ಇದ್ದಕ್ಕಿದ್ದಂತೆಯೇ ತಂಪೆನಿಸಿತು; ಮಂದಾನಿಲ ಬೀಸಿದಂತೆ. ಕಣ್ಣ ಮುಂದೆ ಸ್ವರ್ಣ ಭವನಗಳು ದೇದೀಪ್ಯ. ಹೊರಗೆ ಓಡಾಡುತ್ತಿರುವ ತೇಜಸ್ವಿಗಳು; ಅವರ ಕಾಲುಗಳು ಏನ್ನನ್ನೂ ಮುಟ್ಟುತ್ತಿಲ್ಲ, ಅಜಾನುಬಾಹುಗಳು, ಕಿರೀಟಧಾರಿಗಳು. ಪ್ರಜ್ವಲಿಸುತ್ತಿರುವ ಕುಂಡಲ, ಹಾರ ಭೂಷಿತರು. ಇದೀಗ ತಾನೊಂದು ಭವ್ಯ ಅರಮನೆಯ ಬಾಗಿಲ ಮುಂದೆ ನಿಂತಿದ್ದಾನೆ. ಅವರ್ಣನೀಯ ಕೆತ್ತನೆಗಳ, ಸುಗಂಧ ಸೂಸುವ, ವೀಣಾ ಕ್ವಣಿತದ, ಮಂತ್ರ ನಿನದದದೊಟ್ಟಿಗೇ, ಆ ಬಾಗಿಲುಗಳನ್ನು ಅತ್ತಿತ್ತ ಇದ್ದ ದ್ವಾರಪಾಲಕರು ತೆರೆದರು. ಒಳಗೆ ಕಣ್ಣು ಕೋರೈಸುವಷ್ಟು ಪ್ರಕಾಶ ಪೂರ್ಣ ದೇವತೆಗಳು ನಿಂತಿದ್ದಾರೆ. ಮಧ್ಯದಲ್ಲಿ ಪ್ರತ್ಯಕ್ಷನಾದ ದೇವೇಂದ್ರ! ಓಹ್ ! ಎಷ್ಟು ಭವ್ಯವಾಗಿದ್ದಾನೆ! ಕೈಯಲ್ಲಿ ಮೂಳೆಗಳ ಆಯುಧ! ಓ , ಇದೇ ಇರಬೇಕು ದಧೀಚಿ ಮುನಿಗಳ ಬೆನ್ನೆಲುವಿನ ವಜ್ರಾಯುಧ. ಆದರೆ, ಆದರೆ.... ಅವನ ಮುಖ ಕೆಂಪಾಗಿದೆ. ಕಣ್ಣಲ್ಲಿ ಕಿಡಿಗಳು ಕಾರುತ್ತಿವೆ. " ಚಂಡಾಲ ! ನಿನಗೆ ಸ್ವರ್ಗ ಬೇರೇ ಕೇಡು. ನಿನ್ನ ಗುರುಗಳು ವಿಶ್ವಮಿತ್ರರು ದೊಡ್ಡವರಿರಬಹುದು; ಅವರು ನೇರವಾಗಿ ಸ್ವರ್ಗಕ್ಕೂ ಬರಬಹುದು, ಕೈಲಾಸಕ್ಕೂ ಹೋಗಬಹುದು. ಆದರೆ ನಿನಗೆ ಯಾವ ಯೋಗ್ಯತೆ ಇದೆ? ನೀನಾವ ತಪಸ್ಸು ಮಾಡಿದ್ದೀಯೆ? ಋಷಿಗಳು ಮಾಡಿದ ಯಙ್ಞಪ್ರಭಾವದಿಂದ ಇಲ್ಲಿವರೆಗೆ ಬಂದಿದ್ದಾಯಿತು, ಅಷ್ಟೆ. ಒಳಗೆ ಬರಲು ನನ್ನ ಅಪ್ಪಣೆ ಬೇಕು. ವಂಶ ಪರಂಪರಾಗತ ಗುರುಗಳನ್ನು ಬಿಟ್ಟ ನಿನ್ನಂತಹ ಗುರು ದ್ರೋಹಿಗೆ ಸ್ವರ್ಗಪ್ರವೇಶ ಅಸಾಧ್ಯ ! ನನಗೆ ಬಂದ ಶಾಪವನ್ನು "ರಥಂತರ ಸಾಮ" ಸೃಷ್ಟಿಸಿ ಕಳೆದವರು ವಶಿಷ್ಠರು , ಅಂತಹ ಮಹಾನುಭಾವರನ್ನು ನೋಯಿಸಿ , ಅವರಿತ್ತ ಶಾಪದಿಂದ ಪತಿತನಾದ ನಿನಗೆ ಇಲ್ಲಿ ಸ್ವಾಗತವಿಲ್ಲ . ನೂಕಿ ಈ ಗುರುದ್ರೋಹಿಯನ್ನು ! "