ಈಗವರ ತಪಸ್ಸು ಅತ್ಯಂತ ಸಾತ್ವಿಕ . ಯಾವುದೇ ಹಠ ತೊಡಕುಗಳಿಲ್ಲ . ಕೇವಲ ಬ್ರಹ್ಮಾಕರ್ಷಣೆ ; ಅದಕ್ಕಾಗಿ ತಪ . ಸದಾ ಬ್ರಹ್ಮ , ಅವನ ಭಂಗಿ , ಅವನ ಮಾತು , ಅವನ ನಗು , ಅವನ ಸಾಂತ್ವನ ... ಹೌದು , ಈ ಬ್ರಹ್ಮಾ ಎಂದೂ ಮುಖ ಗಂಟು ಹಾಕಿದ್ದೇ ಇಲ್ಲ , ಸಿಟ್ಟುಗೊಂಡಿದ್ದೇ ಇಲ್ಲ . ಬ್ರಹ್ಮರ್ಷಿಗಳೇ ಸಾತ್ವಿಕ ಶ್ರೇಷ್ಠರಾಗಿರಬೇಕಾದರೆ , ಬ್ರಹ್ಮಇನ್ನೆಂತಿರಬೇಕು ? ಬ್ರಹ್ಮನೇ ಹೀಗಿರಬೇಕಾದರೆ ಇವನ ಅಪ್ಪ ವಿಷ್ಣು ಅವನೆಂತಿರಬೇಕು ? ಇಷ್ಟೇ ಅಲ್ಲದೇ, ತನ್ನದೇ ಸೃಷ್ಟಿಯನ್ನು , ತನ್ನದೇ ಮಕ್ಕಳನ್ನು ಈ ಜೀವಕೋಟಿಯನ್ನೆಲ್ಲ ಈ ಸಮಸ್ತ ಸಸ್ಯ ಸಂಪತ್ತನ್ನೆಲ್ಲ ಪ್ರಳಯದಲ್ಲಿ ನುಂಗಿ ಹಾಕುವ ಆ ರುದ್ರ , ಪ್ರಳಯ ರುದ್ರ ಇನ್ನೆಷ್ಟು ಸ್ಥಿತಪ್ರಙ್ಞನಿರಬೇಕು ? ಈ ಮೂವರನ್ನೂ ಒಡಲಲ್ಲಿ ಹೊತ್ತ ಆ ಪರಬ್ರಹ್ಮ ಎಂತಿರಬೇಕು , ಹೇಗಿರಬೇಕು , ಎಲ್ಲಿರಬೇಕು ? ಆ ಪರಬ್ರಮ್ಹ ತತ್ವವನ್ನು ಕುರಿತು ಮಾತನಾಡುವಾಗೆಲ್ಲ ನಚಿಕೇತರಾಗಲಿ , ಯಾಙ್ಞವಲ್ಕ್ಯರಾಗಲಿ , ವಸಿಷ್ಠರಾಗಲಿ , ವಾಮದೇವರಾಗಲಿ , ಅತ್ರಿಗಳಾಗಲಿ ಕಣ್ಮುಚ್ಚಿ ಕೈ ಮುಗಿದು ಸುಮ್ಮನಾಗಿಬಿಡುವರಾಗಲಿ , ಏನನ್ನೂ ಹೇಳುವುದಿಲ್ಲ . ವಿವರಿಸಲು ಕೇಳಿದರೆ , ಅದು ಅಗಮ್ಯ , ಅವರ್ಣನೀಯ , ಉಪಮಾತೀತ , ಅದೃಷ್ಟ , ಅಗ್ರಾಹ್ಯ , ಕೇವಲ ಅನುಭವಸಿದ್ಧ ಎನ್ನುತ್ತಿದ್ದರು . ತಕ್ಷಣವೇ ತಮ್ಮ ವಾಕ್ಯ ಪೂರ್ತಿ ಮಾಡುವಂತೆ , " ... ಹಾಗಾಗುವ ಅನುಭವ , ಸ್ವಾನುಭವ , ನಿಮಿಷದಷ್ಟಾದರೆ ಅದು ನಮ್ಮ ಪುಣ್ಯ " ಎಂದು ಕೈ ಜೋಡಿಸುತ್ತಿದ್ದರು . ಅಂತಹ ದೊಡ್ಡ ದೊಡ್ಡವರೇ ಆ ಪರಬ್ರಮ್ಹದ ಬಗ್ಗೆ ಅಂತಹ ದೊಡ್ಡ ಮಾತಾಡಿದಾಗ ನನ್ನಂತಹ ಸಣ್ಣವರಿಗೆ ; ಇನ್ನೂ ಈ ಬ್ರಮ್ಹಾ ಗ್ರಾಮದಲ್ಲಿ ಈಗ ತಾನೆ ಪ್ರವೇಶ ಮಾಡುತ್ತಿರುವ ನನ್ನಂತಹವರಿಗೆ ಅದೆಲ್ಲಿ ಅರ್ಥವಾದಾತು ? ನಮಗೆ ಸದ್ಯಕ್ಕೆ ಈ ಬ್ರಹ್ಮನೇ ಸಾಕು . ಚಲಿಸುತ್ತಿದ್ದ ಚಿತ್ತವನ್ನು ಕೇಂದ್ರೀಕರಿಸಿ ಮತ್ತೆ ತಮಗೀಗಾಗಲೇ ಕಂಡಿದ್ದ ಬ್ರಹ್ಮನನ್ನು ಮನಸ್ಸಿನ ಕಣ್ಣಲ್ಲಿ ಕೂಡಿಸುತ್ತಿದ್ದರು .