ತಮ್ಮ ಚರಿತ್ರೆಯನ್ನೇ ಮಹರ್ಷಿಗಳು ಬರೆದಿರುವುದು ಕೇಳಿ ಕುತೂಹಲ, ರೋಮಾಂಚನಗಳನ್ನು ಹೊದ್ದು ಕುಳಿತ ಸೀತೆ, ಕೇಳುತ್ತ ಕೇಳುತ್ತ ನಕ್ಕಿದ್ದೆಷ್ಟೋ , ಅತ್ತಿದ್ದೆಷ್ಟೋ, ನೊಂದದ್ದೆಷ್ಟೋ, ತಲೆದೂಗಿದ್ದೆಷ್ಟೋ, ಸುಖಿಸಿದ್ದೆಷ್ಟೋ... ಸುಮಾರು ದಿನಗಳು ಕೇಳಿ ಕೇಳಿ ಮುಕ್ತಾಯವಾದಾಗ, ಕಾಲಿಗೆ ಬಿದ್ದ ಸಾಧ್ವಿ ಹೇಳಿದಳು; " ನಾನೆಷ್ಟು ಋಣಿ ! ಅನಾಥಳಾದ ನನಗೆ ಆಶ್ರಯವಿತ್ತಿರಿ, ಮಕ್ಕಳಿಗೆ ಪೋಷಕರಾದಿರಿ, ಮಕ್ಕಳು ತಂದೆಯ ಬಗ್ಗೆ ಕೇಳುತ್ತಿದ್ದರೆ, ಹೆಂಡತಿಯನ್ನು ತೊರೆದ ಗಂಡನೆಂದು ಅವರು ಭಾವಿಸಿ ನನ್ನ ಪತಿಯ ಬಗ್ಗೆ ಅವರೆಲ್ಲಿ ಕೆಟ್ಟ ಅಭಿಪ್ರಾಯ ತಾಳುವರೋ ಎಂದು ಕುದಿಯುತ್ತಿದ್ದೆ. ಇದೀಗ ತಾವು ಬರೆದ ರಾಮ ಕಾವ್ಯವನ್ನು ಅವರು ಓದಿದರೆ , ರಾಮರ ದಿವ್ಯ ಚರಿತ್ರೆಯನ್ನು ಕೇಳಿ ಅವರ ತಲೆ ಬಾಗದೆ ಇರದು.