ಬ್ರಹ್ಮ ಮಾತನಾಡುತ್ತಿದ್ದರೂ ವಾಲ್ಮೀಕಿಗಳು ತಮ್ಮ ದಿವ್ಯ ಪ್ರಙ್ಞೆಯಲ್ಲಿ ಮುಳುಗಿಬಿಟ್ಟಿದ್ದರು . ಕಣ್ಣ ಮುಂದೆ ನೂರು ನೂರು ಜನರ ಓಡಾಟ . ಅವರ ಮನಸ್ಸಿನಲ್ಲಿ ದಶರಥನಿಂದ ಹಿಡಿದು ದಶಕಂಠನ ವರೆಗಿನ ಪ್ರತಿ ಕ್ಷಣದ , ಪ್ರತಿ ಮಾತಿನ ಪುನರಭಿನಯವಾಗುತ್ತಿದೆ . ಬ್ರಹ್ಮ ವರದಿಂದ ಪದ್ಮಾಸನಸ್ಥ ವಾಲ್ಮೀಕಿಯ ಕಣ್ಣ ಮುಂದೆ ರಾಮ ವಂಶ , ರಾಮ ಜನನ , ವಿದ್ಯಾಭ್ಯಾಸ , ತಾಟಕಾ ವಧೆ , ವಿವಾಹ , ಕೈಕೆ ಪ್ರಸಂಗ , ದಂಡಕಾರಣ್ಯ ಪ್ರವೇಶ , ಶೂರ್ಪಣಖಾಗಮನ , ಸುಗ್ರೀವ ಭೇಟಿ , ಸಮುದ್ರೋಲ್ಲಂಘನ , ರಾವಣ ಪತನ ..... ಎಲ್ಲವೂ ಕಾಣುತ್ತಿವೆ. ಘಂಟೆಗಳೇ ಕರಗಿಹೋಯಿತೇನೋ ! ಸಂಜೆ ಸರಿದು ರಾತ್ರಿಯಾದಾಗ ಕಣ್ಣು ಬಿಟ್ಟ ವಾಲ್ಮೀಕಿಯ ತಲೆ ಸವರಿ ಬ್ರಹ್ಮ ವರವಿತ್ತ ; " ವಾಲ್ಮೀಕಿ , ರಾಮ ಕಾವ್ಯ ರಚಿಸು . ಆ ಆದಿಕಾವ್ಯ ದಿನ ಕಳೆದಂತೆಲ್ಲ ವಿಸ್ತರಿಸುತ್ತಲೇ ಇರುತ್ತದೆ . ಭಾರತದ ಅಂಚೂ ದಾಟಿ ವಿಶ್ವದೆಲ್ಲ ಊರುಗಳಲ್ಲಿಯೂ ಇದರ ಸಂಕೀರ್ತನೆ ನಡೆಯುತ್ತದೆ . ಸಂತುಷ್ಟನಾಗಿ ನಾನು ನಿನಗೆ ಈ ವರ ಕೊಡುತ್ತಿರುವೆ ತಗೆದುಕೊ. " ಕಮಂಡಲದ ನೀರನ್ನು ವಾಲ್ಮೀಕಿಗಳ ಮೇಲೆ ಸಿಂಪಡಿಸಿ ಆಶೀರ್ವದಿಸಿದ ಆ ಬ್ರಹ್ಮ " ಭೂಮಿಮೇಲೆಲ್ಲಿವರೆಗಿರುವುದೋ ನದಿ ಬೆಟ್ಟ ಅಲ್ಲಿತನಕೀ ಕಾವ್ಯ ಪ್ರಸರಿಸಲಿ ಜಗವೆಲ್ಲ ಎಲ್ಲಿವರಿಗೀ ಕಾವ್ಯ ಓಡಾಡುತಿರುವುದೋ ಅಲ್ಲಿವರೆವಿಗೆ ನಿನಗೆ ಸ್ವಾಗತವು ಎಲ್ಲೆಲ್ಲು ವೈಕುಂಠ ಕೈಲಾಸ ಸತ್ಯಲೋಕಕ್ಕೆಲ್ಲ ನಿನಗೆ ಮುಕ್ತ ಪ್ರವೇಶ ಅಮರರಾಜ್ಯಕ್ಕೂ "