ಇದು ಹೀಗೇ ಮುಂದುವರಿದರೆ ಜಗಕ್ಕೆ ಒಬ್ಬ ಇಂದ್ರನ ಬದಲು ಇಬ್ಬರಾಗುತ್ತಾರೆ. ಹಾಗೇ ಅವರು ಅಷ್ಟ ದಿಕ್ಪತಿಗಳನ್ನೂ ನಿರ್ಮಿಸುತ್ತಾರೆ. ಅವರ ಲೆಕ್ಕಾಚಾರದಲ್ಲಿ ಬ್ರಹ್ಮಸೃಷ್ಟಿಗೆ ಬದಲಾಗಿ ವಿಶ್ವಮಿತ್ರ ಸೃಷ್ಟಿಯಲ್ಲಿ ಎಲ್ಲವೂ ಮೂಡುತ್ತದೆ. ಅಕ್ಕಿ ಬದಲು ನವಣೆ, ಹಸುವಿನ ಬದಲು ಎಮ್ಮೆ, ಜೋಳದ ಬದಲು ರಾಗಿ, ತಿಲದ ತೈಲದ ಬದಲು ಕೊಬ್ಬರಿ, ಕಡಲೆ, ಸೂರ್ಯಕಾಂತಿ, ಸಾಸಿವೆಗಳಿಂದ ಎಣ್ಣೆ, ಕುದುರೆಯ ಬದಲು ಕತ್ತೆ, ಸಿಂಹಕ್ಕೆ ಸರಿಯಾದ ಹುಲಿ, ಹೀಗೆ ನಿಮಗೆ ಪ್ರತಿಸೃಷ್ಟಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಜನರ ಮನಸ್ಸನ್ನು ಬದಲಿಸಿ, ಪಾರ್ವತಿಯ ಬದಲು ಕಾಳಿ, ಶಿವನ ಬದಲು ವೀರಭದ್ರ, ಸಾತ್ವಿಕ ವಿಷ್ಣುವಿನ ಬದಲು ಅವನ ಮಗ ಮನ್ಮಥ.... ಇಂತಹವರು ಪೂಜ್ಯರಾಗಬೇಕೆಂದು ನಿಶ್ಚಯಿಸಿದ್ದಾರೆ. ಮಹಾಸ್ವಾಮಿ, ಅವರೆಂದುಕೊಂಡದ್ದೆಲ್ಲ ನಡೆದುಬಿಟ್ಟರೆ ನನ್ನ ಗತಿಯೇನು ? ಇಬ್ಬರು ಇಂದ್ರರಾಗುವುದು ಹೇಗೆ ಸರಿಯಾದಾತು ? " ತುಂಬ ನೊಂದು ನುಡಿದ ಇಂದ್ರ ಖಿನ್ನನಾಗಿ.