

ಕೆಲ ದಿನಗಳ ಹಿಂದೆಯಷ್ಟೆ ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಮಾಡಿಕೊಂಡ 'ಬ್ರಹ್ಮ' ಚಿತ್ರತಂಡ ಮತ್ತೆ ಮಾಧ್ಯಮಗಳ ಮುಂದೆ ಸಿಂಪಲ್ ಆಗಿ ಪ್ರತ್ಯಕ್ಷಗೊಂಡಿತು. ಈ ಬಾರಿ ಕೈಯಲ್ಲಿ 'ಪ್ಲಾಟಿನಂ ಡಿಸ್ಕ್' ಹಿಡಿದುಕೊಂಡು ಬಂದಿತ್ತು. ಸರಳವಾದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಹಾಡುಗಳ 'ಪ್ಲಾಟ್'ಫಾರಂ ಬಗ್ಗೆ ಹೇಳಿಕೊಂಡರು ನಿರ್ದೇಶಕ ಆರ್. ಚಂದ್ರು ಆಂಡ್ ಟೀಮ್. ವಿಶೇಷ ಅಂದರೆ, ಇಲ್ಲಿವರೆಗೂ 75 ಸಾವಿರ ಆಡಿಯೋ ಸಿಡಿ ಮಾರಾಟವಾಗಿರುವುದು. ನಟ ಉಪೇಂದ್ರ ಹಾಗೂ ನಟಿ ಪ್ರಣೀತಾ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರ, ಏಕಕಾಲದಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ತೆರೆ ಕಾಣುತ್ತಿದೆ. ಉಪೇಂದ್ರ ನಟಿಸಿರುವ ಚಿತ್ರವೊಂದರ ಆಡಿಯೋ ಸಿಡಿ ಇಷ್ಟು ದೊಡ್ಡ ಮಟ್ಟದಲ್ಲಿ ಮಾರಾಟವಾಗಿರುವುದು ಇದೇ ಮೊದಲು ಅನಿಸುತ್ತದೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಯಾವುದೇ ಒಂದು ಚಿತ್ರದಲ್ಲಿ ಹಾಡುಗಳು ಗೆದ್ದರೆ ಆ ಸಿನಿಮಾ ಅರ್ಧ ಯಶಸ್ಸು ಕಂಡಂತೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಮ್ಮ ಚಿತ್ರಕ್ಕೆ ಗೆಲುವು ಸಿಕ್ಕಿದೆ. ಹಾಡುಗಳಿಗೆ ತುಂಬಾ ಚೆನ್ನಾಗಿ ಪ್ರತಿಕ್ರಿಯೆಗಳು ಬರುತ್ತಿವೆ. ತೆಲುಗು, ತಮಿಳಿನಲ್ಲೂ ಅದ್ಭುತ ರೆಸ್ಪಾನ್ಸ್ ಸಿಗಲಿದೆ ಎನ್ನುವ ಭವರಸೆ ಇದೆ. ಉಪೇಂದ್ರ ಅವರು ಚಿತ್ರದ ಆಧಾರಸ್ತಂಭ. ಅವರ ನಟನೆ, ಸಾಹಸ ದೃಶ್ಯಗಳು ತುಂಬಾ ರೋಚಕವಾಗಿ ಮೂಡಿಬಂದಿವೆ. ಗುರುಕಿರಣ್ರ ಸಂಗೀತ ಚಿತ್ರದ ಬ್ಯಾಕ್ ಬೋನ್ನಂತೆ ಕೆಲಸ ಮಾಡಿದೆ ಎಂಬುದು ನಿರ್ದೇಶಕ ಆರ್. ಚಂದ್ರು ಅವರ ಮಾತು.
ನಟ ಉಪೇಂದ್ರ ಅವರು ಕುಂಭಕೋಣಂನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಿಂದ ಪತ್ರಿಕಾಗೋಷ್ಟಿಗೆ ಬಂದಿರಲಿಲ್ಲ. ಚಿತ್ರದ ಆಡಿಯೋ ಸಿಡಿ ಮಾರಾಟದ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ತೆಗೆದುಕೊಂಡಿದೆ. ಸಂಗೀತ ನಿರ್ದೇಶಕ ಗುರುಕಿರಣ್, ಗೀತಾ ರಚನೆಕಾರ ಕವಿರಾಜ್, ನಿರ್ಮಾಪಕ ಮಂಜುನಾಥ್ ಬಾಬು, ಆನಂದ್ ಆಡಿಯೋ ಮೋಹನ್, ನಟಿ ಪ್ರಣೀತಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಣೀತಾ ತುಂಬಾ ಸಂತೋಷವಾಗಿದ್ದರು. ಕನ್ನಡದಲ್ಲಿ ಮತ್ತೆ ತನ್ನ ಅಭಿನಯದ ಸ್ಟಾರ್ ಆಂಡ್ ಬಿಗ್ ಬಜೆಟ್ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿರುವುದಾಗಿ ಹೇಳಿಕೊಂಡರು. ಸಂಗೀತ ನಿರ್ದೇಶಕ ಗುರುಕಿಣ್ ಮತ್ತೊಂದು ಹಿಟ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದೇನೆ ಎಂದರು. ಚಿತ್ರಕ್ಕೆ ಹಾಕಿರುವ ಬಂಡವಾಳ ಒಂದು ರೀತಿಯಲ್ಲಿ ಈಗಾಗಲೇ ಬಂದಂತೆ. ಮುಂದೆ ಮತ್ತಷ್ಟು ಲಾಭ ಬರುತ್ತದೆ ಎನ್ನುವ ಭರವಸೆ ನಿರ್ಮಾಪಕ ಮಂಜುನಾಥ್ ಬಾಬು ಅವರದ್ದು. ಒಂದು ತಂಡ ತುಂಬಾ ನಿರೀಕ್ಷಿತ ಚಿತ್ರವನ್ನು ಕೊಟ್ಟಿರುವುದಾಗಿ ಕವಿರಾಜ್ ಹೇಳಿದರು.
-ಕೇಶವ
Advertisement