ಈತನ ಮಗ ಕುಕ್ಷಿಯಾಗಲೀ, ಆತನ ಮಗ ವಿಕುಕ್ಷಿಯಾಗಲೀ ಅಷ್ಟು ಪ್ರಸಿದ್ಧರಾಗಲಿಲ್ಲ. ಆದರೆ ಇಕ್ಷ್ವಾಕುವಿನ ಮರಿ ಮಗನೇ ಅನರಣ್ಯ. ವಿರೋಧಿಗಳ ಎದೆ ನಡುಗಿ, ಅನರಣ್ಯ ಬರುತ್ತಿದ್ದಾನೆಂದರೆ ಉಳಿದ ರಾಜರು ಅರಣ್ಯಪಾಲಾಗುತ್ತಿದ್ದರಂತೆ. ವಾಸ್ತವವಾಗಿ ರಣವೆಂದರೆ ಯುದ್ಧಕ್ಷೇತ್ರ. ಗಲಾಟೆ, ಬೈಗಳು, ಅಂಗಭೇದನ, ಶಿರಛೇದನ, ರಕ್ತದೋಕುಳಿ, ಹೆಣಗಳ ರಾಶಿ, ನೋವಿನ ನಾದ, ಸತ್ತವರ ಹೆಂಡಿರ ರೋದನ, ಮನೆಯವರ ಗೋಳು, ಎಲ್ಲೆಂದರಲ್ಲಿ ಸತ್ತು ಬಿದ್ದ ಸೊಂಡಿಲು ಮುರಿದ ಮತ್ತ ಗಜಗಳು, ತಲೆಗತ್ತರಿಸಿಯೋ, ಕಾಲುಮುರಿದೋ ಕಿರುಚಿ ಅರಚುತ್ತಿರುವ ಕುದುರೆಗಳ ಕರುಳಿರಿವ ಆ ಆರ್ತ ಅರಚಾಟ, ಗೆದ್ದವರ ಜಯಕಾರ, ಅವರಿಂದ ನಡೆದ ಸುಲಿಗೆ... ಯಾರಿಗೆ ಪ್ರಿಯವಿದು ? ಇದನ್ನು ಕಂಡು ಕಂಡೂ ಯಾವ ರಾಜನಿಗೆ ಊರಿನಲ್ಲಿ ಆಸಕ್ತಿ ? ಅದಕ್ಕೇ ಆತ ವಾನಪ್ರಸ್ಥನಾಗುತ್ತಿದ್ದಂತೆ ಕಾಣುತ್ತದೆ. ಈ ರಣಕ್ಕೆ ವಿರುದ್ಧವಾದದ್ದು ಅರಣ್ಯ . ಅಲ್ಲಿ ಈ ಗೋಳು , ಗರ್ಜನೆ, ಕೇಕೆ, ಆರ್ಭಟ, ನಿಂದೆ, ಹಿಂಸೆ, ಯಾವುವೂ ಇಲ್ಲ. ರಣಕ್ಕೆ ವಿರುದ್ಧವಾದ ಪ್ರಶಾಂತ ಸೌಮ್ಯ ಪ್ರಕೃತಿ. ಆದರೆ ನಮ್ಮ ರಾಜನ ಹೆಸರೇ ಅನರಣ್ಯ. ಅರಣ್ಯಕ್ಕೆ ವಿರೋಧಿಯಂತೆ ಅವ !! ಎಂದರೆ ಸದಾ ರಣಕುತೂಹಲಿ. ಮಾತೆತ್ತಿದರೆ ರಾಜ್ಯ ವಿಸ್ತರಣೆ. ಯಾರೂ ಅವನ ಮುಂದೆ ನಿಲ್ಲಲಾರರು . ಆದರೆ ಎಂತಹ ಅಸಾಮಾನ್ಯನಿಗೂ; ಎಂತಹ ಧೀರನಿಗೂ; ಎಂತಹ ವೀರನಿಗೂ ಒಂದು ಇಳಿಮುಖ ಇರಲೇ ಬೇಕಲ್ಲ ? ಒಂದು ದಿನ ಧಾವಿಸಿ ಬಂದ ಸಚಿವನ ಮುಖದಲ್ಲಿ ರಕ್ತವೇ ಇಲ್ಲ; ಬಿಳಿಚಿ ಹೋಗಿದ್ದಾನೆ; ಬೆವರುತ್ತಿದ್ದಾನೆ; ಬೆದರುತ್ತಿದ್ದಾನೆ; ಬಿಕ್ಕಳಿಸುತ್ತಿದ್ದಾನೆ. ಬಾಯಿಂದ ಮಾತು ಸರಿ ಬರುತ್ತಿಲ್ಲ. ಇವನ ಈ ದುರವಸ್ಥೆಗೆ ಕಾರಣ ತಿಳಿಯಬೇಕಿದ್ದರೆ, ನಾವೀಗ ಮತ್ತೊಂದು ಕಾಲಕ್ಕೆ ಹೋಗಿ ಹಿಂದಿರುಗಬೇಕು. ಬನ್ನಿ ಬ್ರಹ್ಮಾನ ಸೃಷ್ಟಿಗೆ ಹೋಗೋಣ !! (ಮುಗಿದಿಲ್ಲ !! )