ಅಮ್ಮನ ಬಯಕೆಯನ್ನು ಇವರಲ್ಲಿ ಅರುಹಿದಾಗ, "ಮಂತ್ರಕ್ಕೆ ಶಕ್ತಿಯಿದೆಯೆಂದೂ, ಅದನ್ನು ಬಳಸುವ ವಿಧಾನ ನನಗೆ ಗೊತ್ತೆಂದೂ, ಕಂಡ ಕಂಡದ್ದಕ್ಕೆಲ್ಲ ಮಂತ್ರ ಹಾಕುವುದು ಸರಿಯಲ್ಲ. ನಮ್ಮ ಪ್ರಯತ್ನಗಳು ಯಾವುದೂ ಕೆಲಸ ಮಾಡದಾಗ, ದೈವವನ್ನು ಪ್ರಾರ್ಥಿಸಬೇಕೇ ವಿನಃ, ಎಲ್ಲದಕ್ಕೂ ದೇವರ ಮುಂದೆ ಕೈಯೊಡ್ಡುವುದು ನನ್ನ ಮತವಲ್ಲ. ಮಕ್ಕಳು ಬೇಕಿದ್ದರೆ ಒಂದು, ಗಂಡ - ಹೆಂಡತಿ ಅದಕ್ಕಾಗಿ ಯತ್ನಿಸಬೇಕು, ಎರಡು ಅವಶ್ಯವೆನಿಸಿದರೆ ಬಲವರ್ಧನೆಗೆ, ವೀರ್ಯವರ್ಧನೆಗೆ ಔಷಧವನ್ನು ಸೇವಿಸಬೇಕು, ಮೂರು ಅದಕ್ಕಾಗಿ ಚರುವನ್ನು ಸಿದ್ಧ ಪಡಿಸಬೇಕು, ನಾಲಕ್ಕು ಹಾಗೆ ತಯಾರಿಸುವಾಗ ಯಾರಿಗೆ, ಯಾವ ಹಿನ್ನೆಲೆಗೆ, ಯಾವ ವಿನಿಯೋಗಕ್ಕೆ ಯೋಗ್ಯವೋ, ಅಂತಹ ದೈವವನ್ನು ಜಪಿಸಬೇಕು. ಈ ದಿವ್ಯ ಚರುವನ್ನು ಸೇವಿಸಿದರೆ ಗಂಡ ಸ್ಥಾಪಿಸಿದ ಮೂಲ ಜೀವ ಕಣಕ್ಕೆ ಹೆಂಡತಿ ಸೇವಿಸಿದ ಚರು ಪ್ರಭಾವದಿಂದ ಚರ್ಮ, ರಕ್ತ, ಮೂಳೆ, ಮಜ್ಜೆ, ಇಂದ್ರಿಯಗಳೆಲ್ಲ ಒಪ್ಪವಾಗಿ ರೂಪಿಸಿ ಶಿಶುವಿನ ಉತ್ಪತ್ತಿಯಾಗುತ್ತದೆ. ಇದನ್ನೇ ಸಾಂಕೇತಿಕವಾಗಿ "ಪ್ರಕೃತಿ-ಪುರುಷ ಮಿಲನ" ಎನ್ನುತ್ತಾರೆ. ಮೇಲಿನಿಂದ, ಎಂದರೆ ತಲೆ ಬುರುಡೆಯ ಮಧ್ಯದ ಬ್ರಹ್ಮ ರಂಧ್ರದಿಂದ ಪ್ರಾಣಜ್ಯೋತಿಯೊಂದು ಪ್ರವಹಿಸಿ ಪುರುಷನ ಜೀವ ಕಣಕ್ಕೆ ಜೀವಾತ್ಮ ಸೇರ್ಪಡೆಯಾಗಿ ಹೆಂಡತಿಯಿಂದ ಸಹಜವಾಗಿ ಬಂದ ಕಾಂತಿಯೂ ಸೇರಿ ಮಗುವಿನ ಮೊದಲ ಜೀವ ಕೋಶ ಹುಟ್ಟಿಬಿಡುತ್ತದೆ. ಇದೆಲ್ಲ ಎಲ್ಲ ಕಾಲದಲ್ಲೂ, ಎಲ್ಲ ಜೀವ ಕೋಟಿಯಲ್ಲೂ ನಡೆಯುವ ಅವ್ಯಾಹತ ಕ್ರಿಯೆ . ಇದಕ್ಕೆ ನಾನು ವೇಗ ವರ್ಧಕವೆಂಬಂತೆ ಚರುವನ್ನು , ಎಂದರೆ ಬಲವರ್ಧಕ ಔಷಧವನ್ನೂ ಕೊಡುತ್ತೇನೆ . ಅದನ್ನು ನೀನು , ಹಾಗು ಅತ್ತೆಯವರು ಸ್ವೀಕರಿಸಿ."