ಅಂದು ವಿಶ್ವಮಿತ್ರರು ಕಣ್ಣು ಬಿಟ್ಟಾಗ ಋಷಿ ಸಂಘವೊಂದು ತಾವು ಬಹಿರ್ಮುಖರಾಗುವುದನ್ನೇ ಎದುರು ನೋಡುತ್ತ ನಿಂತಿದ್ದರು. ಎಲ್ಲರೂ ಬಗ್ಗಿ ಎದ್ದರು. ವೃದ್ಧ ಮುಖಂಡನೊಬ್ಬ ಹೇಳಿದ, " ಭಗವಾನರೇ, ನಮ್ಮ ಪುಣ್ಯದಿಂದ ನೀವು ಈ ಪ್ರಾಂತ್ಯಕ್ಕೆ ಬಂದಿದ್ದೀರಿ. ನಮ್ಮೊಡನೆ ನೀವಿರುವುದೇ ಒಂದು ಗೌರವ. ನಾವೊಂದು ದೊಡ್ಡ ಯಙ್ಞಾರಂಭ ಮಾಡಿ ಇಂದಿಗೆ 48 ದಿನಗಳಾದವು. ಇಂದು ಪೂರ್ಣಾಹುತಿ. ತಾವು ಬಂದರೆ ನಮ್ಮ ಭಾಗ್ಯ. ನಮ್ಮೊಡನೆ ಭೋಜನ ಸ್ವೀಕರಿಸಿದರೆ ನಮ್ಮ ಪುಣ್ಯ" . ವಿಶ್ವಮಿತ್ರರು ಯೋಚಿಸಿದರು, " ಹೌದು , ನಾನು ಊಟ ಮಾಡಿ ಎಷ್ಟು ಕಾಲ ಆಗಿರಬಹುದು? ’ ತಾವು ಹಿಂದೊಮ್ಮೆ ಬಯಸಿದಾಗ ಏನೇನೋ ಭಕ್ಷ್ಯಗಳು ಬಂದಿದ್ದವು. ಅದೇ ಅದೇ, ಹಾಗೆ ಉಂಡು ಎಷ್ಟು ಕಾಲ? ಇರಬಹುದು ಒಂದು ವರ್ಷ? ಅಥವ ಅದಕ್ಕೂ ಹೆಚ್ಚು? ಹಾಗೆ ಆಸೆಯಿಂದ ಸೃಷ್ಟಿಸಿದ್ದಕ್ಕೆ ತನ್ನ ಖಾತೆಯಲ್ಲಿ ಕೊಂಚ ಕಡಿಮೆಯಾಗಿತ್ತು. ’ ಬೇಡ ಬೇಡ! ತನ್ನ ಗುರಿ ಮುಟ್ಟುವವರೆವಿಗೆ ನನ್ನ ಸಂಚಿತ ಪುಣ್ಯವನ್ನು ಖರ್ಚು ಮಾಡುವುದೇ ಬೇಡ" , ಎಂದು ಅಂದಿನಿಂದ ಅವರು ಹೊಟ್ಟೆ ತುಂಬ ಊಟ ಮಾಡೇ ಇರಲಿಲ್ಲ. ಹೊಟ್ಟೆ ತುಂಬ ಏನು, ಊಟವನ್ನೇ ಮಾಡಿರಲಿಲ್ಲ! ನಿತ್ಯವೂ ಒಂದೆರಡು ಪ್ರಕೃತಿ ದತ್ತ ಹಣ್ಣುಗಳು; ಅಷ್ಟೇ. ಇದೀಗ ಇವರು ಬಂದಿದ್ದಾರೆ. ಅಪ್ರಾರ್ಥಿತವಾಗಿ ಔತಣ. ಆಯಾಚಿತವಾಗಿ ಯಙ್ಞ ಸಂತರ್ಪಣೆ. ಈ ನಾಲಗೆಯೂ ಬಯಸುತ್ತಿದೆ, ಒಪ್ಪಿಗೆ ಸೂಚಿಸುವಂತೆ ತಲೆಯಾಡಿಸಿದರು. ಬಂದ ಕೆಲಸವಾಯಿತೆಂಬ ಸಂಭ್ರಮದಿಂದ ಮುನಿಗಳು " ಜೈ ಗುರುದೇವ " ಎನ್ನುತ್ತ ಹೊರಟರು.