ಕ್ಷಣ ಕಾಲ ಯೋಚಿಸಿದ ಈಶ್ವರ ಹೇಳಿದ, "ಕರೆ ಗಂಗೆಯನ್ನು! ನಾನಾಕೆಯನ್ನು ನನ್ನ ಶಿರದಲ್ಲಿ ತಡೆ ಹಿಡಿಯುವೆ. "ಹೀಗೆ ಹೇಳಿದ ರುದ್ರ, ತನ್ನೆರಡು ಕಾಲುಗಳನ್ನಗಲಿಸಿ ಭದ್ರವಾಗಿ ನಿಂತು, ಕೈಗಳಲ್ಲಿದ್ದ ತ್ರಿಶೂಲ-ಡಮರುಗಳು ಮಾಯವಾಗುತ್ತಿದ್ದಂತೆಯೇ, ಕೈಗಳನ್ನು ಸೊಂಟದ ಮೇಲಿಟ್ಟು, ತಲೆಯನ್ನೊಮ್ಮೆ ಕೊಡವಿದ. ಕಟ್ಟಿದ್ದ ಶಿಖೆ ಬಿಚ್ಚಿತು, ಶಿಖರ ವಿಸ್ತರಿಸಿತು, ಕೇಶಗಳು ಬೆಳೆಯತೊಡಗಿದುವು. ಸುತ್ತಲೂ ಕೂದಲುಗಳ ತಟ್ಟೆಯೊಂದು ಸಿದ್ಧವಾಯಿತು. ಸಿದ್ಧವಾದಂತೆ; ಆ ತಟ್ಟೆ ಅಗಲವಾಗುತ್ತಿರುವಂತೆ; ಬೆಳೆಯುತ್ತಿರುವಂತೆ; ದಿಕ್ಕುಗಳಿಗೆ ವ್ಯಾಪಿಸುತ್ತಿರುವಂತೆ; ಕಪ್ಪಗಿನ ಕೂದಲುಗಳ ತಟ್ಟೆಯೊಂದು ಬಾಣಲೆಯಾಗಿ ಪರಿವರ್ತಿತವಾಗುತ್ತಿದ್ದಂತೆ, ಭಗೀರಥನಿಗೆ ಅಯೋಮಯ!!!! "ಗಂಗೆ, ಬಾರಮ್ಮ! ಮಾತು ಕೊಟ್ಟಿದ್ದಂತೆ ಬಾರಮ್ಮ. ನಿನ್ನ ವೇಗ ತಡೆಯುವಲು ಶಿವನೇ ಸಿದ್ಧನಾಗಿ ನಿನ್ನ ರಭಸಕ್ಕೆ ತನ್ನ ತಲೆಯನ್ನೇ ಒಡ್ಡಿದ್ದಾನೆ ಬಾರಮ್ಮ! ಈಶ್ವರನ ಶಿರೋ ನಿಲ್ದಾಣದಲ್ಲಿಳಿದು ನಿಧಾನವಾಗಿ ಧುಮ್ಮಿಕ್ಕಮ್ಮ, ಧರಣಿಗೆ. ಬಾ ತಾಯಿ, ಬಾ!"