ಮುಂದುವರೆದ ಬ್ರಹ್ಮರ್ಷಿಗಳು ಹೇಳಿದರು, " ಇಲ್ಲಿ ನಡೆದಿದ್ದೂ ಅದೇ. ಮಾತು ಕೊಟ್ಟಿರಬಹುದು, ಆದರೆ ಮಗನ ಕೊರಳ ಕಡಿಯುವುದಕ್ಕೆ ಅದು ಹೇಗೆ ಹರಿಶ್ಚಂದ್ರನ ಕೈ ಬರುತ್ತದೆ? ಮಾತು ಕೊಟ್ಟಿದ್ದಕ್ಕೆ ಅವಧಿಯನ್ನ ಕೇಳಿದನೇ ವಿನಹ, ವಚನಭ್ರಷ್ಟನಾಗಲಿಲ್ಲ ಅವನು. ಮಾನವೀಯ ಮೌಲ್ಯಗಳ ಅಡಿಯಲ್ಲಿ ಈ ಪ್ರಕರಣಗಳನ್ನ ನೋಡಬೇಕು. ಅಷ್ಟೇ ಅಲ್ಲ, ಯಾವತ್ತೋ ನೆಡೆದು ಹೋದ ಒಂದು ಹಳೆಯ ಘಟನೆ ಹಿಡಿದುಕೊಂಡು, ನಾವು ಮಾತಾಡುವುದು ಸರಿನಾ? ನಾವು ಮಾತನಾಡಬೇಕಾದದ್ದು ಈ ಹೊತ್ತು. ವರ್ತಮಾನ ಮುಖ್ಯ. ಈಗ ಹರಿಶ್ಚಂದ್ರ ಹೇಗಿದ್ದಾನೆ ಎನ್ನುವುದಷ್ಟೇ ಪ್ರಧಾನ. ಮೂರನೆಯ ಅಂಶ. ಆಗ ಇನ್ನೂ ಹರೆಯದ ಹರಿಶ್ಚಂದ್ರ. ಈಗ ಮಾಗಿದ್ದಾನೆ, ಬುದ್ಧಿ ಪಳಗಿದೆ. ಈಗ ಆಗಿನಷ್ಟು ಮೈ ಮರೆಯುವುದಿಲ್ಲ ಅವನು. ಸತ್ಯಸ್ಥಾಪನೆಗೋಸ್ಕರ ಈಗ ಸುತನನ್ನೇ ಏನು, ಹೆಂಡತಿಯ ವಿಷಯದಲ್ಲಿಯೂ ನಿರ್ಮಮಕಾರನಾಗಿ ಇರಬಲ್ಲ. ಅಷ್ಟು ದೃಢನಾಗಿದ್ದಾನೆ. ಅದು ಕಾರಣ ಹೇಳುತ್ತಾ ಇದ್ದೇನೆ, ಈಗಲೂ ಹರಿಶ್ಚಂದ್ರನೇ ಸತ್ಯಮೂರ್ತಿ. ಅವನಲ್ಲಿ ಸುಳ್ಳಿನ ಎಳೆಯೂ ಇಲ್ಲ. ಅವನಲ್ಲಿ ಹುಸಿಯ ಕಣ ತೋರಿಸೋದಿಕ್ಕೆ ಯಾರಿಗೂ ಸಾಧ್ಯ ಇಲ್ಲ. ಇದಕೆನ್ನಾಣೆ; ಶಿವನಾಣೆ. (ಹಲವು ಮಾತೇಕೆ ಆ ಹರಿಶ್ಚಂದ್ರ ಭೂನಾಥನೊಳು