(ಹಾಗೆ ನೋಡಿದರೆ ವ್ಯಕ್ತಿಯ ಪ್ರಗತಿಗೆ, ಆತನ ಜಾತಿ, ವಂಶ, ಪರಿಸರ ಮಾಂದ್ಯ, ದಾರಿದ್ರ್ಯ.... ಇವಾವುವೂ ಕಾರಣವೆಂದು ನನಗನಿಸುತ್ತಿಲ್ಲ. ಇತಿಹಾಸವನ್ನು ನೋಡಿದರೆ ಯೋಗೇಶ್ವರ ಕೃಷ್ಣನಿಂದ ಯೋಗಿ ಮೋದಿಯ ವರೆವಿಗೆ, ಎಲ್ಲರೂ ಈ ಅಗ್ನಿಪರೀಕ್ಷೆಯಲ್ಲಿ ಹಾದು ಬಂದವರೇ. ಹುಟ್ಟಿನಿಂದಲೇ ಸಾಯಿಸುವ ಸಂಚುಗಾರ ಕಂಸನಿಂದ ಹಿಡಿದು ಶಿಶುಪಾಲನ ತನಕ, ಎಷ್ಟು ಜನರನ್ನು ಅಪೋಶನ ತೆಗೆದುಕೊಂಡು ಆತ ಯೋಗೇಶ್ವರನಾಗಲಿಲ್ಲವೇ? ಗೊಲ್ಲರ ಹಟ್ಟಿಯಲ್ಲಿ ಬೆಳೆದು ವಿಶ್ವಕ್ಕೇ ಗುರುವಾಗಲಿಲ್ಲವೇ? ದಾರಿದ್ರ್ಯದ ಪಾತಾಳದಲ್ಲಿದ್ದ ವಿಶ್ವೇಶ್ವರಯ್ಯನವರು, ದ . ರಾ . ಬೇಂದ್ರೆ, ಲಾಲ್ ಬಹದ್ದೂರ್ ಶಾಸ್ತ್ರಿ, ದೇವರಾಜ್ ಅರಸು, ಮುದ್ದಣ , ಇವರೆಲ್ಲ ಗಗನ ಚುಂಬಿಗಳಾಗಲಿಲ್ಲವೇ? ಸಾವಿರಗಳ ನಾರಾಯಣ ಮೂರ್ತಿ ಇಂದು ವಿಶ್ವದ ಧನಿಕರಲ್ಲಿ ಒಬ್ಬರಾಗಲಿಲ್ಲವೇ ? ಓಹ್ ! ದಾರಿದ್ರ್ಯದಲ್ಲೇ ಹುಟ್ಟಿ, ಮೂವತ್ತಕ್ಕೂ ಹೆಚ್ಚು ಖಾಯಿಲೆಗಳನ್ನು ಮೈ ತುಂಬಿಸಿಕೊಂಡು, ಜೇಬಿನಲ್ಲಿ ರೂಪಾಯಿಯೂ ಇಲ್ಲದೇ, ಉಡಲು ಸರಿಯಾದ ಉಡುಗೆಯೂ ಇಲ್ಲದೇ , ಸನ್ಯಾಸಿಯಾಗಿ ಪುಟಾಣಿ ಸಭೆಯೊಂದರಲ್ಲಿ ಮಾತನಾಡಲು ಕರೆದಾಗಲೆಲ್ಲ ಹಿಂದೆ ಸರಿದಿದ್ದ ವಿವೇಕಾನಂದರು, ಬಾಯಿ ಬಿಟ್ಟೊಡನೆ ವಾಕ್ ಪ್ರಕಾಶ ಪ್ರಪಂಚವನ್ನೇ ವ್ಯಾಪಿಸಿ, ಕೇವಲ 39 ವರ್ಷಗಳು ಮಾತ್ರ ಬದುಕಿದ್ದು, ಇಂದಿನ ನೂರಾರು ರಾಮಕೃಷ್ಣಾಶ್ರಮಗಳಿಗೆ ಜನ್ಮದಾತರಾಗಿ ಅದಕ್ಕೊಂದು ಧ್ಯೇಯ, ಸನ್ಯಾಸಿಗಳಿಗೊಂದು ನೀತಿ ಸಂಹಿತೆ, ವೇದಾಂತಕ್ಕೊಂದು ಭದ್ರ ವ್ಯಾಖ್ಯಾನ... ಇವುಗಳನ್ನೆಲ್ಲ ಕರುಣಿಸಿ, ಯಾವತ್ತೂ ಭಾರತದ ಸಾಷ್ಟಾಂಗ ನಮಸ್ಕಾರ ಸ್ವೀಕರಿಸುತ್ತಿಲ್ಲವೇ ? ವೃದ್ಧಾಪ್ಯದ ಸಡಿಲು ಸುಕ್ಕು ಚರ್ಮ ದುಕೂಲ ಧರಿಸಿ, ಹೃದಯಾಘಾತಗಳಿಗೆ ದೇಹವನ್ನೊಡ್ಡುತ್ತ, ಅಙ್ಞಾತ ಅಮೆರಿಕೆಯಲ್ಲಿ ಅರೆಕಾಸಿಲ್ಲದೇ ಇಳಿದು, ಬೈರಾಗಿಯಾಗಿ ನಿಂತ ಭಕ್ತಿ ವೇದಾಂತ ಸ್ವಾಮಿಗಳು, ಇಂದಿನ ಪ್ರಪಂಚ ವ್ಯಾಪಿ ನೂರು ನೂರು ಇಸ್ಕಾನ್ ಸಂಸ್ಥೆಗಳಿಗೆ ಜೀವದಾನ ಮಾಡಿಲ್ಲವೇ? ವಿರೋಧಿಗಳ ಬೊಬ್ಬೆಯನ್ನು ಲಕ್ಷಿಸದೇ, ನವ ನವ ಪಥಗಳನ್ನು ಸೃಷ್ಟಿ ಮಾಡಿಕೊಳ್ಳುತ, ಅಂತರ್ದುರ್ಬಲರನ್ನು ಸಹಿಸುತ್ತ, ನಗಣ್ಯವಾಗಿದ್ದ ಭಾರತವನ್ನು ವಿಶ್ವದ ಉತ್ತಮ ಸ್ಥಾನದಲ್ಲಿ ಕಾಣಿಸುತ್ತ, ಹೋದಲ್ಲೆಲ್ಲ ಮಾತಿನ ಮಂಟಪದ ಇತಿಹಾಸ ನಿರ್ಮಿಸುತ್ತ, ಹಿಂದೂ ಯೋಗವನ್ನು; ನಮ್ಮ ಯೋಗವನ್ನು; ಭಾರತ ಸಂತಾನ ಯೋಗವನ್ನು, ವಿಶ್ವದೆಲ್ಲೆಡೆ ಅನುಷ್ಠಾನಕ್ಕೆ ತಂದ ಆಧುನಿಕ ರಾಮಕೃಷ್ಣ ಪರಮಹಂಸರಾದ ಮೋದಿಯವರು ಭಾರತದ ಙ್ಞಾನ, ಗಾಂಭೀರ್ಯ, ವ್ರತ, ಭಾಷೆ, ಚಿಂತನೆಗಳ ಮೂಲಕ ಇಂದು ಪ್ರಪಂಚದ ಹತ್ತು ಗಣ್ಯರಲ್ಲಿ ಒಬ್ಬರಾಗಿ ಮೆರೆಯುತ್ತಿಲ್ಲವೇ? ಪ್ರಕಾಶಿಸುತ್ತಿಲ್ಲವೇ? ಪ್ರಜ್ವಲಿಸುತ್ತಿಲ್ಲವೇ ?!