ಕಾಕುತ್ಸ್ಥ ವಂಶೋದಯ

ಇಂದ್ರ ಎತ್ತಾಗಿ ನಿಂತ ಭಾಗೀರಥನ ಮುಂದೆ. ಇವ ಇಂದ್ರನ ಹೆಗಲೇರಿಯೇ ಬಿಟ್ಟ. ಎತ್ತಿನ ಹಿಣಿಲಿಗೆ ಸಂಸ್ಕೃತದಲ್ಲಿ ’ಕಕುತ್’ ಎಂಬ ಪದ.
ಕಾಕುತ್ಸ್ಥ ವಂಶೋದಯ
Updated on
ಮುಗ್ಧೆ ತಿಂದು ಹೊಟ್ಟೆ ಉರಿಹತ್ತಿದಾಗ ಬಳಿಯಿದ್ದ ಚ್ಯವನಾಶ್ರಮಕ್ಕೆ ತೆರಳಿ ಪಾದದ ಮೇಲೆ ಬಿದ್ದಳು. "ನಿನ್ನ ಸವತಿಯ ಕುಕೃತ್ಯ ಇದು. ನಿನಗೆ ಕೊಟ್ಟ ಕಜ್ಜಾಯ, ಅದರಲ್ಲಿ ವಿಷ ಇದೆ. ಹುಟ್ಟಿದ ಕೂಸನ್ನೇ ಸಾಯಿಸುವ ಹೆಣ್ಣು ಹಾಳಾಗಲಿ. 
ಅವಳ ಹೆಸರು ಎಲ್ಲರೂ ಮರೆಯುವಂತಾಗಲಿ. ಇನ್ನು ಮುಂದೆ ಮಗುವನ್ನು ಹಿಂಸಿಸುವವರು ಹೀಗೆ ನಿರ್ನಾಮವಾಗಲಿ. ಶುಭಕಾರ್ಯದಲ್ಲಿ ಮಾಡುವ ಕಜ್ಜಾಯ ಅತ್ತಿರಸವೆಂದೂ, ಶ್ರಾದ್ಧದಲ್ಲಿ ಮಾಡುವ ಕಜ್ಜಾಯ ಗಾರಿಗೆಯೆಂದೂ ಹೆಸರಾಗಲಿ. ಗಾರಿಗೆಯ ಮಧ್ಯದಲ್ಲಿ ರಂಧ್ರವಿರಲಿ , ಗಾರಿಗೆ ಸಗರನನ್ನು ನೆನಪಿಸಲಿ. "ಹೊಟ್ಟೆ ಕಿವಿಚುತ್ತಿದ್ದ ಕಾಲಿಂದಿಗೆ ಮಂತ್ರ ಜಲ ಪ್ರೋಕ್ಷಿಸಿ ಆಶೀರ್ವದಿಸಿದರು, " ಹೆದರಬೇಡ. ಉರಿ ಶಮನವಾಗುತ್ತದೆ. ಮಗು ಸಾಯುವುದಿಲ್ಲ. 
"ತಕ್ಷಣವೇ ನಿಂತು ಹೋಯಿತು ಉದರಬಾಧೆ. ಮಾತು ಮುಂದುವರಸಿದರು ಋಷಿಗಳು, " ನಿನ್ನ ಹೊಟ್ಟೆಯಲ್ಲಿ, ಹುಟ್ಟುತ್ತಾನೆ ಮಹಾ ಬಲಶಾಲಿ. ಮಹಾ ಸಮರ್ಥನೂ, ತೇಜೋವಂತನೂ ಆಗಿ ಬೆಳಗುತ್ತಾನೆ. ವಿಷ ಹೊಕ್ಕಿತೆಂದು ಹೆದರಬೇಡ. ಅವನು ವಿಷ ಸಹಿತನಾಗಿಯೇ ಹುಟ್ಟಿ ಬದುಕುತ್ತಾನೆ; ಪ್ರಸಿದ್ಧನಾಗುತ್ತಾನೆ!"
                         (ತವ ಕುಕ್ಷೌ ಮಹಾಭಾಗೇ ಸುಪುತ್ರಃ ಸುಮಹಾಬಲಃ
                       ಮಹಾವೀರ್ಯೋ ಮಹಾತೇಜಾ ಅಚಿರಾತ್ ಸಂಜನಿಷ್ಯತಿ
                     ಗರೇಣ ಸಹಿತಃ ಶ್ರೀಮಾನ್ ಮಾ ಶುಚಃ ಕಮಲೇಕ್ಷಣೇ )
ವಿಷ ಸಹಿತವಾಗಿ-ಗರಸಹಿತವಾಗಿ ಜನಿಸಿದ್ದರಿಂದ ಆ ಮಗು ಸಗರನೆಂದೇ ಪ್ರಸಿದ್ಧವಾಯಿತು . 
(ಸಹತೇನ ಗರೇಣೈವ ಜಾತಃ ಸ ಸಗರೋ ಅಭವತ್)
                                            ***********
ಸಗರನ ಮಗ ಅಸಮಂಜಸ; ಅವನ ಮಗ ಅಂಶುಮಂತ; ಅವನ ಮಗ ದಿಲೀಪ. ಕಾಲಿದಾಸನ ರಘುವಂಶ ನೋಡಬೇಕು, ದಿಲೀಪ ಚಕ್ರವರ್ತಿಯ ಧರ್ಮಪ್ರಙ್ಞೆ, ಗುರು ಶಾಸನಾನುಷ್ಠಾನಗಳನ್ನು ಕಾಣಬೇಕಿದ್ದರೆ. ಇವನ ಮಗನೇ ಪ್ರಸಿದ್ಧ ಭಗೀರಥ. ಗಂಗೆಯನ್ನು ಭೂಮಿಗೆ ಇಳಿಸಿದಾತ. ಅದೊಂದು ಬಹುದೊಡ್ಡ ಪುಣ್ಯ ಪ್ರಸಂಗ. ಅದನ್ನು ಮುಂದೊಮ್ಮೆ ನೋಡೋಣ. ಇವನ ಮಗನ ಬಿರುದೇ ಪ್ರಸಿದ್ಧವಾದದ್ದು. ಅದೇ ಕಕುತ್ಸ್ಥ. 

ಆ ಹೆಸರು ಜನ ಜನಿತವಾಗಿರುವುದಕ್ಕೆ ಒಂದು ಕಥೆಯಿದೆ. ಭಗೀರಥ ಪುತ್ರನ ಸಭೆಯಲ್ಲಿ ಒಮ್ಮೆ ಪುರಾಣ ಶ್ರವಣ ನಡೆಯುತ್ತಿರುವಾಗ, ಪೌರಾಣಿಕನ ವರ್ಣನೆ ಸೊಗಸಾಗಿತ್ತು. ಇಂದ್ರ, ಅವನ ಸಭೆ, ಬೃಹಸ್ಪತಿ, ಅಷ್ಟ ದಿಕ್ಪಾಲಕರು, ಅವರ ಸಂಸಾರಗಳು, ಅವರ ವಾಹನಗಳು.... ಎಲ್ಲವನ್ನೂ ಸಚಿತ್ರವಾಗಿ ವರ್ಣಿಸುತ್ತಿದ್ದರು. "ಕೊಂಚ ನಿಲ್ಲಿ", ಅರಸನೆಂದ. " ಇನ್ನೊಮ್ಮೆ, ಇನ್ನೊಮ್ಮೆ ಇಂದ್ರನ ವಾಹನಗಳ ಬಗ್ಗೆ ಹೇಳಿ... "ಪೌರಾಣಿಕರು ಮತ್ತೊಮ್ಮೆ ಇಂದ್ರನ ವಾಹನಗಳ ಬಗ್ಗೆ ಹೇಳಿದ್ದನ್ನು ಕೇಳಿದ ಭಾಗೀರಥನಿಗೆನ್ನಿಸಿತು; " ಎಷ್ಟು ದುರಹಂಕಾರ ಈ ಇಂದ್ರನಿಗೆ ! ತ್ರಿಮೂರ್ತಿಗಳೆಲ್ಲ ಒಂದೊಂದೇ ವಾಹನಕ್ಕೆ ತೃಪ್ತರು. ಗರುಡನೊಬ್ಬ ಸಾಕು ವಿಷ್ಣುವಿಗೆ. ಶಿವನಿಗೆ ನಂದಿಯೇ ಬೇಕಷ್ಟು. ಪಾರ್ವತಿ, ಗಣಪತಿ, ಲಕ್ಷ್ಮೀ... ಎಲ್ಲರಿಗೂ ಒಂದೊಂದೇ. ಆದರೆ ಈ ಇಂದ್ರನಿಗೇಕೆ ಎರಡು? ಉಚ್ಛೈಶ್ರವಸ್ಸೂ ಬೇಕಂತೆ, ಐರಾವತವೂ ಸಾಲದಂತೆ. ಮತ್ತೆ ಮೂರನೆಯ ಮುನಿವಾಹನ, ಎಂದರೆ ಸಪ್ತರ್ಷಿಗಳು ಹೊರುವ ಶಿಬಿಕೆ. ಛೆ ಛೆ ! ಇದನ್ನೇಕೆ ಸಪ್ತರ್ಷಿಗಳು ಮಾನ್ಯ ಮಾಡಿದರು? "ಮಹಾರಾಜನಿಗೆ, ಇಂದ್ರನ ಬಗ್ಗೆ ತಾತ್ಸಾರವಷ್ಟೇ ಅಲ್ಲ, ವಿರೋಧವೂ ಹುಟ್ಟಿತು . ಅದನ್ನು ತೀರಿಸಿಕೊಳ್ಳುವ ಕಾಲವೂ ಬಂದಿತು. 
ದೇವಾಸುರ ಸಂಗ್ರಾಮಗಳು ನಡೆಯುತ್ತಿದ್ದ ಕಾಲವದು. ಸಾಮಾನ್ಯವಾಗಿ ನೆರವಿಗಾಗಿ ನಾವು ದೇವರಲ್ಲಿ ಪ್ರಾರ್ಥಿಸಿದರೆ, ಅಲ್ಲಿನ ಅಯೋಧ್ಯಾಧಿಪತಿಗಳನ್ನು ಯಾಚಿಸುತ್ತಿದ್ದಿತು ದೇವ ಗಡಣ ನೆರವಿಗಾಗಿ; ಅಸುರ ಸಂಹಾರಕ್ಕಾಗಿ. ಅಷ್ಟು ಪ್ರಸಿದ್ಧರು ಸೂರ್ಯವಂಶದ ರಾಜರು. ಒಮ್ಮೆ ಈ ಅಯೋಧ್ಯಾಧಿಪತಿಗೂ ಸಂದೇಶ ಬಂದಿತು ಸಹಾಯ ಬೇಡಿ. ನಿಯಮ ಒಂದನ್ನಿಟ್ಟ ರಾಜ. ಅದೆಂದರೆ, ತನ್ನ ವಾಹನವಾಗಬೇಕು ಇಂದ್ರ . ರಾಜನಿಗೆ ಅದರಿಂದ ತೃಪ್ತಿ. ಇಂದ್ರನನ್ನು ಮಣಿಸಿದ ಸಂತೋಷ. ವಿಧಿಯಿಲ್ಲ. ಇಂದ್ರ ಎತ್ತಾಗಿ ನಿಂತ ಭಾಗೀರಥನ ಮುಂದೆ. ಇವ ಇಂದ್ರನ ಹೆಗಲೇರಿಯೇ ಬಿಟ್ಟ. ಎತ್ತಿನ ಹಿಣಿಲಿಗೆ ಸಂಸ್ಕೃತದಲ್ಲಿ ’ಕಕುತ್’ ಎಂಬ ಪದ.

ಕಕುತ್ತನ್ನು ಏರಿದ್ದರಿಂದ, ಅದರ ಸ್ಮರಣಾರ್ಹವಾಗಿ ತನ್ನ ಹೆಸರನ್ನು ಕಕುತ್ಸ್ಥನೆಂದು ಜಾಹೀರು ಮಾಡಿದ. ಈತನ ವಂಶವೇ ಮುಂದ ಕಾಕುತ್ಸ್ಥ ವಂಶವಾಯಿತು. (ಮುಂದೆ ಬಂದ ಶ್ರೀರಾಮರನ್ನು ಕಾಕುತ್ಸ್ಥ ವಂಶ ಸೂರ್ಯ ಎಂದು ಈ ಕಾರಣದಿಂದಲೇ ಮಂಗಳಾಶಾಸನ ಮಾಡುವುದು). 

ಈ ಕಕುತ್ಸ್ಥನ ಮಗನೇ ರಘು. ಅಪ್ಪನನ್ನು ಮೀರಿಸದ ಮಗ, ದಾನ ವೀರನೀತ (ಈತನ ಮಂದೆ ಕರ್ಣ ಯಾವ ಗಿಡದ ತೊಪ್ಪಲು?). ಬಡವರೆಲ್ಲ ಭಾಗ್ಯವಂತರಾಗಿ, ದಾನ ಬೇಡುವವರೇ ಇಲ್ಲವಾಗಿ, ಕೊಟ್ಟು ಕೊಟ್ಟು ಭಂಡಾರ ಬರಿದಾಗಿ, ದಾನ ಮಾಡಿ ಕೈಯ ಗೆರೆಗಳೆಲ್ಲ ಸವೆದು ಹೋಗಿ, ಮಹಾ ದಾನಶ್ರೀಯಾಗಿದ್ದಾಗ ಬಂದ ಕೌತ್ಸ ಕೈಯ್ಯೊಡ್ಡಿ. ಗುರುದಕ್ಷಿಣೆ ಕೊಡಲಾಗದೆ, ಕೊಡುವ ದಾನಿಯನ್ನು ರಘುವಿನಲ್ಲಿ ಕಂಡ. ಆದರೆ ಅವನು ಬಂದಾಗ ಕಂಡದ್ದು ಮಣ್ಣಿನ ಕುಡಿಕೆ ಮಡಿಕೆಗಳು. ಚಿನ್ನದ ತಟ್ಟೆಯಲ್ಲಿ ಪಾದ ತೊಳೆಯುತ್ತಿದ್ದ ರಾಜನ ಕೈಲಿ ನೀರು ತುಂಬಿದ ಮಣ್ಣಿನ ತಂಬಿಗೆ. ವಿಷಯ ತಿಳಿದ ಕೌತ್ಸ ತನ್ನ ಆಯ್ಕೆಯ ಅನೌಚಿತ್ಯಕ್ಕಾಗಿ ಒಳಗೇ ನಲುಗಿದ. ಬಂದ ವಿಷಯ ಕೇಳಿದ ರಾಜನಿಗೆ ಕೊಟ್ಟ ಉತ್ತರ ನಿಜವನ್ನು ಮರೆಮಾಡಿತ್ತು. ಏನೆಂದು ಕೇಳುವುದು; ಹೇಗೆಂದು ಕೇಳುವುದು; ಕಣ್ಣ ಮುಂದೆ ದಾರಿದ್ರ್ಯವೇ ನರ್ತಿಸುತ್ತಿರುವಾಗ? ಆದರೆ ಆ ಗುಟ್ಟಿನ ಜಾಡು ಹಿಡಿದು ರಘು ಹೇಳಿದ, " ಋಷಿಗಳೇ, ಅಳುಕದೆ, ನಮ್ಮ ಸದ್ಯ ಸ್ಥಿತಿಯನ್ನು ನೋಡಿ ನೋಯದೇ ಮನಬಿಚ್ಚಿ ಮಾತನಾಡಿ. ಏನು ಬಯಸಿ ಬಂದಿರಿ ನಮ್ಮಲ್ಲಿಗೆ? " .ರಾಜನೇ ಕೇಳುತ್ತಿದ್ದಾನೆ , ಹೇಳಲೇಕೆ ಸಂಕೋಚ? " ರಾಜನ್, ಗುರುದಕ್ಷಿಣೆಗಾಗಿ ರಾಶಿ ಹೊನ್ನು ಕೊಡಬೇಕಿದೆ. ಅದನ್ನು ಕೊಡುವ ದಾತನನ್ನರಸಿ ಬಂದೆ. ಬರುವ ಹೊತ್ತಿಗೆ ನಿನ್ನ ಖಜಾನೆ ಖಾಲಿ. ನಾನು ತಡವಾದೆ. ನೀನು ಚಿಂತಿಸಬೇಡ. ನಾನು ಅನ್ಯರಲ್ಲಿ ಯಾಚಿಸುವೆ. " ಕೇಳಿ ರಾಜನಿಗೆ ಸಿಟ್ಟು ಬಂತೋ, ಅವಮಾನವಾಯಿತೋ, " ಮಹರ್ಷಿಗಳೇ, ಅಯೋಧ್ಯಾಧೀಶರಲ್ಲಿ ಯಾಚಿಸಿ ಬರಿಗೈಲಿ ಹೋಗುವುದೇ? ಸೂರ್ಯವಂಶಕ್ಕೆ ಅವಮಾನವಲ್ಲವೇ ಇದರಿಂದ? ಬಿಡಿ, ನಿಮಗೆ ಅದರ ಚಿಂತೆ ಬೇಡ, ಇಂದು ವಿಶ್ರಮಿಸಿ. ನಾಳೆ ನೀವು ಬಯಸಿದಷ್ಟು ಹೊನ್ನು ಒಯ್ಯುವಿರಂತೆ. " .ಕೌತ್ಸನಿಗೆ ಹಿಂದೆ - ಮುಂದೆ ತಿಳಿಯದಾಯಿತು. ಹೇಗೆ ಹೊಂದಿಸುತ್ತಾನೆ ಬುಟ್ಟಿ- ಬುಟ್ಟಿ ಸ್ವರ್ಣ ವರಹಗಳನ್ನು? 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com