"ಅದೇನು ಕಂಠ; ಅದೇನು ರೂಪ; ಅದೆಂತಹ ಅಭಿನಯ! ಈ ಪುಟ್ಟರ ಬಾಯಲ್ಲಿ ದೊಡ್ಡ ಕಥೆ; ದೊಡ್ಡವರ ಕಥೆ; ನಮ್ಮ ರಾಜರ ಕಥೆ; ರಾಜಾರಾಮರ ಕಥೆ. ಅವರ ಜನನದ ಹಿನ್ನೆಲೆ, ಅದ್ಭುತ ಸೃಷ್ಟಿ, ವಿಶ್ವಮಿತ್ರ ವಿಶೇಷ, ತಾಟಕಾ ಸಂಹಾರ, ಗಂಗಾವತರಣ, ಉಮಾ ವಿವಾಹ, ಅಹಲ್ಯಾ ಪ್ರಸಂಗ, ಸೀತಾ ಕಲ್ಯಾಣ... ಒಂದೇ ಎರಡೇ ? ನಮಗೇ ಗೊತ್ತಿರದ ಅನೇಕ ವಿಷಯಗಳು; ರಹಸ್ಯ ಪ್ರಸಂಗಗಳು; ನಾವು ತಪ್ಪಾಗಿ ತಿಳಿದುಕೊಂಡದ್ದರ ನಿಜ ನಿರೂಪಣೆ; ಅನಂತರ ಅರಮನೆಯ ಒಳಗಿನ ಅಂತಃಕಲಹ, ಗುಪ್ತ ಮಾತ್ಸರ್ಯ, ಬೂದಿ ಮುಚ್ಚಿದ ಕೆಂಡದ ಸವತಿ ಸಮರ... ಓಹ್!... ರಾಮರಿಗೆ ಬಂದ ಕಷ್ಟ, ಅದನ್ನವರು ಎದುರಿಸಿದ ರೀತಿ, ಅವರ ಧೀರ ನಿಲುವು, ಸೀತಾ ನಿಷ್ಠೆ, ಅನುಜ ಲಕ್ಷ್ಮಣನ ಅನುಸರಣೆ.... ಅಬ್ಬಬ್ಬ! ಏನೆಲ್ಲ ನೆಡೆದಿವೆ! ಎಂತಹ ಧರ್ಮಸೂಕ್ಷ್ಮಗಳು ! ನಮಗೆ ಇವುಗಳ ಅರಿವೇ ಇಲ್ಲ. ಕೇಳಿರುವುದೆಲ್ಲ ಏನೇನೋ. ಏಷ್ಟೋ ಸುಳ್ಳುಗಳು, ಎಷ್ಟೆಷ್ಟೋ ಅಡ್ಡಹಾದಿ ಹಿಡಿದ ಕಥೆಗಳು... " ಸಾವಿರ ಉದ್ಗಾರಗಳು ಅಯೋಧ್ಯಾ ನಿವಾಸಿಗರಿಂದ.