ವಿಶ್ವಮಿತ್ರರೂ ಯೋಚಿಸುತ್ತಿದ್ದಾರೆ, " ನಾನು ಇವನಪ್ಪನನ್ನು ಸ್ವರ್ಗಕ್ಕೆ ಕಳಿಸುವೆ ಎಂದಾಗ ಇದೇ ವಸಿಷ್ಠರು ತಾನೆ ಅಡ್ಡಗಾಲಿಟ್ಟದ್ದು! ಅವರ ಮಕ್ಕಳ ಶಾಪದಿಂದ ತಾನೇ ಅವನು ಚಂಡಾಲನಾದದ್ದು? ಇದೇ ಇಂದ್ರ ತಾನೇ ತಾನು ಸಿಫಾರಸು ಮಾಡಿದ್ದ ತ್ರಿಶಂಕುವನ್ನು ಸ್ವರ್ಗದಿಂದ ಹೊರದಬ್ಬಿದ್ದು? ಹಾಗೆ ನೋಡಿದರೆ ತನಗೇನೂ ಹರಿಶ್ಚಂದ್ರನ ಬಗ್ಗೆ ವಿರೋಧವಿಲ್ಲ. ಬಹುಶಃ ತನ್ನನ್ನೇ ಮೊದಲು ಕೇಳಿದ್ದರೆ ತಾನೇ ಅವನ ಹೆಸರನ್ನು ಸೂಚಿಸುತ್ತಿದ್ದೆನೇನೊ! ಈ ವಸಿಷ್ಠರಿದ್ದಾರಲ್ಲ, ಇವರು ಕಾಲ ನೋಡಿ ಕೈಕೊಡುತ್ತಾರೆ. ನನಗವರು ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ನನ್ನ ಪ್ರಗತಿಗೆ ಅವರು ಸಾಕಷ್ಟು ಅಡ್ಡಿಯಾಗಿದ್ದಾರೆ. ಇದೀಗ ನಾನು ಅವರು ಹೇಳಿದ್ದನ್ನು ವಿರೋಧಿಸಲೇ ಬೇಕು. ಅಷ್ಟೇ ಅಲ್ಲ, ಈ ಜಗತ್ತಿನಲ್ಲಿ ಎಲ್ಲರೂ ಸೋಮಾರಿಗಳೇ; ತಪಸ್ಸೇ ಮಾಡುತ್ತಿಲ್ಲ; ಹಾಯಾಗಿದ್ದಾರೆ. ಹುಟ್ಟುತ್ತಾರೆ, ಬೆಳೆಯುತ್ತಾರೆ, ಸಾಯುತ್ತಾರೆ. ಸಾಧನೆ, ಪ್ರಯತ್ನ, ನಷ್ಟದಿಂದ ಏಳುವ ಧೃತಿ, ಗುರಿ ಸಾಧಿಸುವ ಛಲ ಕಾಣುವುದೇ ಇಲ್ಲ. ನನ್ನ ದೃಷ್ಟಿಯಲ್ಲಿ ಶಕ್ತರಾರೂ ಕಾಣುತ್ತಲೇ ಇಲ್ಲ. ಒಂದರ್ಥದಲ್ಲಿ ನಾನು ಮೆಚ್ಚುವ ಮನುಷ್ಯರೇ ಇಲ್ಲದಾಗಿದ್ದಾರೆ. " ಈ ಮೂರೂ ಕಾರಣಗಳು ಒಂದಕ್ಕೊಂದು ಪೋಷಿಸುತ್ತ , ವಿಶ್ವಮಿತ್ರರಿಗೆ ಕೋಪವೇ ಹೆಚ್ಚುವಂತಾಯಿತು .
(ತೀವಿದ ಒಡ್ಡೋಲಗದ ನಡುವೆ ತನ್ನಂ ಮೊದಲೊಳು
ಓವಿ ನುಡಿಸದ ಕೋಪ ಒಂದು. ಆ ವಸಿಷ್ಠ ಮುನಿ
ಯಾವುದಂ ಪೇಳ್ದೊಡೆ ಅದನು " ಅಲ್ಲ " ಎಂಬ ಭಾಷೆ ಎರಡು .
ಅಖಿಲ ಜೀವಾವಳಿಯಲಿ ಕುಂದನಲ್ಲದೆ ಲೇಸ ಕಾಣದಿಹ
ಭಾವ ಮುಪ್ಪುರಿಗೊಂಡು ಕುಡಿವರಿದು ಕಡುಗೋಪವಾವರಿಸೆ)