ಮುಂದೇನು ? ಇಡೀ ಸಭೆ ಸ್ತಬ್ಧ . ಇಂದ್ರನಿಗೋ ಮಹಾ ಕಸಿಬಿಸಿ, " ಯಾರಿಗೆ ಹೇಳುವುದು, ವಸಿಷ್ಠರನ್ನು ಸಮಾಧಾನ ಮಾಡುವುದೆಂತು ? ಇತ್ತ ವಿಶ್ವಮಿತ್ರರಿಗೂ ಮುಂದೇನು ಮಾಡುವುದೆಂದು ಅರಿಯದೇ ಆಗಿದೆ. ಹಗುರ ಮಾಡಲೋ , ಅಥವಾ ಸಮ ಮಾಡಲೋ ? " ಎದ್ದವರು ನಾರದರು , ದೇವರ್ಶಿಗಳು. " ವಸಿಷ್ಠರು ದೊಡ್ಡವರು, ದೊಡ್ಡ ಮಾತಾಡಿಬಿಟ್ಟರು. ವೀರ ಪ್ರತಿಙ್ಞೆಯನ್ನೇ ಮಾಡಿಬಿಟ್ಟರು. ಅಲ್ಲಿಗೆ ಅದು ಸವಾಲಾಗಿ ಉತ್ತರವಾಯಿತು. ಆದರೆ ಪ್ರತಿಸವಾಲಾಗದೆ ಸ್ಪರ್ಧೆ ಮುಗಿಯುವುದಿಲ್ಲವಲ್ಲ, ಆದ್ದರಿಂದ ವಿಶ್ವಮಿತ್ರರೇ, ನೀವೀಗ ಪ್ರತಿಙ್ಞೆ ಮಾಡಬೇಕಾದದ್ದು ನಿಮ್ಮ ಕರ್ತವ್ಯ. ಅಕಸ್ಮಾತ್ ನೀವು ಪರೀಕ್ಷಿಸಿದರೂ, ಎಷ್ಟೇ ಪ್ರಯತ್ನ ಪಟ್ಟರೂ, ಹರಿಶ್ಚಂದ್ರ ಸುಳ್ಳು ಹೇಳದೆಯೇ ಹೋದರೆ ನೀವೇನು ಪಣ ತೊಡುವಿರಿ ? ವಸಿಷ್ಠರು ಗೆದ್ದಾಗ ನೀವು ಕೊಡುವ ಉಡುಗರೆ ಏನು ? "
(ಕೊಡು ವಸಿಷ್ಠಂಗೆ ಭಾಷೆಯನು ಕೌಶಿಕ ಎಂದನು)
ತಾನು ವಸಿಷ್ಠರನ್ನು ಕೇಳಿದ್ದು, ಹರಿಶ್ಚಂದ್ರ ಸೋತರೆ ಸೋಲೊಪ್ಪುವಿರೋ ಎಂದು. ಆದರೆ ಅವರು ಅದಕ್ಕೆ ಉತ್ತರಿಸದೇ ತುಂಬ ದೂರ ಹೋಗಿ ಅವನು ಸೋತರೆ ಅವನು ಹೆಸರು ಹೇಳಿದ ತಮಗೇ ಶಿಕ್ಷೆ ವಿಧಿಸಿಕೊಳ್ಳುತ್ತಾರಂತೆ. ಇರಬಹುದು, ಹರಿಶ್ಚಂದ್ರನಿಗಿನ್ನ ಇದೀಗ ವಸಿಷ್ಠರೇ ಸತ್ಯವ್ರತರು. ಆದರೆ ನಾನು ಪರೀಕ್ಷಿಸಬೇಕಿರುವುದು ಅವರನ್ನಲ್ಲ, ಹರಿಶ್ಚಂದ್ರನಿಗೆ ತಾನೇ ? ಆ ಪರೀಕ್ಷೆಯಲ್ಲಿ ಅವನು ಗೆದ್ದರೆ ಉಡುಗೊರೆ ಅವನಿಗೆ ತಾನೇ ಸಿಗಬೇಕಾದದ್ದು ? ವಿಶ್ವಮಿತ್ರರ ಯೋಜನೆ ಒಂದು ಹತಕ್ಕೆ ಬಂದಾಗ ಹೇಳಿದರು, " ವಸಿಷ್ಠರಿಗಷ್ಟೇ ಅಲ್ಲ, ನನ್ನಲ್ಲೂ ತಪಸ್ಸಿನ ಪುಣ್ಯಫಲ ಅತ್ಯಧಿಕವಾಗಿದೆ. ಅದು ಭತ್ತಿಅಲ್ಲಿ ಮೊಳಕೆ ಒಡೆದು ಶಮದಮಗಳೇ ಎಲೆಗಳಾಗಿ, ಯೋಗ ಯಾಗಗಳ ಬೆಂಬಲದಿಂದ ವೇದೋಕ್ತ ವಿರಕ್ತಿಯ ಕಾಂಡವಾಗಿ ತಪೋ ನಿಷ್ಠೆಯ ಘೋರ ವ್ರತದ ಜ್ವಾಲೆಯ ಬಿಸುಪನ್ನು ಉಂಡು ಮೌನ ಧ್ಯಾನಗಳ ಜಪಸ್ನಾನಾಭಿಶೇಕದಲ್ಲಿ ಮೀಯುತ್ತ ಸತ್ಯದ ಮೊಗ್ಗು ಅರಳಿ ನಿಯಮ ಹೂ ಗರ್ಭದಲ್ಲಿ ಈಶ್ವರಾಗಮಗಳೆಂಬ ಕಾಯಾಗಿ ಲಿಂಗಾರ್ಚನೆಯ ಫಲಭಾರದಿಂದ ಜಗ್ಗುತ್ತಿದೆ . ಆ ಪುಣ್ಯರಾಶಿಯಲ್ಲಿ ಅರ್ಧಭಾಗವನ್ನು ಹರಿಶ್ಚಂದ್ರನಿಗೆ ಬಹುಮಾನವಾಗಿ ಕೊಡುವೆ ಅವನು ಸುಳ್ಳನ್ನೇ ಹೇಳದಿದ್ದರೆ .
( ಭಕ್ತಿ ಶಮೆ ದಮೆ ಯೋಗ ಯಾಗ ಶೃತಿ ಮತ ಮಯ ವಿರಕ್ತಿ ಘೂರವ್ರತ ತಪೋನಿಷ್ಠೆ ಜಪಗುಣಾ ಸಕ್ತತೆ ಸ್ನಾನ ಮೌನ ಧ್ಯಾನವಾಚಾರ ಸತ್ಯ ತಪ ನಿತ್ಯ ನೇಮ
ಯುಕ್ತಿಶೈವಾಗಮಾವೇಶ ಲಿಂಗಾರ್ಪಣಾಸಕ್ತೀಂ ಬೆಳೆದ ಪುಣ್ಯದೊಳರ್ಧಮಂ ಸುಧಾ
ಭುಕ್ತಳರಿಯಲು ಕೊಡುವೆ ನಾ ಹರಿಶ್ಚಂದ್ರ ಹುಸಿಯಂ ನುಡಿಯದೆ ಇರಲಿ ಎಂದನು )