" ನನ್ನ ತಮ್ಮ, ನನ್ನನ್ನೇನಾದರೂ ಕೇಳಿದರೆ, ಮೂರನೆಯ ಪಾದಕ್ಕೆ ಬಲಿಯ ಪ್ರಾಣವನ್ನೇ ಕೇಳು ಎಂದು ಸಲಹೆ ಕೊಡಬೇಕು. ಈಗ ನಾನು ಅದನ್ನು ಬಾಯಿ ಬಿಟ್ಟು ಹೇಳಿದರೆ, ವಿಷ್ಣು ಏನೆನ್ನುವನೋ. ಮೊದಲೇ ಬೈದಿದ್ದ. ಈಗ ದುರಾಶೆಯೆಂದರೆ? ’ ಸಾಧ್ಯವಾದರೆ ನೀನು ಯುದ್ಧ ಮಾಡು ’ಅಂದುಬಿಟ್ಟರೆ? ’ ಅಕಸ್ಮಾತ್ ಇನ್ನೊಂದು ಬಾರಿ ಸೋತರೆ, ಸ್ವರ್ಗವನ್ನು ಅವನಿಗೆ ಮತ್ತೆ ಕೊಟ್ಟು ಸನ್ಯಾಸಿ ಆಗು ’ಅಂತ ಹೇಳಿಬಿಟ್ಟರೆ?......... ನಮಗೇಕೆ? ನಮಗೆ ಕಳೆದದ್ದು ಸಿಕ್ಕಿದೆ. ನಮ್ಮ ಪಾಡಿಗೆ ನಾವು ಇರೋಣ. " ಇಂದ್ರನ ಸತತ ಯೋಚನೆ ಒಂದು ನೆಲೆಗೆ ಬಂದಿತ್ತು. ಆದರೆ ಇತ್ತ ನಾರಾಯಣನ ಯೋಚನೆ ಮುಂದುವರಿದಿತ್ತು. ’ ಬಲಿಯನ್ನು ಕೇಳಿದರೆ ಏನು ಕೊಡಬಹುದು? ಅವನಲ್ಲಿ ಈಗ ಏನೂ ಉಳಿದಿಲ್ಲವಲ್ಲ? ಕೇಳಿ, ಪಾಪ ಕೊಡಲಾಗದಿದ್ದರೆ? ಆ ಪರಿಸ್ಥಿತಿ ಬಂದರೆ, ನನಗೇ ನೋವಾಗುತ್ತದೆ. ಆದರೂ ತಾನು ಕೇಳಬೇಕು. ಬಲಿ ಕೊಡಬೇಕು. ಅವನು ಜಗತ್ಪ್ರಸಿದ್ಧನಾಗಬೇಕು. "