ಕೊರಳಿಗೆ ಚೆಂಡು ಹೂವಿನ ಹಾರ ಹಾಕಿದ ಮೇಲೆ ಗೊತ್ತಯಿತು; ನನ್ನನ್ನ ಅಗ್ನಿಗೆ ಬಲಿ ಕೊಡತ್ತಾರಂತೆ. ಅಂದರೆ, ಕುರಿಯಂತೆ ಕೊರಳು ಕತ್ತರಿಸ್ತಾರಂತೆ, ಅಯ್ಯೊಪ್ಪ ! ನಂಗೆ ದಿಗ್ಭ್ರಮೆ ! ಹೆದರಿಕೆ ! ಮುಂದೇನ್ ಮಾಡಬೇಕು ಅಂತಾನೇ ಗೊತ್ತಾಗ್ಲಿಲ್ಲ. ಸಾವು ಅಂದ್ರೇನಂತಾನೇ ಗೊತ್ತಿಲ್ಲ, ಯಾರಾದರೂ ಸತ್ತರೆ, ಅಲ್ಲಾಡದೇ ಮಲಗಿರ್ತಾರೆ. ಎಲ್ಲರೂ ಅಳತಾ ಇರ್ತಾರೆ, ಆಮೇಲೆ ಹಾಗೆ ಮಲಗಿದ್ದವರನ್ನ ನಾಲಕ್ಕು ಮಂದಿ ಎತ್ತ್ಕೊಂಡು ಹೋಗೋದು ನೋಡಿದ್ದೇನೆ. ಅನಂತರ ಅವರನ್ನು ಸುಡುತಾರಂತೆ... ಅಯ್ಯಪ್ಪ ! ಸುಡೋದು ಅಂದರೆ ಕಷ್ಟ ಆಗಲ್ವಾ ಅಂತ ಕೇಳ್ದೆ ಸ್ನೇಹಿತರನ್ನ, ಅವರು ಹೇಳಿದ್ರು ಹೆಣಕ್ಕೇನೂ ಗೊತ್ತಾಗೋದಿಲ್ಲ ಅಂತ. ಆದ್ರೂ ಆವತ್ನಿಂದ ನನಗೆ ಸಾವೂ ಅಂದ್ರೆ ಹೆದರಿಕೆ. ಈಗ ಕೊರಳು ಕತ್ತರಸ್ತಾರಂದ್ರೆ ಪ್ರಾಣಾನೇ ಹೋದ ಹಾಗಾಯ್ತು. ಅಯ್ಯೊಯ್ಯೊಪ್ಪ ! ಕತ್ತರಿಸಿದ್ರೆ ನೋವಾಗೋದಿಲ್ವ ? ರಕ್ತ ಚಿಮ್ಮೋದಿಲ್ವ? ಅನಂತರ ನಾನು ಸಥೋಗ್ತೀನಂತೆ. ನನ್ನನ್ನ ಅಗ್ನಿಕುಂಡಕ್ಕೆ ಹಾಕ್ತಾರಂತೆ. ಯೊಪ್ಪಾ, ಕೇಳ್ದಾಗ್ಲಿಂದಲೂ ತುಂಬಾ ಭಯ. ತುಂಬಾ ಹೆದರಿಕೆ. ಯಾಕೋ ಗೊತ್ತಿಲ್ಲ. ದೇಹ ಎಲ್ಲ ನಡುಗುತ್ತೆ, ಬಾಯೆಲ್ಲ ಒಣಗುತ್ತೆ. ಏನು ಬೇಕಾದ್ರೂ ತಿನ್ನೋಕೆ ಹೇಳಿದ್ರು. ಏನೇನೋ ತಿಂಡಿಗಳು, ನೋಡೇ ಇರಲಿಲ್ಲ, ಕೇಳೂ ಇರಲಿಲ್ಲ, ಎಲ್ಲಾ ತಿನ್ನೋಣ ಅಂತ ಕೈ ಹಾಕಿದೆ, ಗಬಗಬ ತಿಂತಾಯಿದ್ದೆ, ಯಾರೋ ಹೇಳಿದ್ರು, " ಪಾಪ, ಇವನ ಕೊನೇ ಊಟ, ಸಾಯ್ತಾನೆ ಅಂತ ಗೊತ್ತಿಲ್ದೇ ಊಟ ಮಾಡ್ತಾ ಇದ್ದಾನೆ." ತಕ್ಷಣ ನನಗೆ ನೆನಪಾಯಿತು ನನ್ನನ್ ಕತ್ತರಿಸ್ತಾರೆ ಅಂತ. ಊಟಾನೇ ಸೇರ್ಲಿಲ್ಲ. ಭಯ, ಭಯ ! ಏನೂ ಗೊತ್ತಾಗ್ಲಿಲ್ಲ. ಅಮ್ಮ ಹಿಂದೊಂದು ಸಲ ಹೇಳಿದ್ರು, ಭಯವಾದಾಗ ಧ್ಯಾನ ಮಾಡು, ದೇವರು ಸಹಾಯ ಮಾಡ್ತಾನೆ ಅಂತ, ಅದನ್ನೇ ಮಾಡೋಣ ಅಂದ್ರೆ ಯಾವ ಮಂತ್ರಾನೂ ನೆನಪೇ ಆಗ್ತಾಯಿಲ್ಲ, ಬರಿ ಅಳು ಬರ್ತಾಯಿದೆ. ಧ್ಯಾನ ಮಾಡೋಕೇ ಆಗಲಿಲ್ಲ, ಆದರೆ ನೀವು ಬಂದೇ ಬಿಟ್ಟರಿ. ನೀವೇನು ದೇವ್ರಾ? ಸಹಾಯ ಮಾಡೋಕೆ ಬಂದ್ರಾ?"