(ಆತ್ಮೀಯರೆ, ಒಂದು ವಿನಂತಿ. ಈ ಗಂಗಾವತರಣ ಪ್ರಕರಣದಲ್ಲಿ ಒಂದು ಅಂಶವನ್ನು ಬಿಟ್ಟಿದ್ದೇನೆ, ಮತ್ತು ಒಂದು ಅಂಶವನ್ನು ಬದಲಿಸಿದ್ದೇನೆ. ಮೂಲದಲ್ಲಿ ಸಗರನ ಯಙ್ಞ, ಆ ಯಙ್ಞ ಪ್ರತಿನಿಧಿಯಾದ ಯಙ್ಞಾಶ್ವ, ಅದನ್ನು ಇಂದ್ರ ಅಪಹರಿಸುವುದು, ಆ ಅಶ್ವವನ್ನು ಹುಡುಕಲು ಸಗರ ಪುತ್ರರು ನೆಲವನ್ನು ಅಗೆದು ಪಾತಾಳಕ್ಕೆ ಹೋಗುವುದು, ಅಲ್ಲಿ ಅದು ಕಪಿಲ ಮಹರ್ಷಿಯ ಬಳಿ ಇರುವುದನ್ನು ಕಂಡು ಆ ಋಷಿಯ ಮೇಲೆ ಆಕ್ರಮಣ ಮಾಡಲು ನುಗ್ಗಿದಾಗ ಕಪಿಲರ ಹೂಂಕಾರ ಮಾತ್ರದಿಂದ ಅವರೆಲ್ಲ ಸುಟ್ಟು ಬೀಳುವುದು, ಕೊನೆಗೆ ಅಂಶುಮಂತ ಬಂದು, ಅವರ ನಾಶವನ್ನು ಕಂಡು, ಅವರಿಗೆ ತರ್ಪಣ ಕೊಡಲು ಹೋದಾಗ ಗರುತ್ಮಂತ ಬಂದು" ದೇವಲೋಕದ ಗಂಗೆ ಇವರ ಮೇಲೆ ಹರಿದರೆ ಮಾತ್ರ ಇವರಿಗೆ ಸದ್ಗತಿ" ಎಂಬುದು, ಈ ವಿಭಾವದಿಂದಾಗಿ ಅಂಶುಮಂತ, ದಿಲೀಪ, ಭಗೀರಥರು ಗಂಗೆಗಾಗಿ ತಪಸ್ಸು ಮಾಡುವುದು... ಇವೆಲ್ಲ ವಿವರವಾಗಿ ಬಂದಿದೆ.
ಆದರೆ ಸಗರ ಪುತ್ರರು ತೋಡಿದ ತಗ್ಗಿನಲ್ಲಿ (ಅದೆಷ್ಟೇ ದೊಡ್ಡದಿರಲಿ!!!!! ) ಮುಂದೆ ಗಂಗೆ ತುಂಬಿದ್ದರಿಂದ ಅದಕ್ಕೆ ಸಾಗರ ಎಂಬ ಹೆಸರು ಬಂದಿತು ಎಂಬುದು ಸಾಗರದ ವಿಸ್ತಾರದ ಕಲ್ಪನೆ ಇಲ್ಲದೇ, ಸಮುದ್ರಕ್ಕೆ ಮಾಡಿದ ಅವಮಾನವಾಗುತ್ತದೆ. ಸಗರ ಪುತ್ರರು ಪಾತಾಳಕ್ಕೆ ಹೋಗುವ ದಾರಿಯಲ್ಲಿ ಈ ಭೂಮಿಯನ್ನು ಹೊತ್ತಿರುವ ಆನೆಗಳು, ಹಾಗೂ ಅವುಗಳ ತಲೆ ಕೊಡಹುವುದರಿಂದ ಉಂಟಾಗುವ ಭೂಕಂಪ ಕಾರಣಗಳು, ಭೂಮಿ ದುಂಡಗಿದೆಯೆಂದು ಗೊತ್ತಿಲ್ಲದಾಗ ಮತ್ತು ಈ ಭೂಮಿಯನ್ನು ಅಷ್ಟ ದಿಗ್ಗಜಗಳು ಹೊತ್ತಿವೆ ಎಂಬ ಅಙ್ಞಾನದಿಂದ ಮಾತ್ರವೇ ಒಪ್ಪುವ ಪೌರಾಣಿಕ ವಿವರಣೆಯನ್ನು ನಂಬುವವರಿಗೆ ಮಾತ್ರ ಸರಿ ಕಾಣುತ್ತದೆ. ಅದು ಕಾರಣ ಈ ಸಗರೋಪಾಖ್ಯಾನವನ್ನು ಪೂರ್ಣ ಬಿಟ್ಟಿರುವೆ.