( ಸೃಷ್ಟಿಯ ರಹಸ್ಯವೇ ಅದು. ದರಿದ್ರರಿಗೆ ಹೆಚ್ಚು ಮಕ್ಕಳು; ಧನಿಕರಿಗೆ ಮಕ್ಕಳೇ ಇಲ್ಲದ್ದು. ಹೆಣ್ಣು ಬೇಕೆಂದು ಬಾಯ್ಬಿಟ್ಟ ಅಪ್ಪ-ಅಮ್ಮಂದಿರಿಗೆ ಸಾಲಾಗಿ ಗಂಡುಗಳೇ ಹುಟ್ಟುವುದು! ಸಾಕೆಂದು ಹರಕೆ ಹೊತ್ತರೂ, ಲಂಗ - ಸೀರೆಗಳೇ ಮನೆ ತುಂಬುವುದು. ಒಂದರ ಹಿಂದೊಂದು ಹುಟ್ಟುವ ಮುನ್ನವೇ ಮರಣಿಸುವುದು. ವೃದ್ಧನ ಯುವಪುತ್ರ ಅಪಘಾತದಲ್ಲಿ ಪ್ರಾಣ ತೊರೆಯುವುದು. ಎದ್ದರೆ ಕೂಡಲಾಗದೇ, ಮಲಗಿದರೆ ನಿಲ್ಲಲಾಗದೇ, ಕಣ್ಣು ಕಾಣದೇ, ಕಿವಿ ಕೇಳದೇ, ಉಂಡರೆ ಅರಗದೇ, ಬದುಕಿರಲು ಕಾರಣವೇ ಇರದಿದ್ದರೂ ಸಾಯದೇ ಇರುವುದು... ಅಸಲು ಹುಟ್ಟುವುದೇಕೆಂದು ಗೊತ್ತಿಲ್ಲದೇ ಹುಟ್ಟಿ, ಏನೇನೋ ಸಾಧಿಸುತ್ತಿದ್ದೇನೆಂದು ಹಾರಾಡಿ-ಹೋರಾಡಿ ತಣ್ಣಗಾಗುವುದು. ನಮ್ಮೆಲ್ಲ ಗೆಲುವುಗಳು ಮುಂದಿನ ಪೀಳಿಗೆಗೆ ಮಾನ್ಯವೇ ಆಗದೇ, ಅವರೇನೋ ಸಾಧಿಸುತ್ತೇವೆಂದು ಹೋರಾಡುವುದು. ಇವೆಲ್ಲ ನಿಷ್ಪ್ರಯೋಜಕ, ಸಾವು ಎಲ್ಲವನ್ನೂ ನುಂಗುತ್ತದೆ, ನಮ್ಮೆಲ್ಲ ಸಿದ್ಧಿಗಳು, ನಮ್ಮೆಲ್ಲ ಸೃಷ್ಟಿಗಳು, ನಮ್ಮೆಲ್ಲ ಸಾಹಸಗಳು, ನಮ್ಮೆಲ್ಲ ವಿಕ್ರಮಗಳು ಕಾಲ ರಾಯನ ಕಬಂಧ ಬಾಹುಗಳಲ್ಲಿ ಅಣಗಿಹೋಗುತ್ತದೆ, ಎಂದು ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಮತ್ತೆ ಜೀವನೋತ್ಸಾಹದಿಂದ ಕುಣಿಯುವುದು. ಅರ್ಥವೇ ಗೊತ್ತಾಗದೇ, ನಾವೂ ಕೋಟಿಯಲ್ಲಿ ಒಬ್ಬರಾಗುವುದು... ಏನೆನ್ನೋಣ ಈ ಜೀವನ ಚಕ್ರಕ್ಕೆ? ಈ ನಿರಾಶಾ ಬದುಕಿಗೆ ಕಾರಣವೆಲ್ಲಿದೆ?)