ ಪ್ರಮಾಣಪತ್ರದ ಮೌಲ್ಯವನ್ನು ಹೊಂದಿರುತ್ತದೆ.
ಪಿಂಚಣಿಯನ್ನು ವಿತರಿಸಲು ಬ್ಯಾಂಕು ಜೊತೆಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಬ್ಯಾಂಕಿನ ಜವಾಬ್ದಾರಿಗಳು ಮತ್ತು ಕರ್ತವ್ಯಗಳು ಸೇರಿಕೊಂಡಿವೆ. ನಿವೃತ್ತಿ ವೇತನದಾರರಿಂದ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಬದುಕಿರುವ ಪ್ರಮಾಣಪತ್ರ / ಮರು ಮದುವೆಯಾಗಿಲ್ಲದಿರುವ ಪ್ರಮಾಣಪತ್ರ ಇತ್ಯಾದಿಗಳನ್ನು ಪಿಂಚಣಿದಾರರಿಂದ ಪಡೆದು ಅಗತ್ಯ ಕ್ರಮಗಳಿಗೆ ಭವಿಷ್ಯನಿಧಿ ಸಂಸ್ಥೆಗಳಿಗೆ ನೀಡಬೇಕಾಗುತ್ತದೆ.
ಬ್ಯಾಂಕುಗಳ ಸಂಬಂಧಪಟ್ಟ ಶಾಖೆಗಳು ಪತ್ರ ವಿಧಾನದಲ್ಲಿ ಬದುಕಿರುವ ಪ್ರಮಾಣಪತ್ರವನ್ನು ನೀಡುತ್ತವೆ.
Advertisement