ಇನ್ನು ಮುಂದೆ ಹೊರಡಬೇಕು, ಮತ್ತೆ ಜನಕ ಕೇಳಿದ, " ಋಷಿಗಳೆ, ಮತ್ತೆ ಎರಡು ಮಣೆಗಳನ್ನು ತರಸಿದ್ದೀರಿ" . "ಓಹ್ ! ರಾಮ ಲಕ್ಷ್ಮಣರೇ, ಆ ಮಣೆಗಳ ಮೇಲೆ ನಿಲ್ಲಿ" .ಗುರುಗಳ ಆದೇಶದಂತೆ ಅಣ್ಣ-ತಮ್ಮಂದಿರು ನಿಂತರು. ಜನಕನಿಗೆ ಹೇಳಿದರು; " ಮಹಾರಾಜ, ಇವರನ್ನು ಉಪಚರಿಸು" .ಕ್ಷಣಕಾಲ ರಾಜರಿಗೆ ಗೊಂದಲವಾಯಿತು. ತನಗಿನ್ನ ಬಹುಪಾಲು ಅರುವತ್ತು ವರ್ಷಗಳು ಚಿಕ್ಕವರಿರುವವರಿಗೆ ತಾನು ಕಾಲು ತೊಳೆಯುವುದೇ? ಆದರೂ ಋಷಿಗಳು ಹೇಳಿದ್ದಾರೆಂದರೆ ಅದಕ್ಕೆ ಅರ್ಥ ಇರಲೇ ಬೇಕು. ನಾವು ಪ್ರಶ್ನಿಸಬೇಕಿಲ್ಲ. ಯೋಚನೆ ಮುಗಿದ ಮರುಕ್ಷಣ ಜನಕ ಮಹಾರಾಜ ಬಿಸಿನೀರು ತುಂಬಿದ ತಂಬಿಗೆ ಹಿಡಿದು ಬಾಗಿದ. ಸರಕ್ಕನೆ ರಾಮರು ಹಿಂಜರಿದರು. ಮಣೆಯಿಂದ ಇಳಿದುಬಿಟ್ಟರು. "ಏನು ಗುರುಗಳೇ ಇದು? ನಮ್ಮ ತಂದೆಯಂತಿರುವವರು ಕಾಲು ತೊಳೆಯಬೇಕೆಂದು ತಾವು ಹೇಳುತ್ತಿದ್ದೀರಿ?". ಇತ್ತ ಜನಕನಿಗೆ ದಿಗ್ಭ್ರಮೆ. "ಈ ಶ್ರೀರಾಮ ನಾರಾಯಣ ಸ್ವರೂಪ. ಈತನ ಕಾಲು ತೊಳೆಯುವುದು ನಿನಗೆ ಶುಭೋದಯ. "ಮತ್ತೆ ಮಧ್ಯ ಮಾತಾಡಿದ ಶ್ರೀರಾಮರು ಹೇಳಿದರು; "ಇಲ್ಲಿಲ್ಲ, ನಾನು ಯಾವ ಸ್ವರೂಪವಾದರೂ, ಈ ರೂಪಕ್ಕೆ ಹದಿನಾರೂ ಆಗಿಲ್ಲ. ಎಂಬತ್ತು ಮೀರಿದ ಮಹಾರಾಜರು ತೊಳೆಯುವುದನ್ನು ನಾನು ಒಪ್ಪುವುದಿಲ್ಲ. ಋಷಿ ಮುನಿಗಳನ್ನು ಬಿಟ್ಟರೆ ಯಾವ ಕಾರಣದಿಂದಲೂ ಹಿರಿಯರು ಕಿರಿಯರ ಕಾಲು ತೊಳೆಯಬೇಕಿಲ್ಲ". ಕ್ಷಣ ಕಾಲ ಕಣ್ಣು ಮುಚ್ಚಿ ನಿಂತ ವಿಶ್ವಮಿತ್ರರು ಹೇಳಿದರು, " ಮುಂದಾಗುವುದು ಇಂದೇ ಆಗಲಿ ಎಂದಿದ್ದೆ, ರಾಮರು ಲೋಕೋಪಾಧ್ಯಾಯರು. ಈ ಮೂಲಕ ಅವರು ಸಂಪ್ರದಾಯ ಒಂದನ್ನು ತಿದ್ದುತ್ತಿದ್ದಾರೆ. ಬಿಡಿ ಮಹಾರಾಜರೆ, ಮುಂದೆ ಹೋಗೋಣ. " .ಜನಕನಿಗಾಗಲಿ, ಲಕ್ಷ್ಮಣನಿಗಾಗಲಿ, ಪುರೋಹಿತನಿಗಾಗಲಿ ಏನೂ ಗೊತ್ತಾಗಲಿಲ್ಲ.