ಬಾಯಿ ನುಡಿಯುತ್ತಿದ್ದರೂ ನಾರದರು ಚಿತ್ತ ಕೆದಕುವುದನ್ನು ನಿಲ್ಲಿಸಿರಲಿಲ್ಲ . ವಾಲ್ಮೀಕಿ ಪ್ರಶ್ನೆ ಮುಗಿಯುತ್ತಿದ್ದಂತೆಯೇ ಒಂದು ಮುಖ ತಮಗೆ ಕಂಡಿತ್ತು . " ಇರಲಿ ಇರಲಿ " ... ಎಂದು ತಕ್ಷಣವೇ ಉತ್ತರಿಸದೇ ತಮ್ಮ ಯೋಚನೆಯನ್ನು ಮುಂದುವರಿಸಿದ್ದರು . ಎಷ್ಟೇ ಪ್ರಯತ್ನ ಪಟ್ಟರೂ , ಯಾವು ಯಾವುದೋ ರಾಜರ , ಧಾರ್ಮಿಕರ , ಪ್ರಭಾವ ಪುರುಷರ , ಸಜ್ಜನರುಗಳನ್ನು ತಿರುವಿಹಾಕಿದ್ದರೂ , ಒಂದಲ್ಲ ಒಂದು ಗುಣದ ಕೊರತೆಯೇ ಕಾಣುತ್ತಿತ್ತು . ಮೊದಲು ಕಂಡ ಮುಖ ಮಾತ್ರ ಮೆಲುನಗುತ್ತಿತ್ತು. "ಇನ್ನು ಹುಡುಕಲಾರೆ" ಎಂದು ತಲೆ ಕೊಡವಿದ ನಾರದರು, ನ್ಯಾಯಾಧೀಶರಾಗಿ ತಮ್ಮ ತೀರ್ಪನ್ನು ಓದಿಬಿಟ್ಟರು. "ಎಷ್ಟೇ ಹೋಲಿಸಿದರೂ ಎಷ್ಟೇ ಹುಡುಕಿದರೂ ಒಬ್ಬ ವ್ಯಕ್ತಿ ಮಾತ್ರ ಕಾಣಿಸುತ್ತಿದ್ದಾರೆ . ಅವರಿಗೆ ಸಮಾನವಾದ ಮತ್ತೊಬ್ಬ ಮನುಷ್ಯ ಕಾಣುತ್ತಿಲ್ಲ . ಏಕಮೇವಾದ್ವಿತೀಯ , ಮಹಾನ್ ಮಾನವರೆಂದರೆ ಅವರೊಬ್ಬರೇ . ಅವರೇ ಅಯೋಧ್ಯಾಧಿಪತಿ ದಶರಥ ಪುತ್ರ ಶ್ರೀರಾಮಚಂದ್ರ . " ( ಇಕ್ಷ್ವಾಕು ವಂಶ ಪ್ರಭವೋ ರಾಮೋ ನಾಮ ಜನೈಃ ಶೃತಃ )