ಶ್ಲೋಕವಾದ ವಾಲ್ಮೀಕಿಗಳ ಶೋಕ, ಬ್ರಹ್ಮನ ಆಗಮನ

ಪಕ್ಕದಲ್ಲಿ ಬರುತ್ತಿದ್ದ ಶಿಷ್ಯನಿಗೆ ಹೇಳಿದರು , " ಭರದ್ವಾಜ , ಶ್ಲೋಕ ಹುಟ್ಟಿದ್ದು ನೋಡು . ಶೋಕ ಹೋಗಿ ಶ್ಲೋಕವಾಗಿಬಿಟ್ಟಿತು ! ಕಾವ್ಯ ಸೃಷ್ಟಿ ನಮ್ಮ ಕೈಲಿಲ್ಲ.
ಶ್ಲೋಕವಾದ ವಾಲ್ಮೀಕಿಗಳ ಶೋಕ, ಬ್ರಹ್ಮನ ಆಗಮನ
Updated on
ಬಿಸಿ ಕಡಿಮೆಯಾದಮೇಲೆ ಅವರಿಗನ್ನಿಸಿತು , " ಇದಾವ ಸೀಮೆ ಶಾಪ ? ಯಾವ ಪ್ರತಿಷ್ಠೆ ತಾನೆ ಶಾಶ್ವತವಾಗಿರುತ್ತದೆ ? ಎಲ್ಲರೂ ಅಶಾಶ್ವತರೇ . ತಾವೇನೂ ಅಂತಹ ಶಾಪವನ್ನೇ ಕೊಡಲಿಲ್ಲ . ಏನೊ ಉದ್ವೇಗ ; ಏನೋ ನೋವು ; ಏನೋ ತಳಮಳ ; ಅದು ಏನೋ ಬಾಯಿಂದ ಹೊರದಬ್ಬಿತು . ಆದರೆ ಇದೇನು ಆಶ್ಚರ್ಯ ?! ತಾವು ಶಾಪದಂತೆ ಕೊಟ್ಟಿದ್ದು ಶಾಸ್ತ್ರದಂತೆ ಗಣಗಳಿಂದ ಕೂಡಿದೆ ; ನಾಲ್ಕಕ್ಷರಗಳು ರಿಂಗಣಗುಣಿದಿದೆ . ಎರಡು ಸಾಲುಗಳಲ್ಲಿ 32 ಅಕ್ಷರಗಳ ಶ್ಲೋಕವೊಂದು ಹೊರಹೊಮ್ಮಿದೆ !  ಪಕ್ಕದಲ್ಲಿ ಬರುತ್ತಿದ್ದ ಶಿಷ್ಯನಿಗೆ ಹೇಳಿದರು , " ಭರದ್ವಾಜ , ಶ್ಲೋಕ ಹುಟ್ಟಿದ್ದು ನೋಡು . ಶೋಕ ಹೋಗಿ ಶ್ಲೋಕವಾಗಿಬಿಟ್ಟಿತು ! ಕಾವ್ಯ ಸೃಷ್ಟಿ ನಮ್ಮ ಕೈಲಿಲ್ಲ. ತನ್ನಿಂದ ತಾನೇ ಮೊಗ್ಗರಳಬೇಕು. ವೀಣೆಯಲ್ಲಿ ನುಡಿಸುವಂತಿದೆ. ಗೇಯ ಗುಣ ಹೊಂದಿದೆ. ಏರಿಳಿತಗಳಿಗೆ ಆಧಾರವಾಗಿದೆ . ಅಕ್ಷರಸಮೂಹವು ಗಣಗಳಾಗಿ ವಿಭಜಿಸಲ್ಪಟ್ಟಿದೆ . ನಾನು ನುಡಿದದ್ದು ಶ್ಲೋಕ ಛಂದಸ್ಸೇ ! " 
                (ಪಾದಬದ್ಧೋಕ್ಷರಸಮಂ ತಂತ್ರೀ ಲಯ ಸಮನ್ವಿತಃ
           ಶೋಕಾರ್ತಸ್ಯ ಪ್ರವೃತ್ತೋಮೇ ಶ್ಲೋಕೋ ಭವತು ನಾನ್ಯಥಾ )
ಬ್ರಹ್ಮಾಗಮನ:-
ಶಿಷ್ಯರು ದಡಬಡಿಸಿ ಒಳಬಂದರು. ಮುಖದಲ್ಲಿ ಆತಂಕ , ಹೆದರಿಕೆ , ಗಡಿಬಿಡಿ , ತೊದಲುತ್ತಿದ್ದಾರೆ, "ಗುರುಗಳೇ ! ನಾವೆಂದೂ ಕಂಡಿರದಷ್ಟು ದೊಡ್ಡ ಹಂಸ ; ಇಡೀ ಆಶ್ರಮದಷ್ಟು ಅಗಲ, ತೆಂಗಿನಮರದಷ್ಟು ಎತ್ತರ , ಈಗತಾನೇ ಆಕಾಶದಿಂದ ಇಳಿಯಿತು . ಭಯದಿಂದ ಏನೂ ತೋಚದೇ ಮೂಕರಾಗಿ ಮರಗಟ್ಟಿದ್ದಾಗ , ವೃದ್ಧರೊಬ್ಬರು ಅದರಿಂದ ಇಳಿದರು. ನಿಮಗೆ ಹೇಳಲು ಓಡಿಬಂದೆವು. "
ಧಿಗ್ಗನೆದ್ದ ವಾಲ್ಮೀಕಿಗಳಿಗೆ ಹರ್ಷ , ಆತಂಕ , ಉತ್ಸಾಹ . ಅರೆ ! ಬೆಳಿಗ್ಗೆ ಮಗ ಬಂದಿದ್ದ . ಈಗ ಅಪ್ಪ ಬಂದರು ! ಚುರುಕು ನಡಿಗೆಯಿಂದ ಹೊರಬರುವ ಹೊತ್ತಿಗೆ ಎಲೆಮನೆಯ ಬಾಗಿಲಿಗೇ ಬ್ರಹ್ಮ ಬಂದಿದ್ದ. 
ಸಾಷ್ಟಾಂಗ , ಪಾದಪ್ರಕ್ಷಾಳನ , ಸ್ವಾಗತ , ಅರ್ಘ್ಯ , ಮಧುಪರ್ಕ , ಕುಶಲೋಪರಿ... ಎಲ್ಲಾ ಶಾಸ್ತ್ರೀಯವಾಗಿ ನಡೆಯಿತು. ಬ್ರಹ್ಮನದು ಆಜಾನಬಾಹು ಶರೀರ. ಮುಖದಲ್ಲಿ ಸದಾ ಮಂದಹಾಸ. ಸ್ಥಿತಪ್ರಙ್ಞ. ಅರಳಿದ ಕಣ್ಣುಗಳು. ನಯನಗಳಲ್ಲಿ ಚುರುಕುತನ. ಕೆನ್ನೆ ತುಂಬಿದ ಗಡ್ಡದಲ್ಲಿ ಅರ್ಧಭಾಗ ಪೂರ್ಣ ಬಿಳುಪು. ಇನ್ನರ್ಧ ಕಪ್ಪು ; ಕಡುಗಪ್ಪು. ನೋಟಕ್ಕೆ ಮುದುಕ. ಆದರೆ ಸದಾ ಜವ್ವನಿಗ. ಎದೆಯನ್ನು ಮುಚ್ಚಿದ ರೇಶಿಮೆ ಶಲ್ಯ. ನಡು ಬಿಗಿದು ಕಟ್ಟಿದ ಕಚ್ಚೆ ಮೊಗಟ. ಜಪಮಾಲೆ, ದಂಡ , ಕಮಂಡಲ , ಅಭಯಗಳ ಕೈ. ಸದಾ ತಪಸ್ಸು , ಙ್ಞಾನ , ಜಪಗಳ ಪ್ರತೀಕ . ಪ್ರತಿಕ್ಷಣವೂ ಸೃಷ್ಟಿಕ್ರಿಯೆ . ಅದಕ್ಕೆ ಸದಾ ತಯಾರಿ . ಗುಣಾವಗುಣಗಳ ಅಳತೆ. ಯಮನಿಂದ ಬಂದ ಆ ಜೀವಿ ಮಾಡಿರುವ ಪುಣ್ಯ - ಪಾಪಗಳ ಯಾದಿ. ಹಿಂದಿನ ಜನ್ಮಗಳಲ್ಲಿ ಸಂಗ್ರಹಿಸಿದ ಪಾಪ ಪುಣ್ಯಗಳ ಸಂಚಿತ ರಾಶಿ . ಈಗಾಗಲೇ ಅನುಭವಿಸಲು ಆರಂಭಿಸಿದ ಪ್ರಾರಬ್ಧ . ಅದರಲ್ಲಿ ಆಗಿರುವ ಖರ್ಚು ; ಉಳಿದದ್ದರ ನೋಟ. ಕಳೆದ ಹುಟ್ಟುಗಳಲ್ಲಿ ಆ ಜೀವಿ ಯಾರನ್ನು ನೋಯಿಸಿತು, ಎಷ್ಟು ಸಂತಸವನ್ನು ಎಷ್ಟು ಜನರಿಗೆ ನೀಡಿತು , ಪರೋಪಕಾರಿಯೇ , ಪರಿಸರ ನಾಶಕನೇ , ಸ್ವಾರ್ಥಿಯೇ , ಅರ್ಥಿಯೇ , ಪರಾರ್ಥಿಯೇ , ದಾನಿಯೇ , ಕೃಪಣನೇ , ಧಾರ್ಮಿಕನೇ , ಅಧಾರ್ಮಿಕನೇ ..... ಈ ಎಲ್ಲದರ ತುಲನೆ . ಕೊನೆಗೆ ಆ ಜೀವಿಗೆ ಯಾವ ದೇಹ ಕೊಡಬೇಕು ? ಜಲಚರವೋ , ಹಾರುವ ಹಕ್ಕಿಯೋ , ತೆವಳುವ ಹಾವೋ - ಮೊಸಳೆಯೋ , ಜಡ್ಡುಗಟ್ಟಿದ ಮರವೋ , ಮನುಷ್ಯನೋ ಎಂಬುದರ ಲೆಕ್ಕಾಚಾರ . ಎಂತಹ ಜೀವನ , ಎಷ್ಟು ಕಾಲ ಇರಬೇಕು , ಧನ ಸಂಗ್ರಹವೋ , ದಾರಿದ್ರ್ಯವೋ , ಭೋಗವೋ , ರೋಗವೋ ಙ್ಞಾನವೋ , ಅಙ್ಞಾನವೋ , ಎಲ್ಲದರ ತೂಕ . ಹೀಗೆ ಪ್ರತಿ ಜೀವಿಯ ಸೃಷ್ಟಿಯ ಹಿನ್ನೆಲೆಯಲ್ಲಿ ಸತತ ಮಗ್ನ . ಕೋಟಿ ಕೋಟಿ ಜೀವಿಗಳ ಪ್ರತಿ ಕ್ಷಣದ ಜನನಕ್ಕೂ ಬ್ರಮ್ಹನ ಬಳಲದ ಬರಹ . 
ಸದಾ ಕಾರ್ಯ ತತ್ಪರನಾದ ಬ್ರಮ್ಹ ದೇವರು ಬಂದಿದ್ದಾರೆ ತನ್ನ ನೆಲೆಗೆ. ಈ ಎಲ್ಲ ಆಲೋಚನೆಗಳ ಹಿನ್ನೆಲೆಯಾಗಿ ಆ ಹಕ್ಕಿಯ ಮರಣ , ದಯನೀಯ ಹೆಣ್ಣು ಹಕ್ಕಿಯ ಆಕ್ರಂದನ , ತಾನಿತ್ತ ಅರ್ಥಹೀನ ಶಾಪ , ಈ ಎಲ್ಲ ಗೊಂದಲ ವಾಲ್ಮೀಕಿ ಮುಖದಲ್ಲಿ. 
ಎಲ್ಲವನ್ನೂ ಅರಿಯಬಲ್ಲ ಬ್ರಹ್ಮ ಕೇಳಿದ ; ವಾಲ್ಮೀಕಿಯ ಕಳವಳದ ಕಾರಣವನ್ನು . ಬೆಳಿಗ್ಗಿನಿಂದ ನಡೆದದ್ದೆಲ್ಲವನ್ನೂ ವಿವರಿಸಿ ಹೇಳಿದ ವಾಲ್ಮೀಕಿಗಳು ಕೊನೆಯಲ್ಲಿ ಕೇಳಿದರು , " ಯಾರಿಗೂ ಹಿಂಸೆ ಕೊಡೆನೆಂಬ ಪ್ರತಿಙ್ಞೆ ಮಾಡಿ ಸನ್ಯಾಸಿಯಾದ ನಾನು ಇಂದೇಕೆ ಆ ಬೇಡನಿಗೆ ಶಾಪ ಕೊಟ್ಟೆ ? ಏಕೆ ನನ್ನ ಮನಸ್ಸು ನೊಂದಿದೆ ? ಏಕೋ ಏನೋ ಏನೂ ಗೊತ್ತಾಗುತ್ತಿಲ್ಲ . ಕೇವಲ ತಳಮಳ . ಕೇವಲ ಗೊಂದಲ . " ಹೇಗೆ ಮಾತು ಮುಗಿಸುವುದೆಂದು ಅರಿಯದೆ ವಾಲ್ಮೀಕಿಗಳು ಸುಮ್ಮನಾದರು.
ನಗು ಮೊಗದ ವಿರಿಂಚಿ ಬಾಯಿಬಿಟ್ಟ . " ನಿನಗೆ ನೀನೇನೋ ಮಾಡಿದೆನೆಂಬ ಭ್ರಮೆ ಏಕೆ ? ಇಷ್ಟು ತಪಸ್ಸು ಮಾಡಿದ್ದೀಯೆ , ಇಷ್ಟು ವರ್ಷಗಳ ಚಿಂತನೆ ನಡೆಸಿದ್ದೀಯೆ , ಎಷ್ಟೆಷ್ಟೋ ಮುನಿಗಳ ಮಧ್ಯೆ ಚರ್ಚಿಸಿದ್ದೀಯೆ , ಯಾವುದೂ ನಿನ್ನ ಕೈಲಿಲ್ಲವೆಂದೂ , ಎಲ್ಲವೂ ದೈವೇಚ್ಛೆ ಎಂದೂ, ಏನೇ ಆದರೂ ಅದು ಪೂರ್ವ ನಿಯಾಮಕವೆಂದೂ ನೀನು ತಿಳಿದಿಲ್ಲವೇ ? ಇದ್ದಕ್ಕಿದ್ದಂತೆಯೇ ನಾರದ ಬಂದದ್ದು, ಬೇಡನೊಬ್ಬ ಹಕ್ಕಿ ಹೊಡೆದದ್ದು, ನೀನು ಶಾಪ ಕೊಟ್ಟದ್ದು, ಈಗ ನಾನು ಬಂದಿರುವುದು... ಇವೆಲ್ಲಾ ಯೋಜಿಸಿದಂತೆ ನಡೆಯುತ್ತಿದೆ ಎಂದು ಅನಿಸುತ್ತಿಲ್ಲವೇ? ಅಥವ ಇವುಗಳೆಲ್ಲ ಆಕಸ್ಮಿಕ ಅಂದುಕೊಳ್ಳುತ್ತಿದ್ದೀಯೋ."  (ಮುಗಿದಿಲ್ಲ !! ) 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com