ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು 13,000 ಕೋಟಿ ರೂಪಾಯಿ ವಂಚನೆ ಎಸಗಿದ ಉದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಹಗರಣ ಪ್ರಕರಣ ಹಿನ್ನೆಲೆಯಲ್ಲಿ ಸಾಲ ಒಪ್ಪಂದ ಪತ್ರ(ಎಲ್ಒಯು)ವನ್ನು ಬ್ಯಾಂಕುಗಳು ನೀಡುವುದನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ಬ್ಯಾಂಕುಗಳು ಸಾಲ ಒಪ್ಪಂದ ಪತ್ರ ಮತ್ತು ಸಾಲ ಭರವಸೆ ಪತ್ರ(ಎಲ್ ಒಸಿ) ನೀಡುವ ಪದ್ಧತಿ ರದ್ದುಪಡಿಸಿ ಆರ್ ಬಿಐ ಆದೇಶ ಹೊರಡಿಸಿದೆ.
ವಿಸ್ತೃತ ಮಾರ್ಗಸೂಚಿಗಳ ವಿಮರ್ಶೆಯ ಆಧಾರದ ಮೇಲೆ, ಭಾರತಕ್ಕೆ ಆಮದು ಮಾಡಿಕೊಳ್ಳುವ ವಹಿವಾಟುಗಳಿಗೆ ಬ್ಯಾಂಕುಗಳು ಎಲ್ಒಯು ಮತ್ತು ಎಲ್ಒಸಿ ಗಳನ್ನು ನೀಡುವುದನ್ನು ತಡೆ ನೀಡಿ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ತರಲಾಗಿದೆ ಎಂದು ಆರ್ ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕ್ರಮವಾಗಿ ಎಲ್ಒಯು ಮತ್ತು ಆಮದು ಬಿಲ್ ಗಳ ಹಣ ಪಾವತಿಗೆ ವಿದೇಶಿ ಪತ್ರಗಳ ಅಕ್ರಮ ವರ್ಗಾವಣೆ ಮಾಡಿ 12,967 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕ್ರಮ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿವೆ.
ನಿಬಂಧನೆಗಳ ಅನುಸರಣೆ ಆಧಾರದ ಮೇಲೆ ಭಾರತಕ್ಕೆ ಆಮದು ಮಾಡಿಕೊಳ್ಳುವುದಕ್ಕೆ ವಹಿವಾಟುಗಳಿಗೆ ಬ್ಯಾಂಕ್ ಖಾತ್ರಿ ಮತ್ತು ಲೆಟರ್ಸ್ ಆಫ್ ಕ್ರೆಡಿಟ್ ನೀಡಬಹುದು ಎಂದು ಆರ್ ಬಿಐ ಅಧಿಸೂಚನೆಯಲ್ಲಿ ವಿವರಿಸಿದೆ.
Advertisement