ಜಿಎಸ್ಟಿ ಪರಿಹಾರ ತೆರಿಗೆಯಲ್ಲಿ ಕೊರತೆ: ರಾಜ್ಯಗಳಿಗೆ ನೀಡಲು 1.58 ಲಕ್ಷ ಕೋಟಿ ರೂ. ಸಾಲ ಪಡೆಯಲು ಕೇಂದ್ರ ಮುಂದು

ರಾಜ್ಯಕ್ಕೆ ನೀಡಬೇಕಾದ ಜಿಎಸ್ ಟಿ ಪರಿಹಾರ ತೆರಿಗೆ(GST compensation cess)ಯಲ್ಲಿ ಆಗುತ್ತಿರುವ ಕೊರತೆಯನ್ನು ಸರಿತೂಗಿಸಲು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಶೇಷ ಆಯ್ಕೆ ಮೂಲಕ ಸಾಲ ಪಡೆಯಲು ಮುಂದಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ರಾಜ್ಯಕ್ಕೆ ನೀಡಬೇಕಾದ ಜಿಎಸ್ ಟಿ ಪರಿಹಾರ ತೆರಿಗೆ(GST compensation cess)ಯಲ್ಲಿ ಆಗುತ್ತಿರುವ ಕೊರತೆಯನ್ನು ಸರಿತೂಗಿಸಲು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಶೇಷ ಆಯ್ಕೆ ಮೂಲಕ ಸಾಲ ಪಡೆಯಲು ಮುಂದಾಗಿದೆ. ರಾಜ್ಯಗಳಿಗೆ ನೀಡಬೇಕಾಗಿರುವ ಪರಿಹಾರ ತೆರಿಗೆ ಮೊತ್ತಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ 1.58 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲು ಕೇಂದ್ರ ಅಂದಾಜಿಸಿದೆ.

ಜಿಎಸ್ಟಿ ಪರಿಹಾರ ತೆರಿಗೆ ನೀಡಿಕೆಯಲ್ಲಿ ಕಳೆದ ವರ್ಷದ ಸೂತ್ರವನ್ನೇ ಈ ವರ್ಷ ಕೂಡ ಅನುಸರಿಸಲಾಗುತ್ತಿದೆ. ಇದಕ್ಕಾಗಿ ಅಂದಾಜಿನ ಪ್ರಕಾರ ಕೇಂದ್ರ ಸರ್ಕಾರ 1.58 ಲಕ್ಷ ಕೋಟಿ ರೂಪಾಯಿಗಳನ್ನು ಸಾಲ ಪಡೆದುಕೊಳ್ಳಬೇಕಾದ ಅನಿವಾರ್ಯತೆಯಿದ್ದು ನಂತರ ಅದನ್ನು ರಾಜ್ಯಗಳಿಗೆ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಳೆದ ವರ್ಷ ಜಿಎಸ್ಟಿ ಪರಿಹಾರ ನೀಡಿಕೆಗೆ 1.10 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲು ಜಿಎಸ್ಟಿ ಮಂಡಳಿ ನಿರ್ಧರಿಸಿತ್ತು. ಕಳೆದ ವರ್ಷದ ಸೂತ್ರವನ್ನೇ ನಾವು ಅನುಸರಿಸಿದರೆ ಸಾಲದ ಅಂತರದ ಮೊತ್ತ ಈ ವರ್ಷ 1.58 ಲಕ್ಷ ಕೋಟಿ ರೂಪಾಯಿಯಾಗುತ್ತದೆ. ರಾಜ್ಯದ ಮಟ್ಟದಲ್ಲಿ ನಾವು ಲೆಕ್ಕಾಚಾರ ಹಾಕಿದರೆ ವ್ಯತ್ಯಾಸ ಸಾವಿರಾರು ಕೋಟಿ ರೂಪಾಯಿಗಳಾಗುತ್ತದೆ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ತರುಣ್ ಬಜಾಜ್ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ವರ್ಷ ಜಿಎಸ್ಟಿ ಪರಿಹಾರ ತೆರಿಗೆ ಕೊರತೆ 1.10 ಲಕ್ಷ ಕೋಟಿ ರೂಪಾಯಿ ಮೀರಿತ್ತು. ಈ ವರ್ಷ ಅದು 1.58 ಲಕ್ಷ ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆದರೆ ಅದರಿಂದ ಕೇಂದ್ರ ಸರ್ಕಾರ ಬಾಕಿ ಉಳಿಕೆ ಪರಿಹಾರ ಮೊತ್ತವನ್ನು ರಾಜ್ಯಗಳಿಗೆ ನೀಡಬಹುದಾಗಿದೆ. ಕಳೆದ ವರ್ಷ ಸಂಪೂರ್ಣ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟು ಹೋಗಿತ್ತು, ಆದರೆ ಈ ವರ್ಷ ಅಷ್ಟೊಂದು ಗಂಭೀರ ಪರಿಣಾಮ ಬೀರಲಿಕ್ಕಿಲ್ಲ ಅನಿಸುತ್ತಿದೆ ಎಂದಿದ್ದಾರೆ.

ನಾವು ತಿಂಗಳಿಗೆ ಸರಾಸರಿ 1.15 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಬಹುದಾದರೆ, ಪರಿಹಾರದ ಕೊರತೆಯು ಸುಮಾರು 1.25 ಲಕ್ಷ ಕೋಟಿ ರೂಪಾಯಿ. ಆದ್ದರಿಂದ ನಾವು ಕಳೆದ ವರ್ಷದ ಕೊರತೆಗೆ ರಾಜ್ಯಗಳನ್ನು ಇನ್ನೂ 30,000 ಕೋಟಿ ರೂಪಾಯಿಗಳಿಂದ ಸರಿದೂಗಿಸಬಹುದು. ನಾವು ಈ ವಿಷಯವನ್ನು ಸಭೆಯಲ್ಲಿ ಮಂಡಿಸಿ ಈ ಮೊತ್ತವನ್ನು ಸಾಲ ಪಡೆಯಬಹುದೇ ಎಂದು ನಾವು ರಾಜ್ಯಗಳನ್ನು ಮತ್ತು ಆರ್ ಬಿಐಯನ್ನು ಸಂಪರ್ಕಿಸಿ ಕೇಳುತ್ತೇವೆ ಎಂದರು.

ಸಾಲ ಪಡೆದ ನಿಖರವಾದ ಮೊತ್ತವನ್ನು ತಲುಪಲು ಇಲಾಖೆ ಶೀಘ್ರದಲ್ಲೇ ರಾಜ್ಯಗಳಿಗೆ ಪತ್ರ ಬರೆಯಲಿದೆ ಮತ್ತು ಈ ನಿಟ್ಟಿನಲ್ಲಿ ಹೊಸ ಸಾಲ ಪಡೆಯುವ ಪ್ರಸ್ತಾವನೆಯನ್ನು ಮುಂದಿಡಲಾಗುವುದು. ರಾಜ್ಯಗಳಿಗೆ ಸಂರಕ್ಷಿತ ಆದಾಯದ ಆಡಳಿತದ ವಿಸ್ತರಣೆಯ ಕುರಿತು ಚರ್ಚಿಸಲು ಜಿಎಸ್‌ಟಿ ಕೌನ್ಸಿಲ್ 2-3 ತಿಂಗಳಲ್ಲಿ ವಿಶೇಷ ಅಧಿವೇಶನವನ್ನು ಕರೆಯಲು ನಿನ್ನೆ ನಿರ್ಧರಿಸಿತು.

ಈ ಮಧ್ಯೆ, ಎಲ್ಲಾ ರಾಜ್ಯಗಳು ಸಂರಕ್ಷಿತ ಆದಾಯ ವ್ಯವಸ್ಥೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com