ಆದರೆ ಇಂದು ರಾಮಕಥೆಯನ್ನು ಕೇಳಿದ ಮೇಲೆ , ರಾಮ ದರ್ಶನ ಮಾಡಿದ ಮೇಲೆ ತಮ್ಮ ನಾಯಕ ಆ ಸ್ಥಾನದಿಂದ ಬಿದ್ದೇ ಬಿಟ್ಟ . ಅಲ್ಲಿಯವರೆಗೆ ಮೆಚ್ಚುಗೆಗೆ ಪಾತ್ರನಾಗಿದ್ದ ಪೌಲಸ್ತ್ಯ ಪತಿತನಾಗಿಬಿಟ್ಟ . ತಾವು ಯಾವುದೋ ಒಂದು ದೌರ್ಬಲ್ಯವೆಂದು ಭಾವಿಸಿದ್ದದ್ದು ಒಂದಲ್ಲ , ಹತ್ತಲ್ಲ , ಅವನು ಮಾತು , ಕಥೆ , ವರ್ತನೆ , ನಡತೆ ... ಎಲ್ಲವೂ ಅನಾಗರಿಕವೇ . ಎಲ್ಲವೂ ದೋಷ ಪೂರ್ಣವೇ . ಅರಣ್ಯನ್ಯಾಯವೇ . ಕೇವಲ ದರ್ಪ , ಮನಸೋ ಇಛ್ಛೆ ನಡೆವ ಚಟ , ಎದುರಾದವರ ತಲೆತಗೆವ , ಬುದ್ಧಿ ಹೇಳುವವರ ನಾಲಗೆ ಸೀಳುವ , ಬಂಧುಗಳನ್ನು ಬಡಿವ , ಕೇವಲ ಕಾಮಪಿಶಾಚಿಯಾಗಿದ್ದ . ಯಾರನ್ನೂ ಲೆಕ್ಕಿಸದ , ಎಲ್ಲರನ್ನೂ ಬಗ್ಗುಬಡಿವ ನಿರಂಕುಶನಾಗಿದ್ದ . ದೇವರ ವರ-ದೇಹದ ಬಲ ಈ ಎರಡೂ ಇದ್ದೂ ಅಧರ್ಮಿಯಾದರೆ , ಹೇಗೆ ಒಬ್ಬ ಕೊಬ್ಬಿ , ಮೈಮರೆತು , ನೀತಿ ನಿಯಮಗಳನ್ನು ಗಾಳಿಗೆ ತೂರಿ , ಲಂಗು ಲಗಾಮಿಲ್ಲದೆ ನುಗ್ಗಿ , ಕೊನೆಗೆ ಪಾಪದ ಕೊಡ ತುಂಬಿ ಸತ್ತಾಗ ಸಂಸ್ಕರಿಸಲು ಮಗನಿಲ್ಲದೆ ಹೋಗಿ , ಪಿಂಡ ಪ್ರದಾನಕ್ಕೆ ಒಬ್ಬನನ್ನೂ ಉಳಿಸದೇ ತನ್ನ ಕಾಮಕ್ಕೆ ಎಲ್ಲ ಮಕ್ಕಳನ್ನೂ ಬಲಿಕೊಟ್ಟು ನಿರ್ನಾಮವಾದನೆಂಬ ದುರಂತಕ್ಕೆ ಸಾಕ್ಷಿಯಾಗಿ ಬಿಟ್ಟ !!!!! ಈ ಯೋಚನೆ ಬರುತ್ತಿದ್ದಂತೆಯೇ ತಮ್ಮ ದೀರ್ಘ ಕವನ ಅರ್ಥಹೀನವೆನಿಸಿತು . ಅದನ್ನು ಬದಲಿಸಬೇಕು . ಮೊದಲು ಆ ಶೀರ್ಷಿಕೆಯನ್ನು ಕಿತ್ತೆಸೆಯಬೇಕು ಎನಿಸಿತು . ಪೌಲಸ್ತ್ಯವಧ ಶಿರೋನಾಮೆ ಮೇಲೆ ಅಡ್ಡಗೀಟು ಬಿತ್ತು.