ರಾಮಾಯಣ ಕಾವ್ಯಕ್ಕೆ ಬ್ರಹ್ಮ ಬೆಂಬಲ, ಅನುಮೋದನೆ, ಆಶೀರ್ವಾದ, ನಾಮಕರಣ

ಗೊಂದಲದಿಂದ ಹೊರಬಂದ ವಾಲ್ಮೀಕಿ ಕೇಳಿದರು, " ಹಾಗಾದರೆ ಇವೆಲ್ಲಾ ನಿನ್ನ ಯೋಜನೆಯೋ ? " ಖಚಿತ ಧ್ವನಿ ಬ್ರಹ್ಮನದು .
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on
ಗೊಂದಲದಿಂದ ಹೊರಬಂದ ವಾಲ್ಮೀಕಿ ಕೇಳಿದರು, " ಹಾಗಾದರೆ ಇವೆಲ್ಲಾ ನಿನ್ನ ಯೋಜನೆಯೋ ? " ಖಚಿತ ಧ್ವನಿ ಬ್ರಹ್ಮನದು . ಇದೊಂದೇ ಏನು , ಚರಾ ಚರಗಳಲ್ಲಿ ಏನೇನು ನಡೆಯುವುದೋ ಅವೆಲ್ಲವೂ ನನ್ನ ಸಂಕಲ್ಪವೇ !! ನನ್ನ ಇಚ್ಛೆಯಿಂದಲೇ ನಾರದ ಬಂದು ನಿನಗೆ ಉಪದೇಶಿಸಿದ್ದು. ಕೇಳಿದ್ದು ಬರವಣಿಗೆಗೆ ಇಳಿಯಬೇಕಲ್ಲ?.... ಅದರ ರಸೋತ್ಪತ್ತಿಗಾಗಿಯೇ ವ್ಯಾಧ-ಕ್ರೌಂಚ ಪ್ರಸಂಗ . ಅದು ನಿನ್ನನ್ನು ಕದಲಿಸಿಬಿಟ್ಟಿತು . ಭಾವನೆಗಳು ಉಕ್ಕಿ ಹರಿಯತೊಡಗಿದೆ . ಈಗ ಆ ಕರುಣಾ ರಸಾರ್ದ್ರ ಹೃದಯದಿಂದ ಕಾವ್ಯೋತ್ಪತ್ತಿಯಾಗಲೇ ಬೇಕಿದೆ . ಅದನ್ನು ನಿನ್ನಿಂದ ಮಾಡಿಸಲೇ ನಾನು ಬಂದದ್ದು . " 
ಮಾತಾಡದೇ ಗುರುವಾಣೆಗೆ ಕಿವಿಗೊಟ್ಟ ವಾಲ್ಮೀಕಿಗಳನ್ನುದ್ದೇಶಿಸಿ ಬ್ರಹ್ಮ ಭರವಸೆಯ ಬೆನ್ನುತಟ್ಟಿದ . " ನಾರದ ಹೇಳಿದಂತೆ ಕಾವ್ಯ ರಚನೆ ಮಾಡು . ರಾಮ , ಸೀತೆ , ಲಕ್ಷ್ಮಣ , ದಶಕಂಠ , ಕುಂಭಕರ್ಣ .... ಈ ಎಲ್ಲರೂ ಏನೇನು ಮಾತನಾಡಿದರೋ , ಅದು ಗುಟ್ಟಾಗಿರಲಿ , ಬಹಿರಂಗವಾಗಿರಲಿ , ಆ ಎಲ್ಲವೂ ನಿನಗೆ ಗೋಚರಿಸಲಿ . ಅದು ಕಾರಣ ನಿನ್ನ ಕಾವ್ಯದಲ್ಲಿ ಸುಳ್ಳು ಸುಳಿಯದೇ ಇರಲಿ . " ವೃತ್ತಂ ಕಥಯ ವೀರಸ್ಯ ಯಥಾ ತೇ ನಾರದಚ್ಛೃತಂ
ರಹಸ್ಯಂಚ ಪ್ರಕಾಶಂಚ ಯದ್‌ವೃತ್ತಂ ತಸ್ಯ ಧೀಮತಃ ನ ತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ"
ಬ್ರಹ್ಮ ಮಾತನಾಡುತ್ತಿದ್ದರೂ ವಾಲ್ಮೀಕಿಗಳು ತಮ್ಮ ದಿವ್ಯ ಪ್ರಙ್ಞೆಯಲ್ಲಿ ಮುಳುಗಿಬಿಟ್ಟಿದ್ದರು . ಕಣ್ಣ ಮುಂದೆ ನೂರು ನೂರು ಜನರ ಓಡಾಟ . ಅವರ ಮನಸ್ಸಿನಲ್ಲಿ ದಶರಥನಿಂದ ಹಿಡಿದು ದಶಕಂಠನ ವರೆಗಿನ ಪ್ರತಿ ಕ್ಷಣದ , ಪ್ರತಿ ಮಾತಿನ ಪುನರಭಿನಯವಾಗುತ್ತಿದೆ . ಬ್ರಹ್ಮ ವರದಿಂದ ಪದ್ಮಾಸನಸ್ಥ ವಾಲ್ಮೀಕಿಯ ಕಣ್ಣ ಮುಂದೆ ರಾಮ ವಂಶ , ರಾಮ ಜನನ , ವಿದ್ಯಾಭ್ಯಾಸ , ತಾಟಕಾ ವಧೆ , ವಿವಾಹ , ಕೈಕೆ ಪ್ರಸಂಗ , ದಂಡಕಾರಣ್ಯ ಪ್ರವೇಶ , ಶೂರ್ಪಣಖಾಗಮನ , ಸುಗ್ರೀವ ಭೇಟಿ , ಸಮುದ್ರೋಲ್ಲಂಘನ , ರಾವಣ ಪತನ ..... ಎಲ್ಲವೂ ಕಾಣುತ್ತಿವೆ. ಘಂಟೆಗಳೇ ಕರಗಿಹೋಯಿತೇನೋ ! ಸಂಜೆ ಸರಿದು ರಾತ್ರಿಯಾದಾಗ ಕಣ್ಣು ಬಿಟ್ಟ ವಾಲ್ಮೀಕಿಯ ತಲೆ ಸವರಿ ಬ್ರಹ್ಮ ವರವಿತ್ತ ; " ವಾಲ್ಮೀಕಿ , ರಾಮ ಕಾವ್ಯ ರಚಿಸು . ಆ ಆದಿಕಾವ್ಯ ದಿನ ಕಳೆದಂತೆಲ್ಲ ವಿಸ್ತರಿಸುತ್ತಲೇ ಇರುತ್ತದೆ . ಭಾರತದ ಅಂಚೂ ದಾಟಿ ವಿಶ್ವದೆಲ್ಲ ಊರುಗಳಲ್ಲಿಯೂ ಇದರ ಸಂಕೀರ್ತನೆ ನಡೆಯುತ್ತದೆ . ಸಂತುಷ್ಟನಾಗಿ ನಾನು ನಿನಗೆ ಈ ವರ ಕೊಡುತ್ತಿರುವೆ ತಗೆದುಕೊ. " ಕಮಂಡಲದ ನೀರನ್ನು ವಾಲ್ಮೀಕಿಗಳ ಮೇಲೆ ಸಿಂಪಡಿಸಿ ಆಶೀರ್ವದಿಸಿದ ಆ ಬ್ರಹ್ಮ " ಭೂಮಿಮೇಲೆಲ್ಲಿವರೆಗಿರುವುದೋ ನದಿ ಬೆಟ್ಟ  ಅಲ್ಲಿತನಕೀ ಕಾವ್ಯ ಪ್ರಸರಿಸಲಿ ಜಗವೆಲ್ಲ ಎಲ್ಲಿವರಿಗೀ ಕಾವ್ಯ ಓಡಾಡುತಿರುವುದೋ  ಅಲ್ಲಿವರೆವಿಗೆ ನಿನಗೆ ಸ್ವಾಗತವು ಎಲ್ಲೆಲ್ಲು ವೈಕುಂಠ ಕೈಲಾಸ ಸತ್ಯಲೋಕಕ್ಕೆಲ್ಲ ನಿನಗೆ ಮುಕ್ತ ಪ್ರವೇಶ ಅಮರರಾಜ್ಯಕ್ಕೂ " 
                   ( ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ
                 ತಾವದ್ ರಾಮಾಯಣ ಕಥಾ ಲೋಕೇಷು ಪ್ರಚರಿಷ್ಯತಿ
               ಯಾವದ್ ರಾಮಾಯಣ ಕಥಾ ತ್ವತ್ಕೃತಾ ಪ್ರಚರಿಷ್ಯತಿ
               ತಾವದೂರ್ಧ ಮದಶ್ಚತ್ವಂ ಮಲ್ಲೋಕೇಷು ನಿವತ್ಸ್ಯಸಿ )
ದ್ವಿತೀಯ ನಾಮಕರಣ:
ಎಷ್ಟು ವರ್ಷಗಳು ಹಿಡಿಯಿತೋ ಕಾವ್ಯ ಪೂರ್ಣವಾಗಲು. ಇದೀಗ ಅದಕ್ಕೆ ಹೆಸರಿಡಬೇಕಲ್ಲ ! ಅವರ ಮನದ ತುಂಬ ಸೀತಾ ಚಿತ್ರ. ಎಂತಹ ಸಾಧ್ವಿ ! ಗಂಡನನ್ನು ಬಿಟ್ಟಿರದ ಪತಿವ್ರತೆ . ಕಾಡಿನಲ್ಲಿ ಅನುಸರಣೆ. ಎಂತಹ ವಿಪತ್ತುಗಳನ್ನು ಎದುರಿಸಿದಳು ! ರಾವಣನಂತಹ ಸುಂದರ, ಪರಾಕ್ರಮಿ, ಧನಿಕ, ಚಿನ್ನದಲ್ಲೇ ಕಟ್ಟಿದ ಅರಮನೆಯ ಒಡೆಯ, ಎಲ್ಲ ದೇವತೆಗಳಿಗೂ ಶಾಸಕ ,ಇಂತಹ ರಾವಣ ಅವಳ ಮುಂದೆ ಬೇಡಿ ಅಂಗಲಾಚಿದರೂ , ರಾಕ್ಷಸಿಯರ ಮೂಲಕ ಹೆದರಿಸಿದರೂ , ಕೊನೆಗೆ ಬೆಳಗಿನ ತಿಂಡಿಗಾಗಿ ಅವಳನ್ನೇ ಚೂರು ಚೂರು ಮಾಡುತ್ತೇನೆಂದರೂ... ಏನೇ ಹರ ಸಾಹಸಪಟ್ಟರೂ ಒಲಿದಳೇ ? ಒಮ್ಮೆಯಾದರೂ ಮೆಚ್ಚುಗೆಯಿಂದ ರಾವಣ ಬೇಡ , ಲಂಕೆಯನ್ನಾದರೂ ನೋಡಿದಳೇ ? ಶತ್ರುಕ್ಷೇತ್ರದಲ್ಲಿ , ಒಬ್ಬಂಟಿಯಾಗಿ, ನಗುಮೊಗದ ಆಹ್ವಾನವಿರದ ಆ ವೈರಭೂಮಿಯಲ್ಲಿ, ಅದೆಂತು ಸಂಯಮದಿಂದಿದ್ದಳು? ಅದೆಂತು ಆ ಸಂಕಷ್ಟದ ಸರೆಮಾಲೆಯನ್ನು ಧರಿಸಿದ್ದರೂ ಸಾಯದೇ ಜೀವ ಹಿಡಿದಿದ್ದಳು?... ಹೀಗೆ ಏನೇನೋ ತಲೆತುಂಬಿ ತಮ್ಮ ಕಾವ್ಯಕ್ಕೆ ಹೆಸರಿಟ್ಟುಬಿಟ್ಟರು, " ಸೀತಾಮಹಾಚರಿತ್ರೆ " ( ಸೀತಾಯಾಶ್ಚರಿತಮ್ ಮಹತ್).
ತಾವು ಬರೆದಿದ್ದನ್ನೇ ಒಂದೆರಡು ಬಾರಿ ಓದಿ ಆನಂತರ , " ಏತಕ್ಕೂ ಇರಲಿ , ಪ್ರತ್ಯಕ್ಷ ಸಾಕ್ಷಿ ಹೇಗೂ ಇಲ್ಲೇ ಇದ್ದಾಳೆ . ಆಕೆಯ ಎದುರೇ ಓದಿ ಬಿಡೋಣ. ಏನಾದರೂ ತಪ್ಪಿದ್ದರೆ, ಬದಲಾವಣೆಗಳಿದ್ದರೆ ಸರಿಪಡಿಸಿಬಿಡೋಣ ಎಂದು ಸೀತೆಯನ್ನು ಆಹ್ವಾನಿಸಿದರು.
(ಮುಗಿದಿಲ್ಲ !! ) 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com