ತಮ್ಮ ರಾಜ್ಯ ತಾನು ಓಡಾಡಿದಾಗ ದೊಡ್ಡದಾಗಿ ಕಂಡಿದ್ದು, ಈಗ ಪುಟಾಣಿ ಮನೆಯಂತೆ ಕಾಣುತ್ತಿದೆ ಹತ್ತಿದ. ಹತ್ತಿದ. ಮತ್ತೂ ಹತ್ತಿದ. ಅಷ್ಟೇನೂ ಕಷ್ಟವೆನಿಸಲಿಲ್ಲ. ಇನ್ನೇನು ತುದಿ ಕಾಣುತ್ತಿದ್ದಂತೆಯೇ ಸಾಲು ಸಾಲು ಹೂ ಗಿಡಗಳು, ಏನೋ ದಿವ್ಯ ಪರಿಮಳ, ಮಂದಾನಿಲ, ಮೃದುಸ್ಪರ್ಶ. ಮುಂದೆ ಏನಿದು! ಎಂಟಾಳೆತ್ತರದ ಚಿನ್ನದ ಕೋಟೆ. ಓಹ್! ಅದರಲ್ಲೊಂದು ಬಾಗಿಲು. ಅದರ ಅಕ್ಕಪಕ್ಕದಲ್ಲಿ ಸಿಪಾಯಿಗಳು. ಅವರೂ ಬೆಳಗುತ್ತಿದ್ದಾರೆ. ಆದರೆ ತಮ್ಮ ಅರಮನೆಯಂತಹವರಲ್ಲ. ಒಬ್ಬ ಈಟಿಯನ್ನಡ್ಡ ಹಿಡಿದು, " ಯಾರು ನೀನು? ಇದು ದೇವ ಭೂಮಿ, ಇದರೊಳಗೆ ಮನುಷ್ಯರು ಬರುವಂತಿಲ್ಲ. " ವಾಯುಪುತ್ರ ನೇರವಾಗಿ ಹೇಳಿದ, " ತೋಟದಲ್ಲಿ ಹಣ್ಣುಗಳಿದೆಯಂತಪ್ಪ, ಅದಕ್ಕಾಗಿ ಹೋಗ್ತಾ ಇದೀನಿ. " .ಮಂದಹಾಸ ಮರೆಯಾಗಿ ಗಡುಸು ಧ್ವನಿಯಲ್ಲಿ ಹೇಳಿದ ಆ ಭಟ; " ಬಾಯಿ ಮುಚ್ಚು! ವಾಪಸ್ ಹೋಗು. ಇಲ್ದೇ ಇದ್ದರೇ.... " ಕೈ ಎತ್ತಿದ. ಆ ಸೇವಕನ ಕೈ ಹಿಡಿದು ತಿರುಗಿಸುತ್ತ, " ಇಲ್ಲದಿದ್ದರೆ? " ಎಂದು ಹೇಳಿ ನೂಕಿದ ಮಾರುತಿ. ಅವ ಮಾರು ದೂರ ಹೋಗಿ ಬಿದ್ದ.