ರೇಣುಕೆಯ ಪತಿ ಭಕ್ತಿಯೋ, ತಪಶ್ಶಕ್ತಿಯೋ ಎಷ್ಟಿತ್ತೆಂದರೆ ದೂರದ ನದಿಯಿಂದ ಮಡಿಯುಟ್ಟು ನೀರು ತರುತ್ತಿದ್ದಾಕೆ ಆಕೆ. ಆಕೆಯ ಭಕ್ತಿಯ ತೀವ್ರತೆ ಎಂಥದ್ದೆಂದರೆ ಹಸಿ ಮರಳಲ್ಲಿ ಮಡಕೆ ಮಾಡಿ, ನೀರು ತುಂಬಿ, ಹಾವನ್ನು ಸಿಂಬೆ ಮಾಡಿ ತಲೆಗಿಟ್ಟು ಗಗನಮಾರ್ಗದಲ್ಲಿ ತೇಲಿ ಬರುವಷ್ಟು!! ಆದರದೊಂದು ದಿನ... ಚಿತ್ರರಥ ತನ್ನ ಹೆಂಡಿರೊಡನೆ ಬಂದು ಜಲ ಕ್ರೀಡೆಯಾಡುತ್ತಿದ್ದ. ಅವನು ಮೊದಲೇ ಗಂಧರ್ವ, ಸುಂದರ, ಕಾಂತಿ ಪೂರ್ಣ, ಸದೃಢ, ಆಕರ್ಷಕ... ಹೆಂಗೆಳೆಯರೊಡನೆ ಚಲ್ಲಾಟ, ಕಾಮ ಕೂಟ, ಕಾಮ ಕೇಳಿ... ಅವರನ್ನು ನೋಡಿದ್ದು ರೇಣುಕೆಯ ತಪ್ಪಲ್ಲ. ಆದರೆ ದುರ್ಬಲ ಕ್ಷಣವೇ ಅಂಥದ್ದು, ಚಿತ್ರರಥನಿಂದ ಆಕರ್ಷಿತಳಾಗಿಬಿಟ್ಟಳು. ಅದು ಒಂದೇ ಕ್ಷಣ, ಆದರೆ ಅನಾಹುತವಾಗಿಹೋಗಿತ್ತು. ಕೊಡ ಕರಗಿತು; ನೀರು ಇಳಿಯಿತು; ಕೆಳಕ್ಕಿಳಿದಳು; ಹಾವು ಹರಿದುಹೋಯಿತು. ತೊಯ್ದ ಸೀರೆಯೊಂದಿಗೆ ನೆಡೆದುಬಂದಳು ಅಗ್ನಿಗೃಹಕ್ಕೆ. " ನಿಲ್ಲು! ಒಳಗೆ ಬರಬೇಡ. "ಕನಲಿದ ಗಂಡನ ಗರ್ಜನೆ. "ಯಾರಿದ್ದೀರಿ ಮನೆಯಲ್ಲಿ? ಮಕ್ಕಳೇ, ಬೇಗ ಬನ್ನಿ. "ಓಡಿ ಬಂದರು ರುಮಣ್ವಂತ, ಸುಷೇಣ, ವಸು, ಮತ್ತು ವಿಶ್ವಾವಸು. " ಕಡಿಯಿರಿ ನಿಮ್ಮಮ್ಮನ ತಲೆ. " ಮಕ್ಕಳು ನೋಡುತ್ತಾರೆ, ಅಮ್ಮ ಅಪರಾಧಿನಿಯಂತೆ ನಡುಗುತ್ತ ನಿಂತಿದ್ದಾಳೆ. ತಲೆ ಕೆಳಗೆ, ಮೈಯೆಲ್ಲ ಒದ್ದೆ, ಮಕ್ಕಳ ಮುಂದೆ ಗಂಡ ಏನು ಹೇಳುತ್ತಾನೋ, ತನ್ನ ಮರ್ಯಾದೆ ಹೇಗೆ ಹೋಗುತ್ತದೋ, ಹೇಗೆ ಅವರನ್ನು ಎದುರಿಸುವುದೋ ಎಂದು ಒದ್ದಾಡುತ್ತಿದ್ದವಳಿಗೆ, ಗಂಡ ಹೇಳಿದ್ದು ಕೇಳಿ ಸಮಾಧಾನವಾಯಿತು. ಸತ್ತೇ ಹೋಗಿಬಿಟ್ಟರೆ ಅಲ್ಲಿಗೆ ಯಾರಿಗೂ ಏನೂ ಉತ್ತರ ಕೊಡಬೇಕಿಲ್ಲ!