ರಾಮರಿಗನ್ನಿಸಿತು ಇನ್ನು ಸುಧಾರಿಸಿತೆಂದು. ಅಲ್ಲ, ಅದು ಕ್ಷಣದ ನಿರಾಳ. ದೂರದಲ್ಲಿನ ಕಪ್ಪು ರೂಪ ಹತ್ತಿರವಾಗುತ್ತಿದ್ದಂತೆಯೇ ಭೀಕರಾಕಾರದ ರಾಕ್ಷಸನಾಗಿ ಆಕಾರಗೊಳ್ಳುತ್ತಿದೆ. ದೂರದಿಂದಲೇ ಅವನ ಬಾಹುಬಲದ ಶಕ್ತಿ ಕಾಣುವಂತೆ ಅವನ ಮಾಂಸಖಂಡಗಳು ಉಬ್ಬಿವೆ. ಹೊರಗಿದ್ದ ಋಷಿಯೊಬ್ಬರು ಹೇಳಿದರು ಹಿಂದಿನ ಅನುಭವದಿಂದ, " ಓಹ್ ! ಅವನೇ ಸುಬಾಹು! ಅವನು ಬಂದನೆಂದರೆ ಮುಗಿಯಿತು. ಇನ್ನೆಷ್ಟು ಮುನಿಗಳು ಸಾಯುತ್ತಾರೋ. ಅವನ ಕೈಗಳು ಕಬ್ಬಿಣದ ತೊಲೆ ಇದ್ದಹಾಗಿದೆ. ಬಂದು ಅವನೇನಾದರೂ ಒಂದು ಗುದ್ದು ಗುದ್ದಿದರೆ, ನೀವು ಕಟ್ಟಿದ ಕೋಟೆ ಬಿದ್ದೇ ಹೋಗತ್ತೆ. " ಅವರು ಹೇಳಿ ಮುಗಿಸುವ ಮುನ್ನವೇ ಸುಬಾಹು ಎಸೆದಿದ್ದ ಗುಡ್ಡ ಒಂದು ರಾಮ ನಿರ್ಮಿತ ಕಲ್ಲಿನ ಕೋಟೆಗೆ ಬಡಿದು ಅದನ್ನು ಕೆಡವಿತ್ತು. ಒಳಗಿದ್ದ ಮುನಿಗಳೆಲ್ಲ ಇದ್ದಕ್ಕಿದ್ದಂತೇ ಗೋಡೆ ಬಿದ್ದದ್ದು, ಬೆಳಕು ನುಗ್ಗಿದ್ದು, ಹೊರಗಿನ ಸದ್ದು ಕೇಳಿದ್ದು, ಎಲ್ಲ ಕೇಳಿ ಭಯಬಿದ್ದರು; ಅಲ್ಲಿಗೆ ಈ ಬಾರಿಯೂ ಯಙ್ಞಭಂಗವೇ ಎಂದು. ಇತ್ತ ರಾಮರು ಸುಬಾಹುವನ್ನು ಕಂಡರು. ಅವನು ಮತ್ತೊಂದು ಗುಡ್ಡವನ್ನು ಎತ್ತುತ್ತಿದ್ದಾನೆ, ಅದನ್ನು ಎಸೆದನೆಂದರೆ ಅದು ನೇರ ಈಗ ಯಙ್ಞಕುಂಡಕ್ಕೆ ಚಚ್ಚಿ ಎಷ್ಟು ಋಷಿಗಳು ಸಾಯುವರೋ. ಅಕಸ್ಮಾತ್ ವಿಶ್ವಮಿತ್ರರಿಗೇ ತಗುಲಿದರೂ ತಗುಲುತ್ತದೇನೋ. ಅವರೀಗ ಯಙ್ಞ ಮುಗಿಯುವುದೋ, ಮುರಿಯುವದೋ ಅಲ್ಲಿವರೆಗೆ ಮಾತಾಡುವಂತೇ ಇಲ್ಲ. ಇನ್ನೂ ನಿಧಾನ ಮಾಡುವಂತಿಲ್ಲ. ಶ್ರೀರಾಮರು ತಕ್ಷಣವೇ ಬಿಲ್ಲಲ್ಲಿ ಬಾಣ ಏರಿಸುತ್ತ ಹೇಳಿದರು; " ಲಕ್ಷ್ಮಣ, ನಿರ್ದಯರಿವರು. ಕ್ಷಮೆಗೆ ಇವರು ಅರ್ಹರಲ್ಲ. ಕೆಟ್ಟ ಕಾರ್ಯವನ್ನು ಮಾಡುವವರು. ಪಾಪಿಗಳು. ಯಙ್ಞ ಹಾಳು ಮಾಡುವವರು, ನೆತ್ತರು ಕುಡಿಯುವವರು. ಇವರನ್ನೆಲ್ಲ ವಧಿಸುತ್ತೇನೆ. "