ಎಲ್ಲರಿಗೂ ಜನಪ್ರೀತಿ ಇದ್ದರೂ ರಾಮರಿಗೇ ಆದ್ಯತೆ. ತಂದೆ-ತಾಯಿಗಳಿಗೆ ಅಚ್ಚು ಮೆಚ್ಚು, ಅಂತೆಯೇ ಲಕ್ಷ್ಮಣನಿಗೂ! ರಾಮ-ಲಕ್ಷ್ಮಣರದು ಜೋಡಿಯಾದಂತೆ ಭರತ-ಶತ್ರುಘ್ನರದೂ. ನಾಲ್ವರು ಮಕ್ಕಳ ಆಟ ಪಾಠಗಳಲ್ಲಿ ಮೈಮರೆತ ದಶರಥನಿಗೆ ವರ್ಷಗಳು ಹಾರಿ ಹೋದವು. ಹದಿನೈದು ವರ್ಷಗಳೇ ಮುಗಿದು ಹೋಯಿತು. ಆಗಲೇ ಅಪ್ಪನಿಗೆ ಮಕ್ಕಳ ಮದುವೆ ಮಾಡಬೇಕೆಂಬ ಆತುರ. ಅದನ್ನೇ ಚಿಂತಿಸುತ್ತ ಆಸ್ಥಾನದಲ್ಲಿದ್ದ ದಶರಥ. ಇದ್ದಕ್ಕಿದ್ದಂತೆಯೇ ಆಸ್ಥಾನದಲ್ಲಿ ವಿದ್ಯುತ್ ಸಂಚಾರ. ಸಡಗರ, ಸಂಭ್ರಮ, ಭಯ, ಆತಂಕಗಳೆಲ್ಲ ಒಟ್ಟಾಗಿ; ತೀವ್ರವಾಗಿ; ವಿದ್ಯುತ್ತಿನಂತೆ ತೀಕ್ಷ್ಣವಾಗಿ ಹರಿದು ಬಂತು ದಶರಥನ ಕಿವಿಗೆ. "ಮಹಾಸ್ವಾಮಿ, ಋಷಿಗಳು, ಅಲ್ಲಲ್ಲ, ಬ್ರಹ್ಮರ್ಷಿಗಳು, ವಿಶ್ವಮಿತ್ರ ಬ್ರಹ್ಮರ್ಷಿಗಳು ಬರುತ್ತಿದ್ದಾರಂತೆ. ಪುರ ಪ್ರವೇಶವನ್ನು ಮಾಡಿದ್ದಾರಂತೆ. ಮುಂದಾಗಿ ಅವರ ಶಿಷ್ಯರು ಅನಲತೀರ್ಥರು ಸುದ್ದಿ ತಂದಿದ್ದಾರೆ. " ತಡೆದು ತಡೆದು ಹೇಳಿದ ದ್ವಾರಪಾಲಕ. ವಿಶ್ವಮಿತ್ರರ ಹೆಸರು ಕೇಳುತ್ತಿದ್ದಂತೆಯೇ ಎಲ್ಲರಿಗೂ ಒಂದು ವಿಚಿತ್ರವಾದ ಆತಂಕ.