ತಾನು ಬಲಿಯಿಂದ ಸೋತದ್ದು, ಇದೀಗ ತನ್ನ ಸಿಂಹಾಸನದ ಮೇಲೆ ಮತ್ತಾರೋ ಕೂತಿರುವುದು, ತಾನೀಗ ತಲೆ ಮರೆಸಿಕೊಂಡಿರುವುದು, ತನ್ನ ವೈರಿ ಮೆರೆಯುತ್ತಿರುವುದು.... ಎಲ್ಲ ವಿವರ ವಿವರವಾಗಿ ಕರುಳು ಕಿತ್ತು ಬರುವಂತೆ ವರ್ಣಿಸಿದ ಇಂದ್ರ. " ಇಂದ್ರ, ನಿನಗೆ ಎಷ್ಟು ಬಾರಿ ಹೇಳಿದ್ದೇನೆ, ಈ ಪದವಿಗೆ ಬರುವ ಮುನ್ನ ಎಷ್ಟು ಯಙ್ಞ ಮಾಡಿದ್ದೆ? ಎಷ್ಟು ತಪಸ್ಸು ಮಾಡಿದ್ದೆ? ಈಗ ಸಿಂಹಾಸನದಲ್ಲಿ ಕುಳಿತ ಮೇಲೆ ಕೇವಲ ಸುರಗಣಿಕೆಯರ ನರ್ತನ, ಅಮೃತ ಪಾನ, ಯಾರಾದರೂ ತಪಸ್ಸಿಗೆ ಕುಳಿತರೆ ಅವರ ತಪೋ ಭಂಗ.... ಇತ್ತೀಚಿಗೆ ಎಂದಾದರೂ ತಪಸ್ಸು ಮಾಡಿರುವೆಯಾ? ಭೋಗ ಬಿಟ್ಟು ಯೋಗದ ಕಡೆಗೆ ಗಮನ ಕೊಟ್ಟಿರುವೆಯಾ?... ಅಗೋ ! ಕೇಳಿದ್ದೇ ತಡ, ಮುಖ ಊದಿಸಿಕೊಂಡೆ. " ತಂದೆ ಬಂದರೆಂದು ವಿಷ್ಣು ಎದ್ದ. " ವಿಷ್ಣು, ನಾನು ತಪಸ್ಸಿಗೆ ಕೂಡುತ್ತಿರುವೆ. ನಿನ್ನ ತಾಯಿ ಮಗನ ಊರು ಹೋಗಿದ್ದಕ್ಕೆ ನೊಂದಿದ್ದಾಳೆ. ನೀನು ಶಕ್ತ ಇದ್ದೀಯೆ, ಸದಾ ತಪಸ್ವಿಯಾಗಿರುವೆ, ಹಾಲಿನಂತಹ ನೀರಿನಲ್ಲಿ ಸದಾ ಯೋಗ ನಿದ್ರೆಯಲ್ಲಿರುವುದರಿಂದಲೇ ನೀನು ನಾರಾಯಣನಾಗಿರುವೆ. ನಿನ್ನೊಂದಂಶವನ್ನು ಕಳಿಸು. ಮತ್ತೆ ಹುಟ್ಟಿ ಬಾ. ಬಂದು ನಿನ್ನಣ್ಣನ ರಾಜ್ಯ ಕೊಡಿಸು. ನಾನು ಅವನಿಗೆ ಬುದ್ಧಿ ಹೇಳುತ್ತೇನೆ. " ಅಪ್ಪನಿಗೆ ಎದುರಾಡದ ವಿಷ್ಣು ಅಪ್ಪ ಅತ್ತ ಹೋದ ಮೇಲೆ ಮತ್ತೆ ಝಂಕಿಸಿದ. " ಬಲಿಯಲ್ಲಿ ಕ್ಷಾತ್ರ ಇದೆ. ನಿನ್ನಲ್ಲೂ ಇದೆ. ಅವನು ಯುದ್ಧಕ್ಕಾಗಿ ಯಾಗ ಮಾಡಿದ, ಗೆದ್ದ. ನೀನು ಸುರೆ ಕುಡಿಯುತ್ತ ಸೋತೆ. ಬಲಿ ಈಗಲೂ ಯಾಙ್ಞಿಕನೇ. ಅವನ ರಾಜ್ಯಭಾರದಲ್ಲಿ ಪ್ರಜೆಗಳೆಲ್ಲ ಸಂತಸದಿಂದಿದ್ದಾರೆ. ಅವನಲ್ಲಿ ಯಾವುದೇ ಅನ್ಯಾಯವೂ ನನಗೆ ಕಂಡಿಲ್ಲ. ಹೇಗೆಂದು ಅವನನ್ನು ಯುದ್ಧದಲ್ಲಿ ಎದುರಿಸಲಿ? ಈಗ ನೋಡಿದರೆ ಅಪ್ಪ ಬೇರೆ ನಿನಗೆ ಮತ್ತೆ ಸ್ವರ್ಗ ಕೊಡಿಸಲು ಹೇಳಿದ್ದಾರೆ.... " ಗೊಣಗಿಕೊಂಡೇ ಎದ್ದ ವಿಷ್ಣು.