ಅದೊಂದು ದಿನ ಬಾಲಾಂಜನೇಯನಿಗೆ ಹಶಿವೋ ಹಶಿವು. ತಾಯಿ ಯಾವುದೋ ಗುಡಿಗೆ ಹೋಗಿದ್ದಾಳೆ. ಮನೆಯಲ್ಲಿ ತಿನ್ನುವುದಕ್ಕೆ ಏನೂ ಕಾಣಲಿಲ್ಲ. ಹೊರಬಂದ. ಪಕ್ಕದ ಆಶ್ರಮದಲ್ಲಿ ಹೋಮ ಒಂದು ನಡೆಯುತ್ತಿದೆ, ಅಲ್ಲಿ ಹೊಕ್ಕ. ಹಣ್ಣುಗಳ ರಾಶಿಯೇ ಇದೆ, ಒಂದನ್ನೆತ್ತಿ ಸಿಪ್ಪೆ ಸುಲಿದ. ಬಾಯಿಗೆ ಹಾಕಿಕೊಳ್ಳಬೇಕು. " ಏಯ್ ! ಈ ಹಣ್ಣನ್ನು ನೈವೇದ್ಯ ಮಾಡದೇ ತಿನ್ನೋ ಹಾಗೆ ಇಲ್ಲ. ಇಡು ಅಲ್ಲಿ !". ಪಾಪ, ಕೊಂಚ ಬೆದರಿದ ವಾಯು ಪುತ್ರ ಆ ದೊಡ್ಡ ಹೊಟ್ಟೆ, ಕೆಂಪು ಕಂಗಳ ಋಷಿಯನ್ನು ಕೇಳಿದ, " ನನಗೆ ಹಶಿವಾಗ್ತಾಯಿದೆ, ಏನಾದ್ರೂ ತಿನ್ನೋದಿಕ್ಕೆ ಕೊಡಿ. " .ಋಷಿ ನಗುತ್ತ ಹೇಳಿದ; "ನಿನಗೇನಯ್ಯ ನಾವು ಕೊಡೋಕಾಗತ್ತೆ, ನೀನು ರಾಜನ ಮಗ. ಅಲ್ಲದೇ ವಾಯುವಿನ ವರಪುತ್ರನಂತೆ! ನಾವು ಸಾಧಾರಣ ಮಂದಿ. ಒಂದು ಉಪಾಯ ಹೇಳಲಾ?" ಕುತೂಹಲದಿಂದ ಕೇಳಿದ ಕೇಸರಿ ಕುಮಾರ. " ಹೀಗೇ ಮೇಲೆ ಹತ್ತು. ಅಲ್ಲಿ ನಿನಗೆ ಹಣ್ಣೂ ಸಿಗುತ್ತೆ. ನೀರೂ ಸಿಗುತ್ತೆ .ಅಷ್ಟು ತಿಂದು ವಾಪಸಾಗು. ಇನ್ನೂ ಮೇಲೆ ಹತ್ತ ಬೇಡ. ಹತ್ತುವುದಕ್ಕೂ ಆಗೊಲ್ಲ. ತುಂಬಾ ಕಡಿದು. ದಾರೀ ತುಂಬಾ ಹಾವುಗಳೂ, ಕಾಡು ಪ್ರಾಣಿಗಳೂ, ಕಲ್ಲು-ಮುಳ್ಳುಗಳೂ. ಕಷ್ಟ. ಯಾರೂ ಹತ್ತೊಲ್ಲ. ಹತ್ತಿದರೂ ಪರ್ವತದ ಮೇಲಕ್ಕೆ ಹೋಗೊಲ್ಲ; ಹೋದರೂ ಒದೆ ತಿಂದು ಬರಬೇಕು. " ಮೊದಲೇ ಹುಡುಗ. ಸಾಹಸ ಪ್ರಿಯ. " ಯಾಕೆ?" ಗಂಭೀರನಾದ ಋಷಿ " ಪರ್ವತದ ತುದಿಯಲ್ಲಿ ಸೂರ್ಯದೇವರ ಗುಡಿಯಿದೆ. ಅದರ ಆವರಣದಲ್ಲಿ ಎಂದಿಗೂ ಒಣಗದೇ ಇರೋ ಹಣ್ಣುಗಳಿಂದ ತುಂಬಿರೋ ಒಂದು ತೋಟ ಇದೆ. ಅದು ದೇವೇಂದ್ರನ ತೋಟ. ಅಲ್ಲಿಗೆ ಯಾರೂ ಹೋಗೋಕೂ ಆಗೊಲ್ಲ; ಹಣ್ಣು ಕೀಳೋದೂ ಇಲ್ಲ. ಅದನ್ನು ರಕ್ಷಿಸೋದಿಕ್ಕೆ ದೇವ ರಕ್ಷಕರನ್ನ ಅಲ್ಲಿ ಇಂದ್ರ ಇಟ್ಟಿದಾನಂತೆ. "