ಓಹ್! ಅಂಶುಮಂತನ ಮಗ ದಿಲೀಪನೂ ಈ ಸಮಸ್ಯೆಯನ್ನು ಬಗೆಹರಿಸದಾದ. ಇದೀಗವನ ಮಗ ಭಗೀರಥ ಸಿಂಹಾಸನ ಏರಿದ್ದಾನೆ. ಜನರ ಕಷ್ಟ ಪರಿಹಾರವಾಗುವ ತನಕ ತಾನು ಯಾವ ಸುಖವನ್ನೂ ಸ್ವೀಕರಿಸೆನೆಂದು ಮದುವೆಯೂ ಬೇಡವೆಂದ. ಬುದ್ಧಿವಂತರ, ತಂತ್ರಙ್ಞರ ಸಭೆಗಳನ್ನೇರ್ಪಡಿಸಿದ, ಯಾರೂ ಏನನ್ನೂ ಹೇಳಲಾಗುತ್ತಿಲ್ಲ. ವಸ್ತುವಿದ್ದರೆ ತಾನೇ ಅದನ್ನು ಉಪಯೋಗಿಸುವುದು ಹೇಗೆ ಎಂದು ಯೋಚಿಸುವುದು? ಆದರೆ ಈಗ ವಸ್ತುವೇ ಇರದಾಗ ಹೇಗೆ? ಎಷ್ಟೋ ಕಾಲವಾದಮೇಲೆ ಒಬ್ಬ ಋಷಿ ಆ ರಾಜ್ಯದ ಮೂಲಕ ಹಾದು ಹೋಗುತ್ತಿದ್ದಾನೆ, ಮರಳು ಭೂಮಿಯನ್ನು ಕಂಡ, ಜನರ ದೈನ್ಯವನ್ನು ಕಂಡ, ರಾಜನ ಒದ್ದಾಟವನ್ನು ತಿಳಿದ, ನೇರವಾಗಿ ಅರಮನೆಗೆ ಹೋದ. ಪಾದಪ್ರಕ್ಷಾಳನವನ್ನು ಕೇವಲ ಉದ್ಧರಣೆಯ ಜಲದಲ್ಲಿ ಮುಗಿಸಿದ ರಾಜನ ಬಡತನವನ್ನು ಗಮನಿಸಿ ಋಷಿಯೆಂದ, "ರಾಜನ್, ನಿಮ್ಮ ರಾಜ್ಯದ ದುಸ್ಥಿತಿ ನನಗೆ ಅರಿವಿದೆ. ನಿಮ್ಮ ಜನರ ಗೋಳಾಟ ಹೇಳತೀರದು. ಅಶುದ್ಧ ರಾಜ್ಯವೆಂದರೆ ಇದೇ ಎಂದು ಕಾಣುತ್ತದೆ. ಯಾವುದೋ ಸಮಸ್ಯೆ ಪರಿಹಾರದಿಂದ ಈಗ ತೊಂದರೆ ಅನುಭವಿಸುತ್ತಿರುವರು ನೀವು. ಕೊನೆಗೆ ಅಸ್ಥಿ ವಿಸರ್ಜನೆಗೂ ನೂರು ನೂರು ಮೈಲಿ ಹೋಗಲಾರದೆ ಹಲ ತಲೆಮಾರುಗಳ ಪೂರ್ವಜರ ಸುಟ್ಟ ಮೂಳೆಗಳನ್ನು ಮನೆಯ ಗೂಡೊಂದರಲ್ಲಿ ಶೇಖರಿಸುತ್ತಿದ್ದಾರೆ. ಮುಂದೆ ಯಾರಾದರೂ ದೂರದ ನದಿಗಳಿಗೆ ಹೋಗಿ ಬಿಡುತ್ತಾರೇನೋ ಎಂದು. ಪ್ರತಿ ಮನೆಯ ಹೊರಗೂ ಅಸ್ಥಿ ಸಂಪುಟವೆಂಬ ದೊಡ್ಡ ಕಡಾಯಿಯನ್ನಿಟ್ಟಿದ್ದಾರೆ. ನೀನು, ನಿನ್ನ ತಂದೆ, ಅವರಪ್ಪ... ಎಲ್ಲರೂ ಏನೂ ಮಾಡಲಾಗದೆ ಕುಳಿತಿದ್ದೀರಿ. ನಿಮ್ಮ ಪ್ರಯತ್ನಗಳೆಲ್ಲ ಮೀರಿದೆ. ಪುರುಷ ಪ್ರಯತ್ನದಿಂದ ಇದನ್ನು ಸಾಧಿಸಲು ಸಾಧ್ಯವೇ ಇಲ್ಲ. ಇದಕ್ಕಿರುವ ಒಂದೇ ಸಲಹೆಯೆಂದರೆ ಸ್ವರ್ಗದಲ್ಲಿರುವ ಗಂಗೆಯನ್ನು ಭೂಮಿಗಿಳಿಸುವುದು. ಆಕೆ ನದಿಯಾಗಿ ನಿಮ್ಮಲ್ಲಿಗೆ ಹರಿದು ಬರುವುದು ಮುಖ್ಯ. ಅದು ನಿತ್ಯ ನದಿಯಾಗಿ, ಜೀವ ನದಿಯಾಗಿ ಅಯೋಧ್ಯೆಯನ್ನು ಹಸಿರುಮಾಡಬಹುದು.