ವಿಶ್ರವಸ್ನ ಒಂದು ಮಾತು ಸಹಾಯವಾಗಬಹುದು ಈ ಗಂಟು ಬಿಚ್ಚಲು. ಆಕಾರ, ಆಲೋಚನೆ, ಗುಣಗಳಲ್ಲಿ ದಶಕಂಠ, ಕುಂಭಕರ್ಣ, ಶೂರ್ಪಣಖೆ, ಈ ಮೂವರೂ ಒಂದು ಗುಂಪು. ವಿಭೀಷಣನೇ ಪ್ರತ್ಯೇಕ. ಏಕೆ ಹೀಗೆ? ಆ ಮೂವರೂ ಹಾಗಾಗಲು ಕಾರಣ ಕೈಕಸಿಯ ದುರ್ಮುಹೂರ್ತ ಸಂಯೋಗ. ಒಡನೇ, ಫಲಿತವಾಗಿ ಅವರು ಹಾಗೇ ಹುಟ್ಟುವರೆಂದೂ, ಅವರು ಕ್ರೂರ ಕರ್ಮಿಗಳೆಂದೂ ಅಂದೇ ಅವರಪ್ಪ ಭವಿಷ್ಯ ನುಡಿದಿದ್ದ. ಸುಪುತ್ರನೊಬ್ಬ ಬೇಕೆಂದು ಕೈಕಸಿ ಬೇಡಿದಾಗ ಕರುಣಿಸಿದ್ದು ವಿಭೀಷಣನನ್ನು. ಎಚ್ಚರಿಕೆಯಿಂದ, ಹುಟ್ಟುವ ಮುನ್ನವೇ ಅವನು ರಾಕ್ಷಸ ವಂಶೀಯನಲ್ಲವೆಂಬುದನ್ನು ಪರೋಕ್ಷವಾಗಿಯೂ, ಅವನು ಮಾತ್ರ ತನ್ನ ವಂಶಜನೆಂದು ನೇರವಾಗಿಯೂ ಘೋಷಿಸಿದ್ದ. " ಮಮ ವಂಶಾನು ರೂಪೋ " . ಇದರಿಂದ ಹೊರಡುವ ವ್ಯಾಖ್ಯೆಗಳು ಎರಡು. ಒಂದು , ವಿಭೀಷಣನ ವಂಶವೇ ಬೇರೆಯಾದ್ದರಿಂದ ಅವನು ದಶಕಂಠನ ತಮ್ಮನೇ ಅಲ್ಲ. ಕ್ಷೇತ್ರ ಪ್ರಾಧಾನ್ಯರು ದಶಗ್ರೀವ, ಕುಂಭಕರ್ಣ ಶೂರ್ಪಣಖೆಯಾದರೆ, ಕ್ಷೇತ್ರಙ್ಞ ಫಲಿತ ವಿಭೀಷಣನೊಬ್ಬನೇ. ಅದು ಕಾರಣ ವಿಷ್ಣು ಪ್ರತಿಙ್ಞೆಯಲ್ಲಿ ವಿಭೀಷಣನ ಹೆಸರು ಸೇರಿರಲಿಲ್ಲವೇನೋ ಎಂಬ ಸಂದೇಹ. ಎರಡು, ವಿಶ್ರವಸ್ನ ಮಾತಿನ ಆಶಯವನ್ನು ಹಿಡಿದರೆ ಲಂಕಾಧಿಪತಿ, ಅಸುರಾಧಿಪತಿಯೇ ವಿನಃ, ಅವನು ಬ್ರಾಹ್ಮಣ ರಾಜನಲ್ಲವೆಂದೇ ಅನ್ನಿಸುತ್ತದೆ.