ಮುಂಬೈ: ಶತಕೋಟಿ ವ್ಯವಹಾರದ ವಜ್ರೋದ್ಯಮಿ ನೀರವ್ ಮೋದಿ ಮತ್ತು ಅವರ ವ್ಯಾಪಾರ ಪಾಲುದಾರ ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಭಾರೀ ಮೊತ್ತದ ಹಗರಣ ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಇಂದು ಸಮನ್ಸ್ ಜಾರಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್ಎ)ಯಡಿ ಇವರಿಬ್ಬರಿಗೂ ಸಮನ್ಸ್ ಜಾರಿ ಮಾಡಲಾಗಿದ್ದು ವಾರದೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.
ಇಬ್ಬರೂ ಭಾರತದಲ್ಲಿ ಇಲ್ಲದಿರುವುದರಿಂದ ಅವರಿಗೆ ಸೇರಿದ ಸಂಸ್ಥೆಗಳ ನಿರ್ದೇಶಕರಿಗೆ ನೊಟೀಸನ್ನು ಹಸ್ತಾಂತರಿಸಲಾಗಿದೆ.
ನೀರವ್ ಮೋದಿ ವಜ್ರ ಮತ್ತು ಆಭರಣ ವ್ಯಾಪಾರಿಯಾಗಿದ್ದರೆ, ಚೊಕ್ಸಿ ಗೀತಾಂಜಲಿ ಜೆಮ್ಸ್ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ದೂರಿನ ಮೇರೆಗೆ ಸಿಬಿಐ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಇಬ್ಬರ ವಿರುದ್ಧವೂ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಕೇಸು ದಾಖಲಿಸಲಾಗಿದೆ.
ನೀರವ್ ಮೋದಿ ಮತ್ತು ಚೊಕ್ಸಿಯವರಿಗೆ ಸೇರಿದ ಕಚೇರಿಗಳು, ಶೋರೂಂ ಮತ್ತು ನಿವಾಸಗಳ ಮೇಲೆ ನಿನ್ನೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಅನೇಕ ದಾಖಲೆಗಳನ್ನು ಪರಿಶೀಲಿಸಿದೆ.