ಮನೆ ಮನೆಗೂ ಸಿಹಿ, ವಸ್ತ್ರ, ಹಣ್ಣು, ಧಾನ್ಯ... ಇನ್ನೂ ಏನೇನೋ ಉಡುಗೊರೆಗಳು. " ರಾಜರಿಗೆ ಮಗನಂತೆ! ತುಂಬ ಸುಂದರವಂತೆ! ಹೆಸರು ರಾಮರಂತೆ! ". ಹುಚ್ಚೆದ್ದ ಜನ ಅರಮನೆಯ ಮುಂದೆ ಜಮಾಯಿಸಿದರು. ಪ್ರಜೆಗಳಿಗೆ ರಾಜನೆಂದರೆ ಪ್ರಾಣ. ಅವರ ಅನುಭವದಲ್ಲಿ ಎಂದೂ ರಾಜರಿಂದ ಒತ್ತಾಯದ ತೆರಿಗೆ ಇಲ್ಲ, ಕ್ಷಾಮದ ಹೆಸರೇ ಕೇಳಿಲ್ಲ. ಬಲಿಷ್ಠರಿಂದ ಎಂದೂ ದುರ್ಬಲರು ಹಿಂಸೆಗೆ ಗುರಿಯಾಗುತ್ತಿರಲಿಲ್ಲ. ಎಂದೂ ನ್ಯಾಯದಾನ ನಿಧಾನವಾಗುತ್ತಿರಲಿಲ್ಲ. ಅಪರಾಧಿಗೆ ಮಾತ್ರ ಉಗ್ರ ದಂಡನೆ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾರಾಗೃಹಗಳೆಲ್ಲ ಖಾಲಿ. ತಪ್ಪು ಮಾಡುವವರೇ ವಿರಳ. ತಮ್ಮನ್ನು ಮಕ್ಕಳಂತೆ ಕಾಣುತ್ತಿದ್ದ ಮಹಾರಾಜನಿಗೆ ಈಗ ಪುತ್ರೋತ್ಸವ. ಜನರ ಜೈಕಾರ ಕೇಳಿ ಬಿಸಿಲುಮಚ್ಚಿಗೆ ಬಂದ ರಾಜ. ಅವನನ್ನು ಕಂಡು ಉಬ್ಬಿದರು ಪ್ರಜೆಗಳು. ಕುಣಿಯುವವರೆಷ್ಟೋ, ಕೂಗುವವರೆಷ್ಟೋ, ಹಾಡು ಹೇಳುವವರೆಷ್ಟೋ. ಸುಮಂತ್ರ ಬಂದು ರಾಜನ ಕಿವಿಯಲ್ಲಿ ಉಸುರಿದ; " ಪ್ರಜೆಗಳಿಗೆ ತಾವು ರಾಜ ಕುಮಾರನನ್ನು ತೋರಿಸಿದರೆ... " . ಗ್ರಹಿಸಿದ ದಶರಥ ಮಗನನ್ನು ಕರೆತರಲು ಆದೇಶಿಸಿದ. ಬೆಚ್ಚನೆಯ ವಸ್ತ್ರದಲ್ಲಿ ಸುತ್ತಿ ಕೊಟ್ಟರು ಶಿಶು ರಾಮರನ್ನು. ಚೈತನ್ಯದ ಬುಗ್ಗೆಯನ್ನೆತ್ತಿ ರಾಜ ಜನರ ಮುಂದೆ ಹಿಡಿದ; ನುಡಿದ. " ನೋಡಿರಿ ನಿಮ್ಮ ಮುಂದಿನ ಮಹಾರಾಜರನ್ನು! " ಜನರು ಹುಚ್ಚೆದ್ದರು, ಧ್ವಜ ಹಾರಿಸಿದರು, ಎಗರೆಗರಿ ಹಾರಿದರು, ರಘು ವಂಶವನ್ನು ಹಾಡತೊಡಗಿದರು, ಹಿಂದಿನ ರಾಜರುಗಳ ವಿಶೇಷವನ್ನು ಪರಸ್ಪರ ಹಂಚಿಕೊಂಡರು. " ಎಲ್ಲರಿಗೂ ಇಂದು ರಾಜಭವನದಲ್ಲಿ ಸಂತರ್ಪಣೆ! ಎಲ್ಲರೂ ಊಟ ಮಾಡಿಯೇ ಹೋಗಿ! " ಸುಮಂತ್ರ ಹೇಳಿದ್ದನ್ನು ನೂರಾರು ಮಂದಿ ಎಲ್ಲರಿಗೂ ತಿಳಿಯುವಂತೆ ಮತ್ತೆ ಮತ್ತೆ ಹೇಳಿದರು.