ಮನೆ ಬಿಟ್ಟು ಇಂದಿಗೆ ನಾಲ್ಕನೆಯ ದಿನ. ಇಂದೇನೋ ಅನಿರ್ವಚನೀಯ ಆನಂದ. ಅಯೋಧ್ಯೆಗೆ ವಾಪಸಾಗಿಯೇ ಇಲ್ಲ, ಆದರೂ ಏನೋ ಸ್ವಂತ ಮನೆಗೇ ಬಂದಂತೆ. ಏನೋ ಏನೋ ಮುದ, ಏನೋ ಸಂತಸ, ಏನೋ ಹಗುರ, ಏನೋ ಲವಲವಿಕೆ, ಏನೋ, ಕಾರಣವೇ ಅರಿಯದ ಉತ್ಸಾಹ. ಆ ಕುಟೀರಗಳ ಹಳ್ಳಿ; ಹಲವಾರು ಎಲೆಮನೆಗಳು. ಯಾರೋ ಕೂಗಿದರು, "ಗುರುಗಳು ಬಂದರು". ಸುಮಾರು ಒಂದು ನೂರು ಮಂದಿ ಇದ್ದಾತು. ಹರ್ಷದಿಂದ ಓಡೋಡಿ ಬಂದರು, ಬ್ರಹ್ಮರ್ಷಿಗಳ ಕಾಲಿಗೆ ಬಿದ್ದರು, ರಾಮ-ಲಕ್ಷ್ಮಣರನ್ನು ನೋಡಿ ಅವಾಕ್ಕಾದರು.